ವಿಶಿಷ್ಟ ದೇವತೆಯ ಪೂಜೆಯನ್ನು ಮಾಡುವಾಗ ಆ ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಬೇಕು. ರಂಗೋಲಿಯು ದೇವತೆಯ ನಿರ್ಗುಣ ತತ್ತ್ವವನ್ನು ಗ್ರಹಿಸಿ ಜೀವದ ಕ್ಷಮತೆಗನುಸಾರ ಅದನ್ನು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಆದುದರಿಂದ ದೇವತೆಯ ತತ್ತ್ವ ವಾಯುಮಂಡಲದಲ್ಲಿ ಮತ್ತು ಜೀವಗಳ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತದೆ.
ರಂಗೋಲಿಯಲ್ಲಿರುವ ಬಿಳಿ ಕಣಗಳಲ್ಲಿ ಈಶ್ವರೀ ತತ್ತ್ವದ ಲಹರಿಗಳನ್ನು ಆಕರ್ಷಿಸುವ ಕ್ಷಮತೆ ಇರುತ್ತದೆ, ಆದರೆ ಬಿಳಿ ಬಣ್ಣವು ನಿಷ್ಕ್ರಿಯತೆಗೆ ಸಂಬಂಧಿಸಿರುವುದರಿಂದ ರಂಗೋಲಿಗೆ ವೇಗವು ಪ್ರಾಪ್ತವಾಗುವುದಿಲ್ಲ. ಕುಂಕುಮದಿಂದ ಬ್ರಹ್ಮಾಂಡದಲ್ಲಿನ ಶ್ರೀದುರ್ಗಾದೇವಿಯ ಪ್ರಕಟಶಕ್ತಿ ಮತ್ತು ಅರಶಿನದಿಂದ ಗಣೇಶತತ್ತ್ವವು ಕಾರ್ಯನಿರತವಾಗುತ್ತದೆ. ಇದರಿಂದ ರಂಗೋಲಿಯಲ್ಲಿ ಆಕರ್ಷಿತವಾದ ಈಶ್ವರೀತತ್ತ್ವಕ್ಕೆ ಚಲನೆಯು ಪ್ರಾಪ್ತವಾಗಿ ವಾಯುಮಂಡಲದಲ್ಲಿನ ದೂಷಿತ ಸ್ಪಂದನಗಳು ಮತ್ತು ಕಣಗಳು ವಿಘಟನೆಯಾಗುತ್ತವೆ.
ರಂಗೋಲಿ ಹಾಕುವುದರ ಹಿಂದಿನ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನ
ನೆಲವನ್ನು ಕಸಬರಿಕೆಯಿಂದ ಗುಡಿಸುವಾಗ ಅಥವಾ ಸೆಗಣಿಯಿಂದ ಸಾರಿಸುವಾಗ ನೆಲದಲ್ಲಿ ಸೂಕ್ಷ್ಮರೇಖೆಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯಮಿತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯಮಿತವಾಗಿರುತ್ತವೆ. ಈ ಸ್ಪಂದನಗಳು ಶರೀರ, ಕಣ್ಣು ಮತ್ತು ಮನಸ್ಸಿಗೆ ಹಾನಿಕರವಾಗಿರುತ್ತವೆ. ಈ ಸ್ಪಂದನಗಳನ್ನು ದೂರಗೊಳಿಸಲು ಸಾರಿಸಿದ ನೆಲದ ಮೇಲೆ ರಂಗೋಲಿಯಿಂದ ಶುಭಚಿಹ್ನೆಗಳನ್ನು ಬಿಡಿಸುತ್ತಾರೆ. ಇದರಿಂದ ನೆಲದ ಮೇಲೆ ಅಶುಭ ಸ್ಪಂದನಗಳು ದೂರವಾಗಿ ಶುಭ ಪರಿಣಾಮಗಳಾಗುತ್ತವೆ.
ರಂಗೋಲಿಯನ್ನು ಆದಷ್ಟು ಸ್ತ್ರೀಯರೇ ಏಕೆ ಬಿಡಿಸಬೇಕು ?
ಪೂಜಾವಿಧಿಗಳ ರಂಗೋಲಿಯನ್ನು ಸ್ತ್ರೀಯರೇ ಬಿಡಿಸಬೇಕು. ಏಕೆಂದರೆ ಸ್ತ್ರೀಯರು ದೇವತೆಯ ಸೂಕ್ಷ್ಮತತ್ತ್ವಗಳನ್ನು ಸಹಜವಾಗಿ ಗ್ರಹಿಸಬಹುದು. ಅವರು ಆಯಾಯ ತತ್ತ್ವಕ್ಕೆ ಸಂಬಂಧಿಸಿದ ಸೂಕ್ಷ್ಮ ಸ್ಪಂದನಗಳ ರಚನೆಯ ಆಕೃತಿಗಳನ್ನು ನಿರ್ಮಿಸಲು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಆದುದರಿಂದ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಈಶ್ವರೀ ತತ್ತ್ವವು ಶೀಘ್ರವಾಗಿ ರಂಗೋಲಿಯಲ್ಲಿ ಆಕರ್ಷಿತವಾಗಿ ಕಾರ್ಯನಿರತವಾಗುತ್ತದೆ.
ಇದಕ್ಕಾಗಿ ಪ್ರಾಥಮಿಕ ಸ್ತರದಲ್ಲಿನ ಜೀವಗಳಿಗಾಗಿ ರಂಗೋಲಿಯನ್ನು ಸ್ತ್ರೀಯರಿಂದ ಬಿಡಿಸಿಕೊಳ್ಳುವುದು ಯೋಗ್ಯವಾಗಿದೆ. ಅದೇ ರೀತಿ ಇದರಿಂದ ಈಶ್ವರೀ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿ ವಾಯುಮಂಡಲ ಹಾಗೂ ಪೂಜೆಗೆ ಕುಳಿತುಕೊಳ್ಳುವ ಜೀವಕ್ಕೆ ಲಾಭವಾಗುತ್ತದೆ. ರಂಗೋಲಿಯಲ್ಲಿನ ಕಲಾತರಂಗದಿಂದ ಸ್ತ್ರೀಯರ ಅನಾಹತ ಚಕ್ರವು ಸ್ವಲ್ಪ ಪ್ರಮಾಣದಲ್ಲಿ ಜಾಗೃತವಾಗಿ ಚೈತನ್ಯ ಗ್ರಹಿಸುವ ಕ್ಷಮತೆಯು ಹೆಚ್ಚಾಗುತ್ತದೆ.
ಸಂಗ್ರಹ
-ಶ್ರೀ. ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ