ನಿಟ್ಟೆ: 'ಪ್ರತಿಯೋರ್ವ ಮಾನವನೂ ತನ್ನ ವಿದ್ಯಾರ್ಥಿ ಜೀವನ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಎದುರಾಗುವ ಎಡರುತೊಡರುಗಳು, ಅನಿಶ್ಚಿತತೆಯನ್ನು ಸಮರ್ಥವಾಗಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯ ಮೂಲಕ ಎದುರಿಸಬೇಕು. ನಮ್ಮ ಜೀವನದ ಏಳಿಗೆಗೆ ಮಾರ್ಗದರ್ಶನ ಮಾಡಿದ ಎಲ್ಲ ಮಾರ್ಗದರ್ಶಕರನ್ನು, ಸಮಾಜವನ್ನು ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಚಾನ್ಸೆಲರ್ ಶ್ರೀ ಎನ್ ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.
ಅಕ್ಟೋಬರ್ 21 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 2022-23 ನೇ ಶೈಕ್ಷಣಿಕ ಸಾಲಿನ ಪದವಿಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 'ಯುವಜನತೆ ತಮ್ಮ ಗುರಿಯ ಬಗೆಗೆ ದೃಷ್ಠಿಯನ್ನು ಕೇಂದ್ರೀಕರಿಸಿ ಸಾಧನೆಯ ಮಟ್ಟಿಲನ್ನೇರಬೇಕು. ಶ್ರಮ ಹಾಗೂ ನಿಷ್ಟೆಯ ಬದುಕು ನಡೆಸಿ ತಮ್ಮ ಹೆತ್ತವರ, ತಮಗೆ ಬೋಧಿಸಿದ ಸಂಸ್ಥೆಗೆ ಉತ್ತಮ ಹೆಸರು ತರಬೇಕು. ತಮ್ಮ ವೈಯಕ್ತಿಕ ಏಳಿಗೆಯಿಂದ ಹಲವರ ಏಳಿಗೆಗೆ ಸಹಾಯವಾಗುವಂತೆ ಮಾಡಬೇಕು. ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡರೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ನಾವು ನಮ್ಮ ಜೀವನದುದ್ದಕ್ಕೂ ನಿರಂತರ ಕಲಿಕೆಯೊಂದಿಗೆ ಮುನ್ನೆಡದರಷ್ಟೇ ಪ್ರಗತಿಯನ್ನು ಕಾಣಲು ಸಾಧ್ಯ' ಎಂದು ಅವರು ಹೇಳಿ ಪದವಿ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶೈಕ್ಷಣಿಕ ಸಾಧನೆಗೈದ 26 ವಿದ್ಯಾರ್ಥಿಗಳನ್ನು ಚಿನ್ನ ಮತ್ತು ಬೆಳ್ಳಿಯ ಪದಕ ನೀಡುವ ಮೂಲಕ ಗುರುತಿಸುವ ಹಾಗೂ ಎಂ.ಟೆಕ್ ಮತ್ತು ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಬೆಳಗ್ಗಿನ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಟೆಕ್ನಿಕಲ್ ಎಜುಕೇಶನ್ ವಿಭಾಗದ ವೈಸ್-ಪ್ರೆಸಿಡೆಂಟ್ ಡಾ| ಗೋಪಾಲ್ ಮುಗೆರಾಯ ಅವರು 'ಕರಾವಳಿ ಜನರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಪಾತ್ರ ಮಹತ್ವದ್ದು. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕ ಪ್ರಯತ್ನ ಹಾಗೂ ಆದರ್ಶಪ್ರಾಯರಾದ ವ್ಯಕ್ತಿಯನ್ನು ನಾವು ಕಾಣಬಹುದು. ನಾವು ನಮ್ಮ ನಾಡಿನ ಏಳಿಗಾಗಿ ಹೆಮ್ಮೆಯಿಂದ ಕೆಲಸಮಾಡಬೇಕು. ಪರಿಸ್ಥಿತಿಗೆ ತಕ್ಕಂತೆ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಕೊರೋನಾವನ್ನು ಎದುರಿಸಿದ್ದು ಭಾರತದ ಬಹುದೊಡ್ಡ ಯಶಸ್ಸು ಎಂದರೆ ತಪ್ಪಾಗದು. ಇಂದು ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅತ್ಯುನ್ನತ ಯಶಸ್ಸನ್ನುಗಳಿಸಲಿ' ಎಂದು ಶುಭಹಾರೈಸಿದರು.
ಅಪರಾಹ್ನ, ಬಿ.ಇ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ಡಾ|ಶಾಂತಾರಾಮ್ ಶೆಟ್ಟಿ ತಮ್ಮ ನುಡಿಗಳಲ್ಲಿ 'ಯುವಜನತೆ ಸವಾಲುಯುತ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ಸಾಕಾರಗೊಳಿಸುವ ಯೋಜನೆಯನ್ನು ಚಿಂತಿಸಬೇಕು. ನಿಟ್ಟೆಯಂತಹ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಹಲವಾರು ವಿದ್ಯಾಸಂಸ್ಥೆಗಳಿಂದ ಪದವಿ ಪಡೆದ ವಿದ್ಯಾರ್ಥಿಗಳ ಸಾಧನೆಯಗಳನ್ನು ನಾವಿಂದು ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದು. ಪದವಿ ಶಿಕ್ಷಣವನ್ನು ಪಡೆಯಲು ಸಹಕರಿಸಿದ ಎಲ್ಲರನ್ನೂ ನೆನೆಯಬೇಕು' ಎಂದರು.
ಇನ್ನೋರ್ವ ಅತಿಥಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ವೈಸ್-ಚಾನ್ಸಲರ್ ಡಾ| ಎಂ.ಎಸ್. ಮೂಡಿತ್ತಾಯ ಅವರು ತಮ್ಮ ನುಡಿಗಳಲ್ಲಿ 'ಈ 21ನೇ ಶತಮಾನದಲ್ಲಿ ಭಾರತದ ಹೆಸರು ಬಹಳಷ್ಟು ಎತ್ತರಕ್ಕೆ ಏರುತ್ತಿದೆ. ವಿಶ್ವದಲ್ಲಿ ಪದವಿ ಮುಗಿಸುವ ಪ್ರತೀ 4 ಮಂದಿಯಲ್ಲಿ ಒಬ್ಬನು ಭಾರತೀಯನಾಗಿರುತ್ತಾನೆ. ಆದುದರಿಂದ ಮುಂದಿನ ದಿನಗಳಲ್ಲಿ ಭಾರತ ದೇಶವು ವಿಶ್ವಕ್ಕೆ ಉತ್ತಮ ಪ್ರತಿಭೆಗಳನ್ನು ಪರಿಚಯಿಸಲಿದೆ' ಎಂದರು.
ವೇದಿಕೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕರಿಕುಲಮ್ ಡೆವಲಪ್ಮೆಂಟ್ ನ ನಿರ್ದೇಶಕ ಡಾ.ನಾಗೇಶ್ ಪ್ರಭು, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಉಪಕುಲಸಚಿವೆ ಡಾ|ರೇಖಾ ಭಂಡಾರ್ಕರ್, ಉಪ ಪರೀಕ್ಷಾ ನಿಯಂತ್ರಕ ಡಾ|ಸುಬ್ರಹ್ಮಣ್ಯ ಭಟ್, ನಿಟ್ಟೆ ತಾಂತ್ರಿಕ ಕಾಲೇಜಿನ ಇಂಡಸ್ಟ್ರೀ ಇನ್ಶ್ಟಿಟ್ಯೂಟ್ ಇಂಟರಾಕ್ಷನ್ನ ನಿರ್ದೇಶಕ ಡಾ|ಪರಮೇಶ್ವರನ್, ಎಂಬಿಎ ವಿಭಾಗದ ನಿರ್ದೇಶಕ ಡಾ| ಗುರುರಾಜ್ ಕಿದಿಯೂರು, ಸ್ಟೂಡೆಂಟ್ ವೆಲ್ಫೇರ್, ಎಟ್ಮಿಶನ್, ಆರ್&ಡಿ ಡೀನ್ ಗಳು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ|ಶ್ರೀನಿವಾಸ್ ರಾವ್ ಬಿ.ಆರ್ ಪದವಿಪ್ರದಾನ ಸಮಾರಂಭದ ಮೆರವಣಿಗೆಯನ್ನು ಮುನ್ನಡೆಸಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|ನಿರಂಜನ್ ಎನ್ ಚಿಪ್ಳೂಣ್ಕರ್ ವಾರ್ಷಿಕ ವರದಿಯನ್ನು ವಾಚಿಸುವುದರೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ|ಐ.ಆರ್ ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕಗಳಿಸಿದ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು. ಪಿ.ಜಿ ಕಾರ್ಡಿನೇಟರ್ ಡಾ| ರಾಜಲಕ್ಷ್ಮೀ ಸಾಮಗ ಎಂ.ಟೆಕ್ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಎಂಸಿಎ ವಿಭಾಗದ ಬಾಲಚಂದ್ರ ಅವರು ಎಂ.ಸಿ.ಎ ಪದವೀಧರರ ಪಟ್ಟಿಯನ್ನು ವಾಚಿಸಿದರು. ಸಹಾಯಕ ಪರೀಕ್ಷಾ ನಿಯಂತ್ರಕ ಡಾ| ವೆಂಕಟೇಶ್ ಕಾಮತ್ ವಂದಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಡಾ| ಮಮತಾ ಗಿರೀಶ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ| ಶ್ರೀಕಾಂತ್ ಡಿ.ಕೆ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ