ಉಜಿರೆ: ಕರ್ನಾಟಕ ಶಾಸ್ತ್ರೀಯ ಸಂಗೀತದ ಸೊಬಗು

Upayuktha
0


ಉಜಿರೆ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು  ಸಂಗೀತ ರಸದ ಸಂಗಮವಾಗಿ ಭವ್ಯವಾಗಿ ಮೂಡಿಬಂದವು. ಸುದರ್ಶನ ಸಭಾಭವನ ವೇದಿಕೆಯಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು.


ಕಾರ್ಯಕ್ರಮದಲ್ಲಿ ವಿದುಷಿ ಶ್ರೇಯಾ ಕೊಡುತ್ತಾಯ ಸುರತ್ಕಲ್ ಅವರು ಮನಮೋಹಕವಾಗಿ ಗಾಯನ ಪ್ರಸ್ತುತಪಡಿಸಿರು.  'ಜಯ ಜಯ ಜಾನಕಿಕಾಂತ ಜಯ ಸಾಧುವಂತ ಜಯ ಭಾಗ್ಯವಂತ' ಎಂಬ ಕೀರ್ತನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 


ಈ ಗೀತೆಯ ಮೂಲಕ ಸೀತಾದೇವಿಯ ಪತಿಯಾದ ಶ್ರೀರಾಮನ ದೈವೀ ಮಹಿಮೆ, ಧರ್ಮನಿಷ್ಠೆ, ಶೌರ್ಯ ಹಾಗೂ ಕರುಣಾಮಯ ಸ್ವಭಾವವನ್ನು ಭಕ್ತಿಭಾವದಿಂದ ತಮ್ಮ ಮಧುರ ಕಂಠದಲ್ಲಿ ವರ್ಣಿಸಿದರು.


'ಜನಕೀಕಾಂತ' ಎಂಬ ಪದವು ಸೀತೆಯ ಪ್ರಿಯತಮನಾದ ರಾಮನನ್ನು ಸೂಚಿಸುವುದರೊಂದಿಗೆ, ರಾಮನು ರಾಕ್ಷಸ ಸಂಹಾರಕ, ರಾಘವಕುಲ ತಿಲಕ ಹಾಗೂ ಭಕ್ತರ ಪಾಲಿನ ದೈವಸ್ವರೂಪ ಎಂಬ ಸಂದೇಶವನ್ನು ಗಾಯನದ ಮೂಲಕ ಮನೋಜ್ಞವಾಗಿ ಅಭಿವ್ಯಕ್ತಿಸಿದರು.


ಇದೇ ವೇಳೆ ತ್ಯಾಗರಾಜರ ರಚನೆಯಾದ 'ಸಂಗೀತ ಜ್ಞಾನಮು ಭಕ್ತಿ ವಿನ ಸನ್ಮಾರ್ಗ ಮುಗಲದೆ ಓ ಮನಸ' ಎಂಬ ಧನ್ಯಾಸಿ ರಾಗದ ಕೃತಿಯನ್ನು ಸುಮಧುರವಾಗಿ ಹಾಡಿದರು. ಭಕ್ತಿ ಇಲ್ಲದೆ ಕೇವಲ ಸಂಗೀತ ಜ್ಞಾನದಿಂದ ಏನು ಪ್ರಯೋಜನ? ಭಗವಂತನ ಮೇಲಿನ ನಿಷ್ಠೆಯಿಲ್ಲದೆ ಕೇವಲ ರಾಗ-ತಾಳಗಳ ಪಾಂಡಿತ್ಯದಿಂದ ಮೋಕ್ಷ ಸಾಧ್ಯವೇ ಎಂಬ ತಾತ್ವಿಕ ಅರ್ಥವನ್ನು ಈ ಕೃತಿಯ ಮೂಲಕ ಶ್ರೋತೃಗಳ ಮನದಲ್ಲಿ ಮೂಡಿಸಿದರು.


ಸಂಗೀತದ ನಿಜವಾದ ಉದ್ದೇಶ ಭಗವಂತನ ಸ್ಮರಣೆ ಎಂಬ ಸಂದೇಶವನ್ನು ಅವರು ತಮ್ಮ ಗಾಯನದಲ್ಲಿ ಸ್ಪಷ್ಟಪಡಿಸಿದರು. ರಾಗ, ತಾಳ ಮತ್ತು ಗಮಕಗಳ ತಾಂತ್ರಿಕ ಜ್ಞಾನ ಇದ್ದರೂ ಭಕ್ತಿ ಇಲ್ಲದಿದ್ದರೆ ಸಂಗೀತಕ್ಕೆ ಪೂರ್ಣತೆ ಇಲ್ಲ ಎಂಬ ಅರ್ಥವನ್ನು ಈ ಕೃತಿಯ ಮೂಲಕ ಅಭಿವ್ಯಕ್ತಿಸಿದರು.


ಕೊನೆಯಲ್ಲಿ 'ಕೃಷ್ಣ ನೀ ಬೇಗನೆ ಬಾರೋ ಮುಖವ ತೋರೋ' ಎಂಬ ಕೃತಿಯನ್ನು ಹಾಡಿ ಕಾರ್ಯಕ್ರಮಕ್ಕೆ ಭಕ್ತಿಭಾವಪೂರ್ಣ ಮೆರಗು ನೀಡಿದರು.


ಹಿನ್ನೆಲೆಯಲ್ಲಿ ವೈಯಲಿನ್‍ನಲ್ಲಿ ವಿದುಷಿ ಸೃತಿ, ಮೃದಂಗದಲ್ಲಿ ಪುತ್ತೂರು ನಿಕ್ಷೀತ್ ಹಾಗೂ ತಾಂಬೂರಾದಲ್ಲಿ ಸುಜಾತಾ ಸುರತ್ಕಲ್ ಸಹಕರಿಸಿದರು.


ವರದಿ: ಕಾವ್ಯಾ ಹೆಗ್ಡೆ

ಪೋಟೋ: ಪವನಕುಮಾರ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top