ಮಹಾಭಾರತ ದರ್ಶನ” ಕೃತಿ ಬಿಡುಗಡೆ– ಗಾನ ಕಮಲ–2026 ಗೌರವ ಪ್ರದಾನ

Upayuktha
0

“ನರಸಿಂಹ ಶತನಾದಾರ್ಚನಮ್” ಸಂಗೀತ–ಸಾಹಿತ್ಯ ಸಂಭ್ರಮ ಯಶಸ್ವಿ





ಬೆಂಗಳೂರು: ಗಾನಕಮಲ ಅಕಾಡೆಮಿ (ನೊಂ) ಹಾಗೂ ಬಿ.ಹೆಚ್.ಎಸ್. ಉನ್ನತ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ “ನರಸಿಂಹ ಶತನಾದಾರ್ಚನಮ್” ವಿಶೇಷ ಸಂಗೀತ–ಸಾಹಿತ್ಯ ಕಾರ್ಯಕ್ರಮವು ಜಯನಗರದ ವಿಜಯ ಪದವಿ ಪೂರ್ವ ಕಾಲೇಜಿನ ಶ್ರೀ ರಾಮಸ್ವಾಮಿ ಸಭಾಂಗಣದಲ್ಲಿ ವೈಭವದಿಂದ ನೆರವೇರಿತು.


ಗಂಜಿಗುಂಟೆ ಶ್ರೀ ನರಸಿಂಹಮೂರ್ತಿ ಅವರ ಶತಮಾನೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ನಾಡೋಜ ಡಾ. ಹಂಪ ನಾಗರಾಜಯ್ಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ  ಮೈಸೂರಿನ ಮಹಿಮಾ ಪ್ರಕಾಶನ ಪ್ರಕಟಿಸಿರುವ ಪುರಾಣ ಭಾಸ್ಕರ ಡಾ. ಕಂಬಾಲೂರು ವೆಂಕಟೇಶ ಆಚಾರ್ಯ (ಪ್ರಸ್ತುತ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು) ರಚಿಸಿದ “ಮಹಾಭಾರತ ಅಂಡ್ ವೆರಿಯೇಷನ್ಸ್” ಕೃತಿಯ ಕನ್ನಡ ಅನುವಾದವಾದ “ಮಹಾಭಾರತ ದರ್ಶನ” ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.


ಕೃತಿಯ ಕುರಿತು ಮಾತನಾಡಿದ ಹಂಪ ನಾಗರಾಜಯ್ಯ ಅವರು, “ಈ ಗ್ರಂಥವು ತೌಲನಿಕ ಸಾಹಿತ್ಯ ಅಧ್ಯಯನದ ಆಳ, ಪುರಾಣಪರಿಜ್ಞಾನ ಮತ್ತು ಭಾಷಾತ್ಮಕ ಸಂವೇದನೆಗಳ ಸಮನ್ವಯವಾಗಿದೆ. ವ್ಯಾಸ, ಪಂಪ ಮತ್ತು ಪೆರುಂದೇವನಾರರ ಕೃತಿಗಳಲ್ಲಿನ ಸಾದೃಶ್ಯ–ವೈಶಿಷ್ಟ್ಯಗಳನ್ನು ಆಳವಾಗಿ ವಿಶ್ಲೇಷಿಸಿರುವ ಈ ಕೃತಿ ದಕ್ಷಿಣ ಭಾರತೀಯ ಸಾಹಿತ್ಯ ಪರಂಪರೆಯ ಅರಿವಿಗೆ ಅನಿವಾರ್ಯವಾದ ಪಠ್ಯ” ಎಂದು ಅಭಿಪ್ರಾಯಪಟ್ಟರು. ಈ ಶ್ರೇಷ್ಠ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಜನತೆಗೆ ತಲುಪಿಸಿದ ಪ್ರೊ. ಎಸ್. ಬಿಳಿಗಿರಿವಾಸನ್ ಅವರ ಸೇವೆಯನ್ನು ಅವರು ಪ್ರಶಂಸಿಸಿದರು.


ಈ ಸಂದರ್ಭದಲ್ಲಿ ಪ್ರೊ. ಎಸ್. ಬಿಳಿಗಿರಿವಾಸನ್ ಅವರಿಗೆ ಅವರ ಸಾಹಿತ್ಯಸೇವೆಯನ್ನು ಗುರುತಿಸಿ “ಗಾನ ಕಮಲ–2026” ಸ್ಮಾರಕ ಪುರಸ್ಕಾರವನ್ನು ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು, “ಅನುವಾದ ಕಾರ್ಯವು ಭಾಷೆಗಳ ನಡುವೆ ಸೇತುವೆಯಾಗಿದ್ದು, ಜ್ಞಾನ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಮಹತ್ವದ ಸಾಧನ” ಎಂದು ಹೇಳಿದರು.


ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ನಡೆದ “ಗಾನ ಸುಧೆ” ಸಂಗೀತ ಕಾರ್ಯಕ್ರಮದಲ್ಲಿ ವಿ. ಗುರುರಾಜ್ ಅವರ ಮನಮೋಹಕ ಗಾಯನ ಶ್ರೋತೃಗಳನ್ನು ರಂಜಿಸಿತು. ವಿ. ವಿಭುದೇಂದ್ರ ಸಿಂಹ (ಪಿಟೀಲು) ಹಾಗೂ ವಿ. ವರದೇಂದ್ರ ಸಿಂಹ (ಮೃದಂಗ) ಅವರ ಸಹವಾದ್ಯಗಳು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರಗು ನೀಡಿದವು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಟಿ. ಎ. ಬಾಲಕೃಷ್ಣ ಅವರು ಗಾನಕಮಲ ಅಕಾಡೆಮಿಯ ಸಾಂಸ್ಕೃತಿಕ ಸೇವೆಯನ್ನು ಮೆಚ್ಚಿ, ಪರಂಪರೆ ಮತ್ತು ನವೀನತೆಯ ಸಮನ್ವಯದಿಂದಲೇ ಸಂಸ್ಕೃತಿಯ ಉಳಿವು ಸಾಧ್ಯವೆಂದು ಅಭಿಪ್ರಾಯಪಟ್ಟರು.


ವಿಶೇಷ ಆಹ್ವಾನಿತರಾಗಿ ಡಾ. ಅನಂತಪದ್ಮನಾಭ ರಾವ್, ಡಾ. ಬಿ. ಎಸ್. ರಾಘವೇಂದ್ರ, ಡಾ. ಕೆ. ಶೇಷಮೂರ್ತಿ, ಡಾ. ಟಿ. ವಿ. ರಾಜು ಹಾಗೂ ಪ್ರೊ. ಜಿ. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.


ಪ್ರೊ. ಕೆ.ವಿ. ರಾಮರಾವ್ ಅಭಿನಂದನಾ ಪತ್ರವನ್ನು ವಾಚಿಸಿದರು. ಕಾರ್ಯಕ್ರಮವನ್ನು ಡಾ. ಎಸ್. ಎಲ್. ಮಂಜುನಾಥ್ ನಿರೂಪಿಸಿದರು. ಆಯೋಜಕರಾದ ನಂದಕುಮಾರ, ಗುರುರಾಜ್ ಹಾಗೂ ಶಾಮಸುಂದರ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top