ಬೆಂಗಳೂರು: ‘ವಿನ್ಯಾಸ ಕ್ಷೇತ್ರದಲ್ಲಿ ನೀವು ರಚಿಸುವ ರೇಖಾಚಿತ್ರಗಳು ಕೇವಲ ಆರಂಭವಷ್ಟೆ; ನಿಮ್ಮ ದೃಷ್ಟಿಕೋನವನ್ನು ನೀವು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದರಲ್ಲಿಯೇ ನಿಜವಾದ ಪಾಂಡಿತ್ಯ ಅಡಗಿದೆ. ಅದರಲ್ಲಿ ಯಶಸ್ವಿಯಾಗಲು, ನೀವು ಉತ್ತಮವಾಗಿ ಮನವೊಲಿಸುವ ಕೌಶಲ್ಯಯುತ ಭಾಷಣಕಾರರಾಗಿರಬೇಕು ಮತ್ತು ಸಹಾನುಭೂತಿಯುಳ್ಳ ಕೇಳುಗರಾಗಿರಬೇಕು’ ಎಂದು ಭಾರತ ಸರ್ಕಾರದ ಜವಳಿ ಸಚಿವಾಲಯದ, ಬೆಂಗಳೂರಿನ ನೇಕಾರರ ಸೇವಾ ಕೇಂದ್ರದ ಉಪ ನಿರ್ದೇಶಕ ಡಾ. ಸಿ. ಪ್ರಭಾಕರನ್ ಅವರು ನುಡಿದರು.
ಅವರು ಇಲ್ಲಿನ ನಿಟ್ಟೆ ಸ್ಕೂಲ್ ಆಫ್ ಫ್ಯಾಶನ್ ಟೆಕ್ನಾಲಜಿ ಮತ್ತು ಇಂಟೀರಿಯರ್ ಡಿಸೈನ್ ಸಂಸ್ಥೆಯ 2022-2025ರ ಬ್ಯಾಚ್ನ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
"ಇಂದು ಪದವಿ ಪಡೆಯುತ್ತಿರುವ ನೀವು, ಸಾಮಾನ್ಯ ನಾಗರಿಕರಿಂದ ಜವಾಬ್ದಾರಿಯುತ ನಾಗರಿಕರಾಗಿ ಪರಿವರ್ತನೆಗೊಳ್ಳುತ್ತಿದ್ದೀರಿ. ಸಮಾಜದಿಂದ ಪ್ರಯೋಜನ ಪಡೆದ ನೀವು, ಈಗ ಅದಕ್ಕೆ ಮರಳಿ ಸೇವೆ ಸಲ್ಲಿಸುವ ಸಮಯ ಬಂದಿದೆ" ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರ್ಯಾಂಕ್ ವಿಜೇತರಿಗೆ ಸನ್ಮಾನ
ಸಮಾರಂಭದಲ್ಲಿ ಫ್ಯಾಷನ್ ಮತ್ತು ಅಪೆರೆಲ್ ಡಿಸೈನ್ ಹಾಗೂ ಇಂಟೀರಿಯರ್ ಡಿಸೈನ್ ಮತ್ತು ಡೆಕೋರೇಷನ್ ವಿಭಾಗದ ಒಟ್ಟು 75 ಸ್ನಾತಕ, ಸ್ನಾತಕೋತ್ತರ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್ಯಾಂಕ್ಗಳನ್ನು ಪಡೆದ ಚಿತ್ರಾ ಎನ್, ಪಿ. ಐಶ್ವರ್ಯ ರೆಡ್ಡಿ, ತನ್ವಿ ಮಲ್ಲಿಕಾರ್ಜುನ ಮತ್ತು ರಂಜನಾ ವೆಂಕಟೇಶ್ ಹಾಗೂ ಸಂಸ್ಥೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಭಾರತೀಯ ಜವಳಿ ಪರಂಪರೆಯ ರಕ್ಷಕರಾಗಿ: ಪ್ರಸಾದ್ ಬಿದಪ್ಪ
ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಸಿದ್ಧ ಫ್ಯಾಷನ್ ಸ್ಟೈಲಿಸ್ಟ್ ಮತ್ತು ನೃತ್ಯ ಸಂಯೋಜಕ ಪ್ರಸಾದ್ ಬಿದಪ್ಪ ಮಾತನಾಡಿ, ‘ಪದವೀಧರರಾಗಿ, ನೀವು ಭಾರತದ ಜವಳಿ ಪರಂಪರೆಯ ರಕ್ಷಕರು. ಕೃತಕವಾದ ಅಡ್ಡದಾರಿಗಳನ್ನು ತಿರಸ್ಕರಿಸಿ; ಬದಲಾಗಿ, ನಮ್ಮ ಪ್ರಾಚೀನ ಕಲೆ ಮತ್ತು ಜಾಗತಿಕ ವಿನ್ಯಾಸ ಗುಣಮಟ್ಟವನ್ನು ಬೆಸೆಯುವ ಮೂಲಕ ವಿಶ್ವ ವೇದಿಕೆಯನ್ನು ಮುನ್ನಡೆಸಿ. ನಮ್ಮ ಸಂಪ್ರದಾಯಗಳ ಮೂಲಕ ನಾವೀನ್ಯತೆಯನ್ನು ತರುವ ಮತ್ತು ನಮ್ಮ ನೇಕಾರರಿಗೆ ಮಾರ್ಗದರ್ಶನ ನೀಡುವ ಮೂಲಕ, ಭಾರತೀಯ ಕರಕುಶಲ ಕಲೆ ಜಾಗತಿಕ ಫ್ಯಾಷನ್ ರಾಜಧಾನಿಗಳಲ್ಲಿ ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ಸಾಬೀತುಪಡಿಸಿ' ಎಂದರು.
ಯಶಸ್ಸಿಗೆ ಶಿಸ್ತು ಮುಖ್ಯ: ನೇಹಾ ಕುಮಾರಿ
ಮತ್ತೋರ್ವ ಗೌರವಾನ್ವಿತ ಅತಿಥಿ, ರಿಲಯನ್ಸ್ ಫ್ಯಾಷನ್ ಅಂಡ್ ಲೈಫ್ ಸ್ಟೈಲ್ನ ಲರ್ನಿಂಗ್ ಆಂಡ್ ಡೆವಲಪ್ಮೆಂಟ್ ಮುಖ್ಯಸ್ಥೆ ನೇಹಾ ಕುಮಾರಿ ಮಾತನಾಡಿ, ‘ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವಾಗ ಬಿದಿರಿನ ಮರವನ್ನು ನೆನಪಿಟ್ಟುಕೊಳ್ಳಿ: ನಿಜವಾದ ಯಶಸ್ಸು ಆಳವಾದ ಬೇರುಗಳು ಮತ್ತು ಶಿಸ್ತಿನ ಮೇಲೆ ನಿರ್ಮಾಣವಾಗುತ್ತದೆಯೇ ಹೊರತು ರಾತ್ರೋರಾತ್ರಿ ಬರುವುದಿಲ್ಲ. ಹಿಂಜರಿಕೆಯನ್ನು ಬಿಟ್ಟು, ನಿಮ್ಮ ಅಡಿಪಾಯದ ಮೇಲೆ ನಂಬಿಕೆಯಿಡಿ ಮತ್ತು ನಮ್ಮ ಭಾರತೀಯ ಪರಂಪರೆಯ ಹೆಮ್ಮೆ ಹಾಗೂ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಿರಿ' ಎಂದು ಆಶಿಸಿದರು.
ಜೀವನದಲ್ಲಿ 4 ‘ಪಿ’ ಸೂತ್ರ ಅಳವಡಿಸಿಕೊಳ್ಳಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ನಾಗರಾಜ್ ಅವರು, ಹೊಸ ಪದವೀಧರರು ಯಾವಾಗಲೂ ಉತ್ಸಾಹದಿಂದಿರಲು ಮತ್ತು ಜೀವನದಲ್ಲಿ 4 ‘ಪಿ’ಗಳನ್ನು ಅಂದರೆ ಪ್ಯಾಶನ್ (ಆಸಕ್ತಿ), ಪ್ಲಾನಿಂಗ್ (ಯೋಜನೆ), ಪ್ರಿಪರೇಷನ್ (ಸಿದ್ಧತೆ) ಮತ್ತು ಪ್ರೆಸೆಂಟೇಶನ್ (ಪ್ರಸ್ತುತಿ) ನೆನಪಿನಲ್ಲಿಟ್ಟುಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜಾ ಉಪಸ್ಥಿತರಿದ್ದರು. ಸಮಾರಂಭದ ಆರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಡಾ. ಸಂಧ್ಯಾ ರವಿ ಸರ್ವರನ್ನೂ ಸ್ವಾಗತಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಅದ್ಭುತ ಫ್ಯಾಷನ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ರಂಗು ನೀಡಿದವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


