ಮಂಗಳೂರು: ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಭಾರತೀ ಎಜುಕೇಶನ್ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 3ನೇ ವರ್ಷದ ಶಂಕರಶ್ರೀ ವಸಂತ ವೇದಪಾಠ ಶಾಲೆಗೆ ಇಂದು (ಏ.19 ಭಾನುವಾರ) ಚಾಲನೆ ನೀಡಲಾಯಿತು.
ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿಯ ಮಾರ್ಗದರ್ಶನ ನೀಡಬೇಕೆನ್ನುವ ತುಡಿತ, ಪ್ರೀತಿ, ಬದ್ಧತೆಯಿಂದ ಒಗ್ಗಟ್ಟಾಗಿ ಸಂಘಟನೆಗಳ ಮೂಲಕ ಹೊರಹೊಮ್ಮಿದ ವಸಂತ ವೇದಪಾಠಶಾಲೆ ಮೂರನೇ ವರ್ಷಕ್ಕೆ ಇನ್ನಷ್ಟು ದೃಢವಾಗಿ ಹೆಜ್ಜೆಯಿಟ್ಟಿದೆ. ಪೂರಕವಾಗಿ ಈ ವರ್ಷ ಬಾಲಕಿಯರಿಗೂ ಪರಂಪರಾ ಶಿಬಿರವನ್ನು ಆಯೋಜಿಸಿದೆ. ಉತ್ತಮ ಅಡಿಪಾಯವನ್ನು ಹಾಕುವ, ಭವಿಷ್ಯ ಭದ್ರಗೊಳಿಸುವ ಈ ಕಾರ್ಯಕ್ಕೆ ಅತ್ಯುತ್ತಮ ಸಹಕಾರ, ಸ್ಪಂದನೆ ದೊರಕುತ್ತಿದೆ.
ಉದ್ಘಾಟನಾ ಸಮಾರಂಭದ ಬಳಿಕ ಸಂಧ್ಯಾವಂದನೆ ಮಹತ್ವ, ಕರ್ತವ್ಯ, ಪ್ರಯೋಜನ, ಹೆತ್ತವರ ಜವಾಬ್ದಾರಿ ಬಗ್ಗೆ ವಿದ್ವಾಂಸರಾದ ಶ್ರೀ ಡಾ.ವಿನಾಯಕ ಭಟ್ಟ ಗಾಳಿಮನೆ ಅವರು ಮಾಡಿದ ಉಪನ್ಯಾಸ ಹೊಸ ಚೈತನ್ಯ ನೀಡಿತು. ಇಲ್ಲಿ ವೇದ ಪಾಠ ನಿರಂತರ. ವಿವಿಧ ರೀತಿಯ ತರಬೇತಿ, ಸ್ತೋತ್ರ ಪಠಣ, ಆಟ, ಪಾಠ, ಭೋಜನ, ತಿಂಡಿ ಎಲ್ಲವೂ ನಿತ್ಯನೂತನ.
ನಮ್ಮ ಮಕ್ಕಳು ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕೆನ್ನುವ ಆಶಯದೊಂದಿಗೆ ಹಲವಾರು ಮಂದಿ ಶ್ರಮಿಸುತ್ತಿದ್ದಾರೆ. ಸ್ವಾರ್ಥವಿಲ್ಲ, ಹೆಸರಿಗಾಗಿಯಲ್ಲ, ಸೈಲೆಂಟ್ ಆಗಿ ತನು ಮನ ಧನಗಳಿಂದ ಸೇವೆ ಸಲ್ಲಿಸುವ ಅದೆಷ್ಟೋ ಮನಸ್ಸುಗಳ ಬಲದಿಂದ ವೇದಪಾಠಶಾಲೆ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ. ಇದೀಗ 70 ಮಕ್ಕಳಿರುವ ವೇದಪಾಠಶಾಲೆ ಮತ್ತು ಮೇ 7ರಿಂದ ಮೇ 17ರವರೆಗೆ 20 ಬಾಲಕಿಯರಿರುವ ಪರಂಪರಾ ಶಿಬಿರ ಮುನ್ನಡೆಯುತ್ತಿದೆ. ಸ್ಪಂದನ, ಸಹಕಾರ ನಿರಂತರವಾಗಿರಲೆಂಬ ಆಶಯವಿದೆ.

