ಅದೊಂದು ಕಾಲ. ಎಂಟನೆಯ ವರ್ಷಕ್ಕೆ ಉಪನೀತನಾದ ಬಾಲಕ ತಂದೆ, ತಾಯಿ, ಮನೆ ಎಲ್ಲರನ್ನು ಎಲ್ಲವನ್ನು ಬಿಟ್ಟು ಗುರುಕುಲವನ್ನು ಸೇರಿ ಗುರುಶುಶ್ರೂಷೆಯನ್ನು ಮಾಡಿ ಅಧ್ಯಯನವನ್ನು ಕೈಗೊಳ್ಳಬೇಕಿತ್ತು. ಗುರುಕುಲಕ್ಕೆ ಬಂದ ಮೇಲೆ ಗುರುವೇ ತಂದೆ. ಗುರುಪತ್ನಿಯೇ ತಾಯಿ. ಗುರುವಿನ ಮಕ್ಕಳು ಹಾಗೂ ಸಹಾಧ್ಯಾಯಿಗಳೇ ಸಹೋದರ-ಸಹೋದರಿಯರು. ಗುರುಕುಲವೇ ಮನೆ. ಆದ್ದರಿಂದಲೇ ಆತ ಅಂತೇವಾಸಿ, ಅಂದರೆ ಗುರುವಿನ ಬಳಿಯಲ್ಲೇ ಇರುವವ. ನಿರಂತರ ಹದಿನಾರು ವರ್ಷಗಳ ಕಾಲ ಅಧ್ಯಯನವನ್ನು ನಡೆಸಿ, ಗುರುವು ವಿದ್ಯಾಭ್ಯಾಸ ಪೂರ್ಣವಾಯಿತೆಂದು ಹೇಳಿದ ಬಳಿಕವೇ ಮನೆಗೆ ಆತ ಸ್ನಾತಕನಾಗಿ ಮನೆಗೆ ಮರಳಬೇಕಿತ್ತು.
ಗುರು-ಶಿಷ್ಯರ ಸಂಬಂಧವಂತೂ ವಿಶಿಷ್ಟವಾದುದು. ಗುರುವು ಶಿಷ್ಯನನ್ನು ಬಗೆಬಗೆಯಾಗಿ ಪರೀಕ್ಷಿಸಿ ಯೋಗ್ಯನೆಂದಾದರೆ ಮಾತ್ರ ವಿದ್ಯೆಯನ್ನು ಧಾರೆಯೆರೆಯುತ್ತಿದ್ದರು. ಶಿಷ್ಯನೂ ಹಾಗೆ, ಗುರು ಏನೇ ಹೇಳಿದರೂ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ಏನೇ ಕಷ್ಟಗಳು ಬರಲಿ ಗುರುವಾಕ್ಯವೇ ಪರಮ ಪ್ರಮಾಣ. ಹೀಗಿದ್ದರೆ ಮಾತ್ರ ಗುರುವಿನ ಪೂರ್ಣಾನುಗ್ರಹ ಆತನ ಮೇಲಿರುತ್ತಿತ್ತು. ಧೌಮ್ಯ-ಉಪಮನ್ಯು, ಧೌಮ್ಯ-ಆರುಣಿ ಇವರ ವೃತ್ತಾಂತಗಳು ಇದಕ್ಕೆ ಉದಾಹರಣೆ. ಅಗ್ನಿವಿದ್ಯೆ ಹಾಗೂ ಆತ್ಮವಿದ್ಯೆಯನ್ನು ಯಮನಿಂದ ಪಡೆದು ಮರಳಿ ಬದುಕಿ ಬಂದ ನಚಿಕೇತನದ್ದು ಇನ್ನೊಂದು ವೃತ್ತಾಂತ. ಪಟ್ಟುಬಿಡದೆ, ತನ್ನ ಉದ್ದೇಶದಿಂದ ವಿಚಲಿತನಾಗದೆ, ಯಾವ ಪ್ರಲೋಭನೆಗೂ ಬಲಿಯಾಗದೆ ಗುರು(ಯಮ)ನಿಂದ ಉಪದೇಶವನ್ನು ಪಡೆದ ಆತನ ಗುರುಶ್ರದ್ಧೆಯೇ ಗುರುವಿನ ಅನುಗ್ರಹಕ್ಕೆ ಕಾರಣವಾಯಿತು. ಕಚ-ಶುಕ್ರಾಚಾರ್ಯರ ಪ್ರಕರಣವಂತೂ ಇನ್ನೊಂದು ಆಯಾಮದ್ದು. ಗುರುಗಳಾದ ಶುಕ್ರರನ್ನು ಅವರ ಮಾತಿನಂತೆ ಪಿತೃಭಾವದಿಂದ ಕಂಡ ಕಾರಣದಿಂದಲೇ ದೇವಯಾನಿಯು ಶಾಪವಿತ್ತರೂ ಪಡೆದ ವಿದ್ಯೆ ವ್ಯರ್ಥವಾಗದೆ ದೇವತೆಗಳ ಉದ್ದೇಶ ಸಫಲವಾಯಿತು. ಸುಳ್ಳು ಹೇಳಿ ಗುರುವಿನಿಂದ ವಿದ್ಯೆಯನ್ನು ಪಡೆದ ಕರ್ಣನಿಗೆ ಗುರುವಿನ ಅವಗ್ರಹಕ್ಕೆ ತುತ್ತಾದ ಕಾರಣ ಆ ವಿದ್ಯೆ ಸಕಾಲಕ್ಕೆ ಒದಗದೆ ಹೋದದ್ದು ಇದರ ವಿರುದ್ಧ ವೃತ್ತಾಂತ.
ಗುರು-ಶಿಷ್ಯರ ಆ ಬಂಧ ಅನ್ಯೋನ್ಯವಾದುದೂ ಹೌದು. 'ಶಂ ನೋ ಮಿತ್ರಃ ಶಂ ವರುಣಃ...' 'ಸಹ ನಾವವತು, ಸಹ ನೌ ಭುನಕ್ತು...' ಎಂದು ಭಗವಂತನು ನಮ್ಮಿಬ್ಬರನ್ನೂ ಜೊತೆಯಾಗಿ ಸಲಹಲಿ, ಜೊತೆಯಾಗಿ ಉಣ್ಣೋಣ ಎಂಬ ಅನ್ಯೋನ್ಯಭಾವ ಅವರಿಬ್ಬರದ್ದು. ಅಂತಹ ಶಿಷ್ಯನನ್ನು ವಿದ್ಯಾಭ್ಯಾಸದ ಬಳಿಕ ಬೀಳ್ಕೊಡುವಾಗ 'ಮಾತೃದೇವೋ ಭವ, ಪಿತೃದೇವೋ ಭವ...' 'ಸತ್ಯಂ ವದ ಧರ್ಮಂ ಚರ' 'ಶ್ರದ್ಧಯಾ ದೇಯಂ'ಎಂಬ ನವಿರಾದ ಕಿವಿಮಾತು ಗುರುಗಳದ್ದು. ಜೊತೆಗೆ ಸ್ವಾಧ್ಯಾಯ ಪ್ರವಚನಗಳನ್ನು, ದೇವಪಿತೃಕಾರ್ಯಗಳನ್ನು ಮೈಮರೆಯದೆ ಮಾಡಬೇಕೆಂಬ ಎಚ್ಚರಿಕೆಯ ಸಂದೇಶ. ಹಾಗೆಯೇ 'ಪ್ರಜಾತಂತುಂ ಮಾ ವ್ಯವಚ್ಛೇತ್ಸೀಃ' - ಗೃಹಸ್ಥಾಶ್ರಮದ ಮೂಲಕ ಮುತ್ತಾತ, ತಾತ, ತಂದೆ ಇವರಿಂದ ಬಂದ ವಂಶಪರಂಪರೆಯನ್ನು ಮುಂದುವರಿಸಬೇಕು ಎಂಬ ಮಾರ್ಗದರ್ಶನ. ಅಂತೆಯೇ 'ಯಾನ್ಯಸ್ಮಾಕಂ ಸುಚರಿತಾನಿ ತಾನಿ ತ್ವಯೋಪಾಸ್ಯಾನಿ' ನನ್ನ ಒಳ್ಳೆಯ ನಡವಳಿಕೆಯನ್ನು ನೀನು ಅನುಸರಿಸು ಎಂಬ ಹಿತನುಡಿ. ತಾನು ಮಾಡಿದ್ದೆಲ್ಲ ಸರಿ ಎಂಬ ಅಹಂಕಾರವಿಲ್ಲದ ನಮ್ರಭಾವ. ಇನ್ನೇನಾದರೂ ಈ ವಿಚಾರದಲ್ಲಿ ಸಂದೇಹವುಂಟಾದರೆ ನಿನ್ನ ಸುತ್ತಮುತ್ತಲಿನ ಉತ್ತಮ ಜನರ ನಡವಳಿಕೆಯೇ ನಿನಗೆ ಮಾದರಿ ಎಂಬ ಉಪದೇಶ.
ಇಂತಹ ಪರಂಪರೆಯನ್ನು ಕಂಡೇ 'ಮುಂದೆ ಗುರಿಯಿರಬೇಕು, ಹಿಂದೆ ಗುರುವಿರಬೇಕು' ಎಂಬ ನಾಣ್ಣುಡಿ ಹುಟ್ಟಿಕೊಂಡಿರುವುದು. ಪ್ರಪಂಚದಲ್ಲಿ ಯಾರೂ ಯಾರ ಜೊತೆಗೂ ಸೋಲಲು ಬಯಸುವುದಿಲ್ಲ. ಅಂತಹವನೊಬ್ಬನಿದ್ದರೆ ಅದು ಗುರು ಮಾತ್ರ. 'ಶಿಷ್ಯಾದಿಚ್ಛೇತ್ ಪರಾಜಯಂ'- ಶಿಷ್ಯನಿಂದ ಸೋಲನ್ನು ಬಯಸಬೇಕು ಎಂದಿದ್ದಾರೆ. ದ್ರೋಣ-ಅರ್ಜುನ, ಪರಶುರಾಮ-ಭೀಷ್ಮ ಇವರ ಪ್ರಕರಣಗಳೇ ಇದಕ್ಕೆ ಮಾದರಿ. ತನ್ನ ಶಿಷ್ಯ ತನ್ನನ್ನು ಸೋಲಿಸಬಲ್ಲ ಎಂದಾದರೆ ಅದೇ ಗುರುವಿನ ಗೆಲುವಲ್ಲವೇ?
ಇದೆಲ್ಲ ಆಗಿನ ಕಾಲದ ಮಾತು. ಇದೆಲ್ಲ ಈಗ ಆಧುನಿಕ ಶಿಕ್ಷಣ ಕ್ರಮದಲ್ಲಿ ಸಾಧ್ಯವಿಲ್ಲ. ಅಂತಹ ಗುರುಗಳೂ ಈಗಿಲ್ಲ, ಶಿಷ್ಯರೂ ಇಲ್ಲ. ವಾತಾವರಣವಂತೂ ಮೊದಲೇ ಇಲ್ಲ ಎಂಬ ಮಾತಿದೆ. ಆದರೆ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಮಕ್ಕಳಿಗೆ ನೀಡುವ ಮೂಲಕ ಅಂತಹ ವಾತಾವರಣವನ್ನು ಕಲ್ಪಿಸಬಹುದು. 'ಆಚಾರ್ಯದೇವೋ ಭವ' ಎಂಬ ಉತ್ತಮ ಸಂಸ್ಕೃತಿ ನಮ್ಮದು. ಗುರುವನ್ನು ತ್ರಿಮೂರ್ತಿಗಳಿಗೆ ಸಮಾನವೆಂದು ಪರಿಗಣಿಸಿದ ಸಂಸ್ಕಾರ ನಮ್ಮದು. ಗುರುಪೂರ್ಣಿಮೆಯ ಈ ಶುಭದಿನ ನಮ್ಮೆಲ್ಲ ಗುರುಗಳ ಪಾದಗಳಿಗೆರಗಿ ಅವರ ಆಶೀರ್ವಾದ ನಮಗಿರಲಿ ಎಂದು ಪ್ರಾರ್ಥಿಸೋಣ.
-ಡಾ. ವಿಜಯಲಕ್ಷ್ಮಿ ಎಂ.
ಸಹಾಯಕ ಪ್ರಾಧ್ಯಾಪಕರು
ಸಂಸ್ಕೃತ ವಿಭಾಗ
ಎಂ.ಜಿ.ಎಂ. ಕಾಲೇಜು, ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ