ಮಂಗಳೂರು: ಮಂಗಳಾದೇವಿ ಸಮೀಪದ ರಾಮಕೃಷ್ಣ ಮಠದಲ್ಲಿ ಎರಡು ವಾರಗಳ ಕಾಲ ಜರುಗಿದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು.
ಈ ವೇಳೆ ರಾಮಕೃಷ್ಣ ಮಠದ ಸ್ವಾಮಿಗಳಾದ ಜಿತಕಾಮಾನಂದ ಜೀ ಮಹಾರಾಜ್ ಮಾತನಾಡಿ, ಯೋಗ ಎನ್ನುವುದರ ಅರ್ಥ ಚಿತ್ತ ವೃತ್ತಿ ನಿರೋಧಃ ‘ಚಿತ್ತ’ ಎಂದರೆ ನಮ್ಮ ಒಳಗಿರುವ ಮನಸ್ಸು, ಬುದ್ಧಿ ಅಹಂಕಾರ, ಭಾವನೆಗಳು. ಚಿತ್ತ ಎಂದರೆ ಸಾಗರದ ಅಲೆಗಳ ಹಾಗೆ. ಅಮಾವಾಸ್ಯೆಯಾದರೂ, ಹುಣ್ಣಿಮೆಯಾದರೂ, ಹಗಲಾದರೂ, ರಾತ್ರಿಯಾದರೂ ಅಲೆಗಳು ಏಳುತ್ತಾ ಇರುತ್ತವೆ. ಮಾನವನ ಮನಸ್ಸಿನಲ್ಲಿ ಹುಟ್ಟುವ ಆಲೋಚನೆಗಳೇ ಈ ಅಲೆಗಳ ಹಾಗೆ. ಈ ಮನಸ್ಸನ್ನು ಹತೋಟಿಯಲ್ಲಿಡುವುದೇ ಯೋಗ ಎಂದು ನುಡಿದರು
ಲೆಕ್ಕ ಪರಿಶೋಧಕ CA ಶ್ರೀ ಜಗನ್ನಾಥ ಕಾಮತ್ ಮಾತನಾಡಿ, ಯೋಗ, ಧ್ಯಾನ, ಪ್ರಾಣಾಯಾಮ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯವಾದ ಅಂಶಗಳಾಗಿವೆ. ಮನಸ್ಸಿನಲ್ಲಿ ಉದ್ವೇಗ ಉಂಟಾದಾಗ ಮುದ್ರೆಗಳನ್ನು ಮಾಡಿ ಒತ್ತಡವನ್ನು ಹೋಗಲಾಡಿಸಬಹುದಾಗಿವೆ ಎಂದು ತಿಳಿಸಿದರು.
ಶ್ರೀ ಲಕ್ಷ್ಮಣ ಪುದುವಾಳ್ ಮಾತನಾಡಿ, ಜೀವನದಲ್ಲಿ ಬರುವ ಕೆಲವೊಂದು ಘಟನೆಗಳು ಮನಸ್ಸಿನ ಮೇಲೆ ಒತ್ತಡವನ್ನು ಉಂಟು ಮಾದುತ್ತವೆ. ಇವುಗಳಿಂದ ಪಾರಾಗಲು ಯೋಗ ಸಹಕಾರಿಯಾಗುತ್ತವೆ ಎಂದರು.
ಶ್ರೀ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಮಾತನಾಡಿ, ಯೋಗವು ತನ್ನ ವ್ಯವಸ್ಥಿತ ಹಾಗೂ ಉದ್ದೇಶಿತ (ಸಂಕಲ್ಪಿತ) ಮನಸ್ಸನ್ನು ಶಾಂತಗೊಳಿಸುವ ಪ್ರಕ್ರಿಯೆಗಳಿಂದ ಮನಸ್ಸಿನಲ್ಲಿರುವ ನಿಶ್ಯಕ್ತತೆಗಳನ್ನು ಅಳಿಸಿ ಬಿಡುತ್ತದೆೆ ಎಂದು ತಿಳಿಸಿದರು. ದೇಲಂಪಾಡಿ ಅವರ ಶಿಷ್ಯರಾದ ಸುಮಾ, ಭಾರತಿ, ಚಂದ್ರಹಾಸ, ಸುರೇಶ್ ಹಾಗೂ ವೀಣಾ ಸುರೇಶ್ ಸಹಕರಿಸಿದರು.
ಮುಂದಿನ ಯೋಗ ಶಿಬಿರವು ನವೆಂಬರ್ 15- 2023 ಸಂಜೆ 5 ರಿಂದ ಪ್ರಾರಂಭವಾಗುತ್ತದೆ ಎಂದು ಮಠದ ವತಿಯಿಂದ ತಿಳಿಸಲಾಯಿತು. ಆಸಕ್ತ ಯೋಗ ಬಂಧುಗಳು ರಾಮಕೃಷ್ಣ ಮಠದಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಯೋಗದೊಂದಿಗೆ ಯೋಗ ಚಕ್ರಗಳ ವರ್ಣ ಚಿಕಿತ್ಸೆ, ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು. ಆಸಕ್ತರು ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಬಹುದು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ