ಮಂಗಳೂರು: ಮಧ್ಯ ಪ್ರಾಚ್ಯ ದೇಶದಲ್ಲಿ ಅಮೆರಿಕ ಇರಾನ್ ನಡುವೆ ಯುದ್ಧದ ಕೇಳಿ ತಣ್ಣಗಾಗುವಂತೆ ಕಾಣುತ್ತಿಲ್ಲ. ಈ ನಡುವೆ ಭಾರತದಲ್ಲಿ ಅಡುಗೆ ಅನಿಲ ಕೊರತೆಯಿಂದ ಹೋಟೆಲು ಉದ್ಯಮ ಸೇರಿದಂತೆ ಬಹಳಷ್ಟು ಉದ್ಯಮಗಳು ತತ್ತರಿಸಿ ಹೋಗಿವೆ.
ವಲಸೆ ಕಾರ್ಮಿಕರಿಗೆ ಸಿಲಿಂಡರ್ ಅಭಾವ ಎದುರಾಗಿ ವಾಪಸು ಕೆಲಸಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕಾರ್ಮಿಕರ ಅನುಕೂಲಕ್ಕಾಗಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಯ ಮಂಗಳೂರು ಎಲ್ಪಿಜಿ ಪ್ರದೇಶದ ವತಿಯಿಂದ, ಅದರ ಭಾರತ್ ಗ್ಯಾಸ್ ವಿತರಕರಾದ ಕಾಮಧೇನು ಗ್ಯಾಸ್ ಏಜೆನ್ಸೀಸ್ ಸಹಯೋಗದಲ್ಲಿ ಇಂದು ಕದ್ರಿ ಮಾರ್ಕೆಟ್ ಮಲ್ಲಿಕಟ್ಟೆ ಪ್ರದೇಶದಲ್ಲಿ ವಲಸೆ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗಾಗಿ 5 ಕೆಜಿ ಎಫ್ಟಿಎಲ್ (FTL) ಗ್ಯಾಸ್ ಸಂಪರ್ಕ ಶಿಬಿರವನ್ನು ಆಯೋಜಿಸಲಾಯಿತು.
ಈ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ, ಹೊಸ 5 ಕೆಜಿ ಎಫ್ಟಿಎಲ್ ಯೋಜನೆ ಕುರಿತು ಆಸಕ್ತಿ ತೋರಿದರು. ಸ್ಥಳದಲ್ಲೇ ಅನೇಕರು ಯೋಜನೆ ಬಗ್ಗೆ ಮಾಹಿತಿ ಪಡೆದು, ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದರು.
ಶಿಬಿರದಲ್ಲಿ ಪ್ರದೇಶ ವ್ಯವಸ್ಥಾಪಕರಾದ ಸಂದೀಪ್ ಕುಮಾರ್ ರೈನಾ, ಹಿರಿಯ ಮಾರಾಟ ಅಧಿಕಾರಿ ಅನಂತ ರಾವ್ ಹಾಗೂ ವಿತರಕರಾದ ದಿನೇಶ್ ಶೆಟ್ಟಿ ಉಪಸ್ಥಿತರಿದ್ದು, 5 ಕೆಜಿ ಎಫ್ಟಿಎಲ್ ಸಿಲಿಂಡರ್ನ ಪ್ರಯೋಜನಗಳು ಹಾಗೂ ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಈ ಯೋಜನೆಯಿಂದ ಕಡಿಮೆ ವೆಚ್ಚದಲ್ಲಿ, ಸುಲಭವಾಗಿ ಗ್ಯಾಸ್ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಸ್ಥಳದಲ್ಲೇ ಹಲವಾರು ಅರ್ಜಿಗಳು ಹಾಗೂ ವಿಚಾರಣೆಗಳನ್ನು ದಾಖಲಿಸಲಾಯಿತು.
ಒಟ್ಟಾರೆ, ಈ ಶಿಬಿರವು ಜನಸಾಮಾನ್ಯರಲ್ಲಿ ಉತ್ತಮ ಸ್ಪಂದನೆ ಪಡೆದುಕೊಂಡಿದ್ದು, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಇದು ಉಪಯುಕ್ತವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

