ಆಂಗ್ಲ ಮಾಧ್ಯಮದಲ್ಲೂ ಕನ್ನಡದ ಕಂಪು ಹರಡಲಿ: ರವೀಂದ್ರ ರೈ ಉಳಿದೊಟ್ಟು
ಕೊಣಾಜೆ: ಆಂಗ್ಲ ಮಾಧ್ಯಮ ಶಾಲೆಯಲ್ಲೂ ಕನ್ನಡ ನಾಡು ನುಡಿ ಸಂಸ್ಕೃತಿಯ ಕಾರ್ಯಕ್ರಮಗಳು ನಿರಂತರ ನಡೆಯಲಿ. ತನ್ಮೂಲಕ ಕನ್ನಡದ ಕಂಪು ಹರಡಲಿ ಎಂದು ಕರ್ನಾಟಕ ಸರಕಾರದ ಅಲೆಮಾರಿ ಅರೆಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಅವರು ಮಂಗಳವಾರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಕೊಣಾಜೆ ಕೆಳಗಿನಮನೆ ಅಚ್ಯುತಗಟ್ಟಿಯವರ ಮನೆಯಂಗಳದಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು 67 ಹಣತೆಗಳನ್ನು ಬೆಳಗಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ರಾಜಕೀಯದ ಶಕ್ತಿ ಪಡೆಯಬೇಕಿದೆ: ಡಾ.ಕುಂಬ್ಳೆ
ತಮಿಳುನಾಡಿನಲ್ಲಿ ತಮಿಳು ಭಾಷೆ ರಾಜಕೀಯದ ಶಕ್ತಿಯನ್ನು ಪಡೆದಂತೆ ಕರ್ನಾಟಕದಲ್ಲಿ ಜಾತಿ ಧರ್ಮಗಳ ರಾಜಕಾರಣ ದೂರವಾಗಿ ಕನ್ನಡ ಭಾಷಾಭಿಮಾನದ ರಾಜಕಾರಣ ಬೆಳೆಯಬೇಕಿದೆ ಎಂದು ಡಾ.ಧನಂಜಯ ಕುಂಬ್ಳೆ ಹೇಳಿದರು.
ಅಂಗಳ ಎಲ್ಲರೂ ಸೇರುವ, ತಂತಮ್ಮ ಸುಖಕಷ್ಟಗಳನ್ನು ಹಂಚಿಕೊಳ್ಳುವ ಸ್ಥಳ. ಇಂದು ನಾವು ನಮ್ಮ ನುಡಿ ಸಂಸ್ಕೃತಿಯ ಅಂಗಳಕ್ಕೆ ಬಂದು ನೆಮ್ಮದಿಯ ಕ್ಷಣಗಳನ್ನು ಕಂಡುಕೊಳ್ಳಬೇಕಿದೆ. ಸಾಹಿತ್ಯ ಪರಿಷತ್ತಿಗೆ ಕನ್ನಡವೇ ಪಕ್ಷ, ಕನ್ನಡವೇ ಧರ್ಮ . ಈ ಆಶಯದಿಂದ ಉಳ್ಳಾಲ ತಾಲೂಕು ಕಸಾಪ ಮನೆಯಂಗಳದಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಕೊಲ್ಯ ಭಗವತಿ ವಿದ್ಯಾಕೇಂದ್ರದ ಅಧ್ಯಕ್ಷ ಸದಾಶಿವ ಉಳ್ಳಾಲ, ಕೋಟೆಕಾರ್ ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕ ಕೊಣಾಜೆ ಕೆಳಗಿನ ಮನೆಯ ಅಚ್ಯುತ ಗಟ್ಟಿಯವರನ್ನು ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.
ಕಸಾಪ ಉಳ್ಳಾಲ ಘಟಕದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು. ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಹರೇಕಳ ರಾಮಕೃಷ್ಣ ಶಾಲೆಯ ಅಧ್ಯಾಪಕ ರವಿಶಂಕರ್, ಮಂಗಳೂರು ವಿವಿಯ ಶ್ರೀವಾಣಿ ಕಾಕುಂಜೆ ಕನ್ನಡ ಹಾಡುಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ