ಭಗವಂತನೂ ತಲೆಬಾಗುವುದು ಗುರುವಿಗೆ : ತೇಜಶಂಕರ ಸೋಮಯಾಜಿ

Upayuktha
0

               ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಗುರುಪೂರ್ಣಿಮೆ ಆಚರಣೆ, ಗುರುವಂದನಾ ಕಾರ್ಯಕ್ರಮ

    ಭಾವಪೂರ್ಣ ಸಮಾರಂಭಕ್ಕೆ ಸಾಕ್ಷಿಯಾದ ಸಾವಿರಾರು ಮಂದಿ ವಿದ್ಯಾರ್ಥಿಗಳು

ಪುತ್ತೂರು: ಗುರು ಎಂಬ ಶಬ್ದ ಶಿಕ್ಷಕ ಎಂಬುದಕ್ಕೆ ಸಮಾನಾರ್ಥಕವಲ್ಲ. ಆದರೆ ಶಿಕ್ಷಕನಾದವನು ಗುರು ಸ್ಥಾನಕ್ಕೆ ಏರಬಹುದಾದ ಅವಕಾಶಗಳಿರುವುದು ಸತ್ಯ. ಬದುಕಿಗೆ ದಾರಿದೀಪವಾಗುವವರು ಗುರುಗಳೆನಿಸುತ್ತಾರೆ. ಹೆತ್ತವರ ನಂತರ ಮಕ್ಕಳ ಜವಾಬ್ದಾರಿಯನ್ನು ಹೊತ್ತು ಅವರ ಅಧ್ಯಯನದ ಕಾಲದಲ್ಲಿ ನಿರಂತರವಾಗಿ ಕಾಪಾಡುತ್ತಾ, ಬದುಕನ್ನು ರೂಪಿಸುತ್ತಾ ಸಾಗುವ ಮಹಾನ್ ವ್ಯಕ್ತಿತ್ವವೇ ಗುರು ಎಂದೆನಿಸಿಕೊಳ್ಳಲು ಸಾಧ್ಯ ಎಂದು ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸೋಮವಾರ ಆಯೋಜಿಸಲಾದ ಗುರುಪೂರ್ಣಿಮಾ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಹರ ಮುನಿದರೆ ಗುರು ಕಾಯುತ್ತಾನೆ. ಗುರುವೇ ಮುನಿದರೆ ಯಾರೂ ರಕ್ಷಿಸಲಾರರು ಎಂಬ ಮಾತು ಗುರುವಿನ ಯೋಗ್ಯತೆ, ಉತ್ಕೃಷ್ಟತೆಯನ್ನು ಅನಾವರಣಗೊಳಿಸುತ್ತದೆ. ಗುರು ಎಂದ ತಕ್ಷಣ ಸರ್ವ ಸಂಗತಿಗಳನ್ನೂ ನಿಯಂತ್ರಿಸಬಲ್ಲವ ಎಂದರ್ಥವಲ್ಲ. ಗುರುವಿಗೂ ಪರಿಧಿಯಿದೆ. ಆದರೆ ಗುರುಕಾರುಣ್ಯ ಮಾತ್ರ ಸೀಮಾತೀತವಾದದ್ದು. ಯಾರು ಗುರುವಿನ ಕರುಣೆಗೆ ಒಳಗಾಗುತ್ತಾರೋ ಅಂತಹವರು ಜೀವನದಲ್ಲಿ ಸಾಧನೆ ಮಾಡುತ್ತಾರೆ. ಎಲ್ಲರಿಂದಲೂ ವಂದ್ಯನಾದ ಭಗವಂತನೂ ತಲೆಬಾಗುವುದು ಗುರುವಿಗೆ ಎಂಬುದನ್ನು ಅರ್ಥಮಾಡಿಕೊಂಡಾಗ ಗುರುಸ್ಥಾನದ ಉನ್ನತಿಕೆ ಅರ್ಥವಾಗುತ್ತದೆ ಎಂದರು.

ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ ಗೌರವ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಶಿಕ್ಷಕ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ಪುರಂದರ ಭಟ್ ಬಿ. ಮಾತನಾಡಿ ಗೌರವ ಸಮರ್ಪಣೆಯಾಗುವುದು ವ್ಯಕ್ತಿಗೇ ಆದರೂ ಅದು ಸಲ್ಲುವುದು ಗುರುವೆಂಬ ಶಕ್ತಿಗೆ. ಹಾಗಾಗಿ ಅಕಸ್ಮಾತ್ ಯಾರಾದರೂ ತನಗೆ ಸನ್ಮಾನ ಅಂದುಕೊಂಡರೆ ಅದು ವ್ಯಕ್ತಿಯ ಸೋಲೇ ಹೊರತು ಬೇರೇನೂ ಅಲ್ಲ. ಸಾವಿರದ ಭಗವಂತನನ್ನು ಸಾವಿರುವ ವ್ಯಕ್ತಿಯಲ್ಲಿ ಕಾಣುವುದಕ್ಕೆ ಕಾರಣ ಗುರುತ್ವ. ಅದು ಗುರು ಎಂಬ ಸ್ಥಾನದ ಮಹತ್ವ. ಗುರುಪರಂಪರೆಯನ್ನು ಗೌರವಿಸುವ, ಆದರಿಸುವ ಸಂಸ್ಕೃತಿ ನಮ್ಮದು ಎಂದು ನುಡಿದರು.

ಮನುಷ್ಯ ಜನ್ಮವು ಭೂಮಿ, ಆಕಾಶ, ವಾಯು, ಅಗ್ನಿ ಹಾಗೂ ನೀರನ್ನೊಳಗೊಂಡ ಪಂಚಭೂತಗಳಿಂದ ನಿರ್ಮಾಣವಾದಂತಹದ್ದು. ಆದರೆ ಆ ಪಂಚಭೂತಗಳನ್ನೇ ಕೆಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ. ನೀರನ್ನು ಕಲುಷಿತಗೊಳಿಸುತ್ತಿದ್ದೇವೆ. ಹಾಗಾಗಿಯೇ ಪಾವನ ಗಂಗೆಯನ್ನೂ ಶುದ್ಧಿ ಮಾಡಬೇಕಾದ ದುರಂತ ಸ್ಥಿತಿ ನಮ್ಮ ಮುಂದಿದೆ. ವಾಯು, ಭೂಮಿ, ಆಕಾಶವನ್ನೂ ಮನರಂಜನೆ, ಸಾಧನೆಗಳ ಹೆಸರಿನಲ್ಲಿ ಹಾಳುಗೆಡವುತ್ತಿದ್ದೇವೆ. ಸದ್ಯದ ಸ್ಥಿತಿಯಲ್ಲಿ ಅಗ್ನಿ ಮಾತ್ರ ಕೆಡದೆ ಉಳಿದುಕೊಂಡಿದೆ. ಪಂಚಭೂತಗಳ ಗಾರುಗೆಡಿಸುವಿಕೆಯೇ ನಮ್ಮ ಪತನದ ಮೂಲ ಎಂದು ಅಭಿಪ್ರಾಯಪಟ್ಟರು. 

ತನ್ನ ಗುರುಗಳಾದ ಪುರಂದರ ಭಟ್ಟರ ಬಗೆಗೆ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಪುರಂದರ ಭಟ್ಟರು ತರಗತಿಗಳ ಆರಂಭಿಸುವ ಮುನ್ನ ಪ್ರತಿಬಾರಿಯೂ ವಿದ್ಯಾರ್ಥಿಗಳೆಡೆಗೆ ಕೈಮುಗಿದು ನಿಲ್ಲುತ್ತಿದ್ದರು. ಕಾಲೇಜು ದಿನಗಳ ಅನಂತರದಲ್ಲಿ ಆ ಬಗೆಗೆ ಪ್ರಶ್ನಿಸಿದಾಗ ತಾನು ನಮಿಸುವುದು ವಿದ್ಯಾರ್ಥಿಯೊಳಗಿರುವ ಪರಮಾತ್ಮನಿಗೆ ಎಂದು ಹೇಳಿದ್ದರು. ತನ್ನೆದುರು ಕುಳಿತಿರುವ ವಿದ್ಯಾರ್ಥಿಯಲ್ಲಿ ಭಗವಂತನನ್ನು ಕಾಣುವ ಪುರಂದರ ಭಟ್ಟರಂತಹ ಗುರುಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚಬೇಕು ಎಂದರಲ್ಲದೆ ಒಬ್ಬ ವ್ಯಕ್ತಿಯ ಬದುಕಿನ ವಿವಿಧ ಹಂತಗಳಲ್ಲಿ ಜತೆಯಾಗಿ ನಿಂತು ಆತನಿಗೆ ಬದುಕನ್ನು ನೀಡುವ ವ್ಯಕ್ತಿ ಗುರು. ಪುರಂದರ ಭಟ್ಟರು ಅಂತಹವರು ಎಂದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಶ್ರಾವ್ಯಾ ಪ್ರಾರ್ಥಿಸಿದರು. ಗಣಿತ ಶಾಸ್ತ್ರ ಉಪನ್ಯಾಸಕಿ ಕಾವ್ಯಾ ಭಟ್ ಸ್ವಾಗತಿಸಿ, ರಸಾಯನಶಾಸ್ತ್ರ ಉಪನ್ಯಾಸಕಿ ಸುಚೇತಾರತ್ನ ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು. 


ಗುರುವಂದನೆಯಲ್ಲಿ ಮೂಡಿಬಂದ ಭಾರತೀಯ ಸಂಸ್ಕೃತಿ

ಗುರುವಂದನೆಯ ಪ್ರಯುಕ್ತ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ನಟ್ಟೋಜ ದಂಪತಿಗಳಿಂದ ಪುರಂದರ ಭಟ್ಟರ ಪಾದಪೂಜೆ ನಡೆಯಿತು. ಪಾದಗಳನ್ನು ತೊಳೆದು, ಆ ಜಲವನ್ನು ತಮ್ಮ ತಲೆಗೆ ಪ್ರೋಕ್ಷಿಸಿಕೊಂಡು, ಪಾದಗಳಿಗೆ ಕುಂಕುಮ, ಅರಸಿನಗಳನ್ನಿಟ್ಟು, ಆರತಿ ಬೆಳಗಿ, ಸಾಷ್ಟಾಂಗ ನಮಸ್ಕರಿಸುವ ಮೂಲಕ ನಡೆಸಿದ ಗುರುಪೂಜೆ ಸನಾತನ ಭಾರತತದ ಸಂಸ್ಕೃತಿಯ ಪ್ರತಿಬಿಂಬವಾಗಿ ಮೂಡಿಬಂತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top