ನವೆಂಬರ್ ತಿಂಗಳಲ್ಲಿ ಬರುವ ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿ ಹಬ್ಬ ಸಮೀಪಿಸಿದೆ. 5 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಬರುವ ಪ್ರಮುಖ ಪದ್ಧತಿ ಅಂದ್ರೆ, ಅಭ್ಯಂಗ ಸ್ನಾನ. ಅಂದರೆ ಎಣ್ಣೆ ಸ್ನಾನ. ನರಕ ಚತುರ್ದಶಿಯ ಹಿಂದಿನ ದಿನ ಸಂಜೆ, ಮನೆಯಲ್ಲಿರುವ ಬಿಂದಿಗೆಗೆ ಪೂಜೆ ಸಲ್ಲಿಸಿ, ಮರುದಿನ ದೇಹಕ್ಕೆ ಎಣ್ಣೆ ಹಚ್ಚಿ, ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸುವ ಪದ್ಧತಿ ಹಿಂದೂಗಳಲ್ಲಿದೆ.
•••••••••••••••••••••••••••••••••••••••••••••••••••
ನರಕಾಸುರನ ವಧೆಯ ಪ್ರತೀಕವಾಗಿ ಅಭ್ಯಂಗ ಸ್ನಾನ ಮಾಡಲಾಗುತ್ತದೆ ಎಂದು ಪೌರಾಣಿಕವಾಗಿ ಹೇಳಲಾಗುತ್ತದೆ. ಆದರೆ ಚತುರ್ದಶಿ ಎನ್ನುವಂಥದ್ದು, ನರಕಾಸುರನ ವಧೆಗಿಂತ, ಮೊದಲೇ ಇದ್ದಿದ್ದು. ಹಾಗಾಗಿ ಈ ದಿನವನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಹಾಗಾಗಿ ಅಭ್ಯಂಗ ಸ್ನಾನ ಮಾಡುವುದು ಕೂಡ, ನರಕಾಸುರನ ವಧೆಗೂ ಮುನ್ನವೇ ಆಚರಣೆಯಾಗಿದ್ದು, ಶ್ರೀಕೃಷ್ಣನಿಂದ ಮಹಾಭಾರತ ಕಾಲದಲ್ಲಿ ನರಕಾಸುರನ ಸಂಹಾರವಾಯಿತು ಆದರೆ, ಅದಕ್ಕೂ ಮುನ್ನವೇ, ಶ್ರೀಕೃಷ್ಣನೂ ಸೇರಿದಂತೆ, ಪೂರ್ವಜರು, ಅಭ್ಯಂಗ ಸ್ನಾನವನ್ನು ಮಾಡಿಯೇ, ದೀಪಾವಳಿ ಆಚರಿಸುತ್ತಿದ್ದರು.
ದೀಪಾವಳಿಯ ಹಬ್ಬದಲ್ಲಿ ಎಣ್ಣೆ ಸ್ನಾನಕ್ಕೆ (ಅಭ್ಯಂಜನ) ವಿಶೇಷವಾದ ಮಹತ್ವವಿದೆ. ನರಕ ಚತುರ್ದಶಿಯಂದು ಬೆಳಗ್ಗೆ ಎಲ್ಲರೂ ಎಣ್ಣೆಯ ಸ್ನಾನವನ್ನು ಮಾಡುವ ಮೂಲಕ ಹಬ್ಬದ ಆಚರಣೆಯನ್ನು ಪ್ರಾರಂಭಿಸುವುದು ವಾಡಿಕೆ. ಆ ದಿನ ತೈಲದಲ್ಲಿ ಲಕ್ಷ್ಮಿಯು ಮತ್ತು ಜಲದಲ್ಲಿ ಗಂಗೆಯು ನೆಲಸಿರುವಳೆಂಬ ನಂಬಿಕೆಯಿದೆ. ದೀಪಾವಳಿಯ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎಣ್ಣೆಯ ಸ್ನಾನವನ್ನು ಮಾಡುವುದರಿಂದ ಗಂಗಾ ಸ್ನಾನದ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ಪಾಪಗಳು ನಿವಾರಣೆಯಾಗಿ, ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇವೆಲ್ಲ ಪುರಾಣಗಳಲ್ಲಿ ಹೇಳಿರುವ ಭಕ್ತಿಯ ವಿಚಾರಗಳಾದರೆ ಆಯುರ್ವೇದದಲ್ಲಿಯೂ ಅಭ್ಯಂಜನ ಸ್ನಾನಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.
ಅಭ್ಯಂಜನ ಸ್ನಾನಕ್ಕಾಗಿ ಎಳ್ಳೆಣ್ಣೆ ಅಥವಾ ಹರಳೆಣ್ಣೆ ಯಾವುದನ್ನಾದರೂ ಸರಿ, ಚೆನ್ನಾಗಿ ಕಾಯಿಸಿ ನಮ್ಮ ದೇಹವು ತಡೆಯುವಷ್ಟು ಬಿಸಿಯಿಂದ ತಲೆಗೆ ಹಚ್ಚಿಕೊಳ್ಳಬೇಕು. ನೆಲದ ಮೇಲೆ ಆಸನದ ಮೇಲೆ ಕುಳಿತು ಅಥವಾ ಯಾವುದಾದರೂ ಮಣೆ ಹಾಕಿಕೊಂಡು ಕುಳಿತು ಎಣ್ಣೆ ಹಚ್ಚಿಕೊಳ್ಳಲು ಹೇಳುತ್ತಿದ್ದರು. ನಮ್ಮ ಮನೆಯಲ್ಲಿ ಅಜ್ಜಿಯವರು ಬರೀ ನೆಲದ ಕುಳಿತು ಎಣ್ಣೆ ಹಚ್ಚಿಕೊಳ್ಳಬೇಡ ನೆಲ ಗ್ರಹ ಬಡಿಯುತ್ತದೆ ಎಂದು ಹೇಳುತ್ತಿದ್ದು ನೆನಪಿದೆ. ವೈಜ್ಞಾನಿಕವಾಗಿ ಕೂಡ ನೆಲ ನಮ್ಮ ದೇಹದ ಅಯಸ್ಕಾಂತೀಯ ಶಕ್ತಿಯನ್ನು ಎಳೆಯುತ್ತದೆ ಎಂದು ಹೇಳುತ್ತಾರೆ.
ಅಭ್ಯಂಜನ ಸ್ನಾನದಿಂದ ನಮ್ಮ ಆರೋಗ್ಯಕ್ಕೆ ಅನೇಕ ಅನುಕೂಲಕರ ಪ್ರಯೋಜನಗಳು ಉಂಟಾಗುತ್ತವೆ. ಬನ್ನಿ ಅಭ್ಯಂಜನ ಸ್ನಾನ ದಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ..
* ಎಣ್ಣೆಯ ಮಜ್ಜನ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಇದಲ್ಲದೆ ಚರ್ಮದ ಮೇಲೆ ಮೂಡಿರುವ ಸುಕ್ಕು, ಸ್ಟ್ರೆಚ್ ಮಾರ್ಕ್ ನಿವಾರಣೆಯಾಗುತ್ತದೆ.
* ಎಣ್ಣೆಯ ಸ್ನಾನದಿಂದ ದೇಹದ ಉಷ್ಣತೆ ನಿಯಂತ್ರಣದಲ್ಲಿ ಇರುತ್ತದೆ.ಇದಲ್ಲದೇ ಚಳಿಗಾಲವು ಆರಂಭವಾಗಿರುವುದರಿಂದ ಚರ್ಮದಲ್ಲಿ ಕಾಣಿಸಿಕೊಳ್ಳುವ ಬಿರುಕುಗಳು ನಿವಾರಣೆಯಾಗುತ್ತದೆ.
* ಅಭ್ಯಂಜನ ಸ್ನಾನ ಮಾಡುವುದರಿಂದ ದೇಹದಲ್ಲಿ ಶೇಖರಣೆಯಾದ ಜಿಡ್ಡಿನ ಅಂಶ ದೂರವಾಗುತ್ತದೆ. ಇದರೊಂದಿಗೆ ದೇಹದ ರೋಗನಿರೋಧಕ ಶಕ್ತಿಯು ವೃದ್ಧಿಯಾಗಲು ಸಹಕಾರಿಯಾಗಿದೆ.
* ತಲೆ ನೋವು, ಕೈ-ಕಾಲು ನೋವು, ದೇಹದ ಸೆಳೆತದ ತೊಂದರೆಗಳು ಅತೀ ಶೀಘ್ರದಲ್ಲಿಯೇ ನಿವಾರಣೆಯಾಗುತ್ತದೆ.ನೋವು ಕಾಡುತ್ತಿರುವ ಭಾಗಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನವನ್ನು ಮಾಡುವುದರಿಂದ ಮುಕ್ತಿ ದೊರೆಯುತ್ತದೆ.
* ಅಸ್ವಸ್ಥತೆ, ಕೂದಲಿನ ಸಮಸ್ಯೆ, ದೃಷ್ಟಿ ದೋಷ ಸಮಸ್ಯೆಗಳಿಂದ ನಮ್ಮನ್ನು ದೂರಗೊಳಿಸಿ, ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.
* ಕಷ್ಟದ ಕೆಲಸಗಳನ್ನು ಮಾಡಿ, ಬಳಲಿರುವ ಮಾಂಸಖಂಡಗಳಿಗೆ ಪುನಶ್ಚೇತನ ನೀಡಲು ಅಭ್ಯಂಜನ ಸ್ನಾನ ತುಂಬಾ ಸಹಕಾರಿಯಾಗಿದೆ.
* ಎಣ್ಣೆಯ ಸ್ನಾನದಿಂದ ದೇಹದ ಮೂಳೆಗಳು ಭಲಗೊಳ್ಳುತ್ತವೆ. ನಮ್ಮ ದೇಹಕ್ಕೆ ಬೇಕಾದಂತಹ ಪುಷ್ಟಿಕರವಾದ ಆರೋಗ್ಯ ನೀಡಲು ಇದು ಸಹಕಾರಿಯಾಗಿದೆ.
* ಎಣ್ಣೆಯ ಸ್ನಾನವು ನರಗಳ ಚೇತರಿಕೆಗೆ ಸಹಕಾರಿಯಾಗುತ್ತದೆ. ನರಗಳ ಸಮಸ್ಯೆಯಿಂದ ಬಳಲುವವರು ಪ್ರತಿದಿನ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಸ್ನಾನ ಮಾಡುವುದರಿಂದ ಶೀಘ್ರವೇ ಗುಣವಾಗುವುದು.
* ಎಣ್ಣೆಯ ಸ್ನಾನವನ್ನು ಮಾಡುವುದರಿಂದ, ಪಾದಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿದ್ರೆಯ ಸಮಸ್ಯೆ ದೂರವಾಗುತ್ತದೆ. ಇದರಿಂದಾಗಿ ಉತ್ತಮ ನಿದ್ರೆಯು ಬರುತ್ತದೆ.
ಹಿರಿಯರು ಹೆಣ್ಣುಮಕ್ಕಳಿಗೆ ಶುಕ್ರವಾರ ಮತ್ತು ಮಂಗಳವಾರ ಎಣ್ಣೆ ಸ್ನಾನವನ್ನು ಮಾಡಲು ಹೇಳುತ್ತಿದ್ದರು. ಗಂಡು ಮಕ್ಕಳು ಸೋಮವಾರ ಮತ್ತು ಶನಿವಾರ ಎಣ್ಣೆ ಸ್ನಾನವನ್ನು ಮಾಡಲು ಸೂಚಿಸುತ್ತಿದ್ದರು. ಈಗ ಅವಸರದ ದಿನಗಳಲ್ಲಿ ಇರುವುದರಿಂದ ಭಾನುವಾರ ಸೂಕ್ತವೆಂದು ಹೇಳಬಹುದು. ದೀಪ ಹಚ್ಚಿದ ನಂತರ ತಲೆಗೆ ಹರಳೆಣ್ಣೆಯನ್ನು ಅಥವಾ ಎಳ್ಳೆಣ್ಣೆಯನ್ನು ಹಚ್ಚಿಕೊಳ್ಳಬಾರದು ಎಂದು ಹೇಳುತ್ತಿದ್ದರು ಕಾರಣ, ಸೂರ್ಯಸ್ತಮವಾದ ನಂತರ ತಲೆಯಲ್ಲಿ ಎಣ್ಣೆ ಇದ್ದರೆ ಶೀತವಾಗುವ ಸಂದರ್ಭವೂ ಹೆಚ್ಚು. ನಮ್ಮ ಪೂರ್ವಿಕರು ಏನೆಲ್ಲಾ ಶಾಸ್ತ್ರಗಳನ್ನು ಮಾಡಿರುತ್ತಾರೋ ಅಲ್ಲೆಲ್ಲ ಯಾವುದೋ ಒಂದು ವೈಜ್ಞಾನಿಕ ಹಿನ್ನೆಲೆ ಇದ್ದೇ ಇರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಈ ಎಲ್ಲ ಕಾರಣಗಳಿಂದಾಗಿ ದೀಪಾವಳಿಯ ಹಬ್ಬದಲ್ಲಿ ಎಣ್ಣೆ ಸ್ನಾನ ಮಹತ್ವಪೂರ್ಣವೆನಿಸುತ್ತದೆ. ನಮ್ಮ ಹಿರಿಯರು ಹಾಕಿಕೊಟ್ಟ ಆರೋಗ್ಯದ ಹಾದಿಯಲ್ಲಿ ನಾವೆಲ್ಲಾ ನಡೆಯುತ್ತಾ ಇಂದಿನ ಒತ್ತಡದ ಜೀವನ ಶೈಲಿಯಿಂದ ಆರೋಗ್ಯದೆಡೆಗೆ ಒಂದೊಂದೇ ಹೆಜ್ಜೆಯನ್ನು ಹಾಕೋಣವೇ...
ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿ ಶುಭಕಾಮನೆಗಳು.
- ಸೌಮ್ಯ ಸನತ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ