ಪೋಲಿಯೋ ಎನ್ನುವ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪ್ರತಿ ವರ್ಷ ಅಕ್ಟೋಬರ್ 24 ರಂದು “ವಿಶ್ವ ಪೋಲಿಯೋ ದಿನ” ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸ ಲಾಗುತ್ತಿದೆ. ಪೋಲಿಯೋ ರೋಗಕ್ಕೆ ಮೊತ್ತ ಮೊದಲ ಬಾರಿ ಲಸಿಕೆ ಕಂಡು ಹಿಡಿದ ಸಂಶೋಧಕ ಜೋನಾಡ್ ಸಾಲ್ ಅವರ ಹುಟ್ಟಿದ ದಿನವನ್ನು ಅವರ ನೆನಪಿಗಾಗಿ ಪೋಲಿಯೋ ದಿನ ಎಂದು ಆಚರಿಸಲಾಗುತ್ತಿದೆ.
1955 ರಲ್ಲಿ ಈ ಲಸಿಕೆ ಬಳಸಲಾಯಿತು. ಆ ಬಳಿಕ 1961ರಲ್ಲಿ ಆಲ್ಬರ್ಟ್ ಸಾಬಿನ್ ಎಂಬಾತ ಬಾಯಿ ಯಿಂದ ಬಳಸುವ ಪೊಲಿಯೋ ವೈರಾಣು ಡ್ರಾ ಹನಿಗಳನ್ನು ಕಂಡು ಹಿಡಿದ. ಪೋಲಿಯೋ ವೈರಾಣು ನೇರವಾಗಿ ನರಮಂಡಲಕ್ಕೆ ದಾಳಿ ಮಾಡಿ ರೋಗಿಯನ್ನು ಇನ್ನಿಲ್ಲದಂತೆ ಕಾಡುತ್ತದೆ. ಪ್ರತೀ 200ರಲ್ಲಿ ಒಬ್ಬರು ಶಾಶ್ವತವಾಗಿ ಪಾರ್ಶ್ವವಾಯುವಿಗೆ ತುತ್ತಾಗುವಂತೆ ಮಾಡುತ್ತದೆ. ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಈ ಪೊಲಿಯೋ ರೋಗವನ್ನು ನಿರ್ಮೂಲನಾ ಮಾಡಲು ಒಂದು ವಿಶ್ವ ಪೋಲಿಯೋ ನಿರ್ಮೂ ಲನಾ ಆಂದೋಲನವನ್ನು 1988ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೂಡಿ ಆರಂಭಿಸಿತ್ತು.
1988 ರಲ್ಲಿ ವಿಶ್ವದಾದ್ಯಂತ 3,50,000 ಪೊಲಿಯೋ ರೋಗಿಗಳು ಇದ್ದರು. ಇದೀಗ ಅಮೇರಿಕಾ, ಯುರೋಪ್ ಏಷ್ಯಾಖಂಡದ ಹೆಚ್ಚಿನ ಎಲ್ಲಾ ದೇಶಗಳು ಪೋಲಿಯೋ ಮುಕ್ತವಾಗಿದೆ. ಆದರೆ ಅಪಘಾನಿಸ್ಥಾನ, ಪಾಕಿಸ್ಥಾನ ಮತ್ತು ನೈಜೀರಿಯಾ ದೇಶಗಳಲ್ಲಿ ಮಾತ್ರ ಪೋಲಿಯೋ ಉಳಿದುಕೊಂಡಿದೆ. 2014ರಲ್ಲಿ ವಿಶ್ವಸಂಸ್ಥೆ ನಮ್ಮ ಭಾರತ ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದೆ. ಕಳೆದ 9 ವರ್ಷಗಳಿಂದ ನಮ್ಮ ಭಾರತ ದೇಶದಲ್ಲಿ ಒಂದೇ ಒಂದು ಹೊಸ ಪೋಲಿಯೋ ರೋಗ ವರದಿಯಾಗಿಲ್ಲ. 1988ರಲ್ಲಿ ಸುಮಾರು 125 ರಾಷ್ಟ್ರಗಳಲ್ಲಿ ಪೋಲಿಯೋ ರೋಗ ಇತ್ತು. ಈಗ 2020ರಲ್ಲಿ ಕೇವಲ 3 ರಾಷ್ಟ್ರಗಳಲ್ಲಿ ಈ ರೋಗ ಇದೆ. ಈ ಮೂರು ದೇಶಗಳಲ್ಲಿ 73 ಪೋಲಿಯೋ ರೋಗಿಗಳು ಪತ್ತೆಯಾಗಿದ್ದಾರೆ.
ಹೇಗೆ ಆಚರಿಸಲಾಗುತ್ತದೆ?
ವಿಶ್ವದಾದ್ಯಂತ ಪೋಲಿಯೋ ರೋಗದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಬೀದಿ ನಾಟಕ, ಭಾಷಣ ಸ್ಪರ್ಧೆ, ನಾಕ್ಡ್ಯಾನ್, ಮ್ಯಾರಥಾನ್, ರ್ಯಾಲಿಗಳು ಮತ್ತು ಸೆಮಿನಾರ್ಗಳನ್ನು ಆಯೋಜನೆ ಮಾಡಿ ರೋಗದ ತೀವ್ರತೆ ಮತ್ತು ಗಂಭೀರತೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ.
ಏನಿದು ಪೊಲಿಯೋ?
ಪೋಲಿಯೋ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಗಂಭೀರ ಕಾಯಿಲೆಯಾಗಿದ್ದು, ಮುಖ್ಯವಾಗಿ ನರಮಂಡಲವನ್ನು ಭರಿಸುತ್ತದೆ. ಈ ವೈರಾಣು ಮುಖ್ಯವಾಗಿ ಸೋಂಕಿತ ವ್ಯಕ್ತಿಯ ಮಲದಿಂದ, ಕಲುಷಿತ ನೀರಿನಿಂದ ಹರಡುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬನಿಗೆ ಸೀನುವಾಗ ಮತ್ತು ಕೆಮ್ಮಿದಾಗ ಹರಡಬಹುದು. ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ ಬರಬಹುದಾದರೂ ಗರ್ಭಿಣಿಯರು, ಸಣ್ಣ ಮಕ್ಕಳು ಮತ್ತು ರೋಗ ರಕ್ಷಣಾ ವ್ಯವಸ್ಥೆ ಹದಗೆಟ್ಟವರನ್ನು ಬಾಧಿಸುತ್ತದೆ. ಎರಡು ರೀತಿಯಲ್ಲಿ ಈ ರೋಗ ಕಂಡು ಬರುತ್ತದೆ. ಕೇಂದ್ರೀಯ ನರಮಂಡಲವನ್ನು ಬಾಧಿಸಿದ ಪೊಲಿಯೋ ಸಣ್ಣ ಮಟ್ಟಿನ ಜ್ವರ ಮತ್ತು ವಾಂತಿ, ತಲೆನೋವು ಇತ್ಯಾದಿಗಳಿಗೆ ಸೀಮಿತವಾಗಿರುತ್ತದೆ. ಇದನ್ನು ‘ಅಬಾರ್ಟಿನ್ ಪೋಲಿಯೋ ಮೈಲೈಟಿಸ್’ ಎನ್ನುತ್ತಾರೆ.
ಇನ್ನೊಂದು ನೇರವಾಗಿ ಕೇಂದ್ರೀಯ ನರಮಂಡಲವನ್ನು ಬಾಧಿಸಿ ದೇಹದ ಮೇಲಿನ ನಿಯಂತ್ರಣ ತಪ್ಪುವಂತೆ ಮಾಡುತ್ತದೆ. ಸ್ನಾಯುಗಳು ಸೆಳೆದುಕೊಂಡು ತೀವ್ರವಾಗಿ ಕಾಡುತ್ತದೆ. ಹೆಚ್ಚಾಗಿ 95 ಶೇಕಡಾ ಪೋಲಿಯೋಗಳಲ್ಲಿ ಯಾವುದೇ ತೀವ್ರತೆ ಚಿಹ್ನೆಗಳು ಕಾಣಿಸದೇ ಇರಬಹುದು. ಸುಮಾರು 5ರಿಂದ 10 ಶೇಕಡಾ ಮಂದಿ ಉಸಿರಾಟದ ಸ್ನಾಯುಗಳ ವೈಫಲ್ಯದಿಂದ ಸಾವನ್ನಪ್ಪಬಹುದು. ಹೆಚ್ಚಿನವರಲ್ಲಿ ಸ್ನಾಯುಗಳು ಮೇಲಿನ ಶಾಶ್ವತ ಹಾನಿಯಿಂದಾಗಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು.
ತಡೆಗಟ್ಟುವುದು ಹೇಗೆ?
ಚಿಕಿತ್ಸೆ ಇಲ್ಲದ ಈ ರೋಗಕ್ಕೆ ಲಸಿಕೆ ಹಾಕಿಸಿದರಲಿಯೇ ಜಾಣತನ ಅಡಗಿದೆ. ಸರಿಯಾದ ಸಮಯದಲ್ಲಿ ವೈದ್ಯರ ಸೂಚನೆಯಂತೆ ಲಸಿಕೆ ಹಾಕಿಸಿದಲ್ಲಿ ಪೊಲಿಯೋ ಬರುವ ಸಾಧ್ಯತೆ ಇಲ್ಲ. ನಿಸ್ತೇಜಗೊಂಡ ಪೋಲಿಯೋ ವೈರಾಣುವನ್ನು ಬಾಯಿ ಮುಖಾಂತರ ಪೊಲಿಯೋ ಡ್ರಾಫ್ಸ್ ಅಥವಾ ಹನಿ ನೀಡಲಾಗುತ್ತದೆ. ಈ ರೀತಿ ಹನಿ ನೀಡುವುದರಿಂದ ಮಕ್ಕಳಲ್ಲಿ ಪೊಲಿಯೋ ವೈರಾಣುವನ್ನು ಎದುರಿಸುವ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಸಾಮಾನ್ಯವಾಗಿ 5 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ ಈ ಲಸಿಕೆ ನೀಡಲಾಗುತ್ತದೆ.
ಪೋಲಿಯೋ ರೋಗ ಭಾರತ ದೇಶದಿಂದ ನಿರ್ಮೂಲನೆ ಆಗಿದ್ದರೂ ನಿರಂತರವಾಗಿ ಲಸಿಕೆ ಹಾಕುವುದು ಅನಿವಾರ್ಯ. ಈ ನಿಟ್ಟಿನಲ್ಲಿ ರೋಟರಿ, ಲಯನ್ಸ್ ಮತ್ತು ಇತರ ಸಂಘಗಳು ಸರಕಾರದ ಜೊತೆಗೆ ಕೈಜೋಡಿಸಿ ಪೊಲಿಯೋ ನಿರ್ಮೂಲನಾ ಆಂದೋಲನಾ ಮಾಡುವಾಗ ಜನರು ಕೂಡಾ ಅವರ ಜೊತೆ ಸೇರಿಕೊಂಡು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಆ ಮೂಲಕ ಒಂದು ಸುಂದರ ಸದೃಢ ಆರೋಗ್ಯಪೂರ್ಣ ದೇಶ ಕಟ್ಟುವಲ್ಲಿ ಸರಕಾರಕ್ಕೆ ಸಹಕಾರ ನೀಡಲೇ ಬೇಕು.
-ಡಾ|| ಮುರಲೀ ಮೋಹನ ಚೂಂತಾರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ