ತುಳಸಿ ವಿವಾಹ ಕಾರ್ತೀಕ ಮಾಸದಲ್ಲಿ ಬರುವ ಮಹತ್ವದ ಪೂಜೆ, ಕಾರ್ಯಕ್ರಮ. ಇದನ್ನು ಅದ್ದೂರಿ ಯಾಗಿ ಎಲ್ಲೆಡೆ ಆಚರಿಸುತ್ತಾರೆ.
ಹಿನ್ನೆಲೆ: ತುಳಸಿದೇವಿಯನ್ನು ಬೃಂದಾವನಿ ದೇವಿ ಎಂತಲೂ ಕರೆಯುತ್ತಾರೆ. ಬೃಂದಾ ಎಂಬುವಳು ಜಲoಧರ ಎಂಬ ರಾಕ್ಷಸನ ಮಡದಿಯಾಗಿದ್ದಳು. ಈ ರಾಕ್ಷಸನ ಉಪಟಳ ಬಹಳವಾದಾಗ, ದೇವತೆಗಳು ವಿಷ್ಣುವಿಗೆ ಏನಾದರೂ ಉಪಾಯ ಮಾಡಿ ರಾಕ್ಷಸನನ್ನು ಕೊಲ್ಲಬೇಕು ಎಂದರು. ಏಕೆಂದರೆ, ಎಷ್ಟೇ ಬಾರಿ ಯುದ್ಧ ಮಾಡಿದರೂ ಜಲಂಧರ ಗೆಲ್ಲುತ್ತಿದ್ದ. ಅದಕ್ಕೆ ಕಾರಣ, ಅವನ ಪತ್ನಿ ಬೃಂದಾಳ ಪತಿಭಕ್ತಿ. ಅವಳ ಅಚಲ ಪತಿವ್ರತ ನಿಯಮ ಅವನನ್ನು ಕಾಪಾಡಿ ಯುದ್ಧದಲ್ಲಿ ಗೆಲ್ಲುವಂತೆ ಮಾಡುತ್ತಿತ್ತು.
ಅದಕ್ಕೆ ವಿಷ್ಣು ಒಂದು ಉಪಾಯ ಮಾಡಿದ. ಇಲ್ಲಿ ದೇವತೆಗಳು ಅವನೊಂದಿಗೆ ಯುದ್ಧ ಮಾಡುವಾಗ, ಬೃಂದಾಳಲ್ಲಿಗೆ ವಿಷ್ಣುವು ಜಲಂಧರನ ವೇಷದಲ್ಲಿ ಅವಳ ಅರಮನೆಗೆ ಭೇಟಿಕೊಟ್ಟ. ಗಂಡನೇ ಗೆದ್ದು ಬಂದನೆಂದು ಸಂತೋಷದಿಂದ ಆರತಿ ಎತ್ತಿ ಒಳಗೆ ಕುಳ್ಳಿರಿಸಿ ಉಪಚಾರ ಮಾಡಿ ನಮಸ್ಕಾರ ಮಾಡಲು ಹೋದಾಗ, ಬಂದವರು ತನ್ನ ಪತಿಯಲ್ಲ ಎಂದು ತಿಳಿಯಿತು. ಕೋಪ ಆವೇಶದಿಂದ ಬೃಂದಾ, ವಿಷ್ಣುವಿಗೆ ಕಪ್ಪು ಬಣ್ಣದ ಶಿಲೆಯಾಗುವಂತೆ ಶಪಿಸಿದಳು. ಕೋಪ ಇಳಿದು ಸತ್ಯ ಸಂಗತಿ ತಿಳಿದಾಗ ವಿಷ್ಣುವಿನ ಕಾಲಿಗೆರಗಿ ಕ್ಷಮೆ ಕೇಳಿದಳು.
ವಿಷ್ಣುವು ಅವಳ ಪತಿಭಕ್ತಿಗೆ ಮೆಚ್ಚಿದ. ತುಳಸಿಗಿಡವಾಗಿ ಕೃಷ್ಣನ ಪೂಜೆಗೆ ಸದಾ ಸಲ್ಲುವಂತೆ ಆಶೀರ್ವಾದ ಮಾಡಿದ. ಅವಳು ತುಳಸಿ ರೂಪದಲ್ಲಿರುವಾಗ ಅವಳನ್ನು ಕೃಷ್ಣನಾಗಿ ವಿವಾಹವಾದ, ಆ ಕಾರಣದಿಂದ ಎಲ್ಲ ಕಡೆಗೂ ತುಳಸಿದೇವಿಯನ್ನು ವಿಷ್ಣುವಲ್ಲಭೆ, ಸೌಭಾಗ್ಯದಾಯಿನಿ ಎಂದು ಪೂಜಿಸುವ ಕ್ರಮವಿದೆ.
ತುಳಸಿ ಗಿಡದ ವಿಶೇಷತೆ:
ತುಳಸಿಗಿಡವನ್ನು ಮನೆಯಂಗಳದಲ್ಲಿ ಬೆಳೆಸಲು ಅನೇಕ ಕಾರಣಗಳಿವೆ. ತುಳಸಿಯ ಅನೇಕ ಭಾಗಗಳು ಔಷಧಿ ಗುಣವನ್ನು ಹೊಂದಿವೆ, ಇದರ ವಿಶಿಷ್ಟ ಸುವಾಸನೆ ಕ್ರಿಮಿ ಕೀಟಗಳನ್ನು ದೂರವಿರಿಸುತ್ತದೆ.
ಗ್ರಹಣ ಕಾಲದಲ್ಲಿ ನೀರನಲ್ಲಿ ತುಳಸಿ ಎಲೆಯನ್ನು ಹಾಕುವುದರಿಂದ ಹಾನಿಕಾರಕ ಕ್ರಿಮಿಗಳು ನಾಶ ವಾಗುತ್ತವೆ. ತುಳಸಿ ರಸ ನೆಗಡಿ ಕೆಮ್ಮಿಗೆ ದಿವ್ಯ ಔಷಧಿ. ಇದರ ಎಲೆಗಳನ್ನು ಹಾಕಿ ಕಷಾಯ ಮಾಡಿ ಸೇವಿಸಿದರೆ ನೆಗಡಿ ಕೆಮ್ಮು ಕಡಿಮೆಯಾಗುತ್ತದೆ.
ತುಳಸಿ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸರ್ವ ರೋಗ ನಿವಾರಿಣಿ, ಸೌಭಾಗ್ಯದಾತೆ ಎಂದು ತುಳಸಿಯನ್ನು ಕರೆಯುತ್ತಾರೆ.
ಚಾತುರ್ಮಾಸದಲ್ಲಿ ದೇವರು ಯೋಗ ನಿದ್ರೆಯಲ್ಲಿರುತ್ತಾನೆ. ನಾಲ್ಕು ತಿಂಗಳ ನಂತರ ಉತ್ಥಾನ ದ್ವಾದಶಿಯಿಂದ ಏಳುತ್ತಾನೆ ಎಂದು ಭಕ್ತರು ನಂಬುತ್ತಾರೆ. ಇಷ್ಟು ದಿನ ವ್ರತ ನಿಯಮಗಳಿಗೆ ವಿರಾಮ ಕೊಟ್ಟು ತುಳಸಿ ವಿವಾಹ ಮಾಡಿ ಸಂತೋಷಿತ್ತಾರೆ.
- ರೇಖಾ ಮುತಾಲಿಕ್, ಬಾಗಲಕೋಟ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ