ಭಾರತದ ಭವ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗುರಿಯೆಡೆಗೆ ನಿರ್ದೇಶಿಸುವವನೇ ಗುರು ಎಂದು ಹೇಳಲಾಗುತ್ತದೆ. ಅಜ್ಞಾನವೆಂಬ ಅಂಧಕಾರ ಕಳೆದು ಜ್ಞಾನದ ಬೆಳಕು ನೀಡುವವನು ಗುರು. ಆದ್ದರಿಂದಲೇ ನಮ್ಮ ಸಂಸ್ಕೃತಿಯಲ್ಲಿ 'ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ' ಎನ್ನಲಾಗಿದೆ. ಅರ್ಥಾತ್ ಗುರುವನ್ನು ಭಗವತ್ ಸ್ವರೂಪಿ ಎನ್ನಲಾಗಿದೆ. ಇಂತಹ ಮಹಾ ಮಹಿಮನ ಪೂಜೆ, ಆರಾಧನೆಗೆ, ಗೌರವ ಸಲ್ಲಿಕೆಗೆ ಮೀಸಲಾದ ಪರಮ ಪುಣ್ಯ ದಿನವೇ ಗುರು ಹುಣ್ಣಿಮೆ. ಇದನ್ನು ವ್ಯಾಸ ಪೌರ್ಣಮಿ ಎಂದೂ ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ವೇದಗಳನ್ನು ವಿಭಾಗಿಸಿ ತಾರ್ಕಿಕ ಚೌಕಟ್ಟು ಒದಗಿಸಿದ ನಾರಾಯಣ ಸ್ವರೂಪರಾದ ಮಹರ್ಷಿ ವ್ಯಾಸರನ್ನು ಆದಿ ಗುರು ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ದಿನವನ್ನು ವ್ಯಾಸ ಹುಣ್ಣಿಮೆ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇಂದು ನಮ್ಮ ಪರಂಪರೆಯಲ್ಲಿ ಪರಮಗುರುವೆಂದು ನಂಬಲಾಗಿರುವ ಶಿವನನ್ನು ದಕ್ಷಿಣಾಮೂರ್ತಿ ರೂಪದಲ್ಲಿ ಆರಾಧಿಸಲಾಗುತ್ತದೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಶಿವನನ್ನು ಗುರುಗಳ ಗುರು ಎಂದು ಬಣ್ಣಿಸಲಾಗಿದೆ. ಶಿವನೇ ಗುರು ಹಾಗೂ ಗುರು ಶಿವ ಸ್ವರೂಪನು. ಕೈಲಾಸ ಪರ್ವತದಲ್ಲಿ ಕುಳಿತಿರುವ ಶಿವನು ಸಾಧು ಸಂತರಿಗೆ, ಸಿದ್ಧರಿಗೆ, ಋಷಿಮುನಿಗಳಿಗೆ ಪರಮ ಗುರಿಯಾದ ಮೋಕ್ಷ ಪಥದೆಡೆಗೆ ದಾರಿ ತೋರುವವನು. ಆಧ್ಯಾತ್ಮಿಕ ಪರಂಪರೆಯ ಅತಿ ನಿಗೂಢ ಜ್ಞಾನವನ್ನು ನೀಡುವವನು. ಹೀಗೆ ಶಿವನು ದಕ್ಷಿಣಾಭಿಮುಖವಾಗಿ ಕುಳಿತು ತನ್ನ ಶಿಷ್ಯರಿಗೆ ಜ್ಞಾನ ನೀಡುವುದರಿಂದ ಈತನಿಗೆ ದಕ್ಷಿಣಾಮೂರ್ತಿ ಎಂಬ ಹೆಸರು. ಇನ್ನೊಂದು ವಿಧದಲ್ಲಿ ದಕ್ಷಿಣಾ ಎಂದರೆ ಬುದ್ಧಿ. ಅಂದರೆ ಜ್ಞಾನದ ಕಡೆಗೆ ಅಭಿಮುಖನಾಗಿರುವುರಿಂದ ಇವನು ದಕ್ಷಿಣಾಮೂರ್ತಿ.
ದಕ್ಷಿಣಾಮೂರ್ತಿಯ ಸ್ವರೂಪ:
ವೀಣೆ, ಮುತ್ತಿನ ಜಪಮಾಲೆ, ಪುಸ್ತಕ, ಜ್ಞಾನಮುದ್ರೆ ಅಥವಾ ಅಗ್ನಿನಾಗಗಳನ್ನು ಚತುರ್ಭುಜಗಳಲ್ಲಿ ಧರಿಸಿ ಬೆಳ್ಳಿಯಂತೆ ಶುಭ್ರವರ್ಣದಿಂದ ಕೂಡಿದ ಭಸ್ಮಲೇಪಿತ ಶರೀರವುಳ್ಳವನೂ ತ್ರಿಲೋಚನನೂ ತಲೆಯಲ್ಲಿ ಚಂದ್ರಕಲೆಯುಳ್ಳವನೂ ಕಿರೀಟಧಾರಿಯೂ ಯೋಗಾಸನಾರೂಢನೂ ಆಗಿರುವಂತೆ ಈ ದೇವತೆಯನ್ನು ವೇದಗಳಲ್ಲಿ ವರ್ಣಿಸಲಾಗಿದೆ. ಪ್ರಳಯ ಕಾಲದಲ್ಲಿ ಇವನು ಎಲ್ಲವನ್ನು ತನ್ನಲ್ಲಿ ಸಂಹರಿಸಿಕೊಂಡು ಸ್ವಾತ್ಮಾನಂದ ಸುಖದಲ್ಲಿ ವಿಹರಿಸುತ್ತಾನೆ ಎಂಬುದಾಗಿ ವಿವರಿಸಲಾಗಿದೆ. ಈತನು ಜ್ಞಾನಕ್ಕೆ ಅಧಿದೇವತೆ ಯಾದ್ದರಿಂದ ಮೇಧಾ ದಕ್ಷಿಣಾಮೂರ್ತಿ ಎಂಬ ಹೆಸರೂ ಇದ್ದು, ಇವನ ಅನುಗ್ರಹದಿಂದ ಸಕಲ ಜ್ಞಾನವೂ ಸಿದ್ಧಿಸುತ್ತದೆ ಎಂದು ವೇದಗಳು ಸಾರುತ್ತವೆ. ಧರ್ಮಗ್ರಂಥಗಳ ಪ್ರಕಾರ ಒಬ್ಬ ವ್ಯಕ್ತಿಗೆ ಗುರುವಿಲ್ಲದಿದ್ದರೆ ಆತ ಪರಮಗುರುವಾದ ದಕ್ಷಿಣಾಮೂರ್ತಿಯನ್ನು ತನ್ನ ಗುರುವಾಗಿ ಸ್ವೀಕರಿಸಿ ಇಹಪರ ಸೌಖ್ಯ ಸಾಧಿಸಬಹುದು.
ದಕ್ಷಿಣಾಮೂರ್ತಿ ಶ್ಲೋಕ:
ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |
ನಿಧಯೇ ಸರ್ವವಿದ್ಯಾನಾಂ
ದಕ್ಷಿಣಾಮೂರ್ತಯೇ ನಮಃ ||
ಇದು ದಕ್ಷಿಣಾಮೂರ್ತಿಯನ್ನು ಕುರಿತ ಪ್ರಸಿದ್ಧ ಶ್ಲೋಕವಾಗಿದ್ದು ಇದರ ಅರ್ಥ ಸರ್ವಲೋಕಗಳಿಗೆ ಗುರುವೂ ಭವರೋಗಿಗಳಿಗೆ ವೈದ್ಯನೂ ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ.
ವ್ಯಾವಹಾರಿಕ ರೂಪದ ಉಪದೇಶ ಮಿಥ್ಯೆಯಾದ ಕಾರಣ ಜ್ಞಾನ (ಬ್ರಹ್ಮ) ಮೂರ್ತಿಯಾದ ಈ ದೇವತೆ ಮುಖದಿಂದ ಯಾವ ಉಪದೇಶವನ್ನೂ ಮಾಡು ವುದಿಲ್ಲ. ಆದಕಾರಣ ಈ ಮೂರ್ತಿಯ ಗುರುರೂಪವಾದ ಉಪದೇಶ ಮೌನವಷ್ಟೇ. ಶಿಷ್ಯರು ಈ ಮುದ್ರೆಯಿಂದಲೇ ಸಂಶಯಮುಕ್ತರಾಗಿ ಜ್ಞಾನಿಗಳಾಗುತ್ತಾರೆ. ಇದಕ್ಕೆ ತಮ್ಮ ಮೌನದಿಂದಲೇ ಶಿಷ್ಯರ ಸಂಶಯಗಳನ್ನು ಪರಿಹರಿಸಿ ಜ್ಞಾನ ನೀಡುತ್ತಿದ್ದ ಮೌನ ಮಹರ್ಷಿ ಎಂದೇ ಖ್ಯಾತರಾದ ಅರುಣಾಚಲದ ರಮಣ ಮಹರ್ಷಿಗಳನ್ನು ಉದಾಹರಿಸಬಹುದು. ಭಾರತದ ತತ್ತ್ವ ಜ್ಞಾನ ಪರಂಪರೆಯಲ್ಲಿ, ಗುರು ಪರಂಪರೆಯಲ್ಲಿ ಇಂತಹ ಅನೇಕ ಮಹಾನ್ ಗುರುಗಳ ದೊಡ್ಡ ಪಟ್ಟಿಯೇ ಇದೆ.
ಸನಾತನ ಧರ್ಮದಲ್ಲಿ ದಕ್ಷಿಣಾಮೂರ್ತಿ ಗುರು ಪರಂಪರೆಯ ಆಧಾರ ಸ್ವರೂಪಿ. ಗುರುರೂಪಿ ಶಿವ ಹಾಗೂ ತಾವು ಪಡೆದ ಜ್ಞಾನ ಹಂಚುವ ಋಷಿಮುನಿಗಳು, ಮಹಾಪುರುಷರ ನಡುವೆ ಯಾವುದೇ ಬೇಧವಿಲ್ಲ. ಅವರೂ ಶಿವಸ್ವರೂಪರೇ. ವೇದಗಳ ಪ್ರಕಾರ ಗುರು ಸ್ವರೂಪನಾದ ದಕ್ಷಿಣಾಮೂರ್ತಿ ತಾನೇ ವ್ಯೋಮ, ತಾನೇ ಜೀವ ಹಾಗೂ ತಾನೇ ಜಗತ್ತು ಹಾಗೂ ತಾನೇ ಸೃಷ್ಟಿಕರ್ತ. ಹೀಗಾಗಿ ಜೀವ, ಜಗತ್ತು ಮತ್ತು ಈಶ್ವರ ದಕ್ಷಿಣಾಮೂರ್ತಿಯ ವಿವಿಧ ಆಯಾಮಗಳು. ಇಂತಹ ಘನಮಹಿಮನಾದ ದಕ್ಷಿಣಾ ಮೂರ್ತಿಯನ್ನು ಕುರಿತು ಆದಿ ಶಂಕರಾಚಾರ್ಯರು ಸ್ತೋತ್ರ ರಚಿಸಿದ್ದು ಇದು 'ದಕ್ಷಿಣಾ ಮೂರ್ತಿ ಸ್ತೋತ್ರ'ವೆಂದೇ ಹೆಸರಾಗಿದೆ. ಇದು ಅದ್ವೈತ ವೇದಾಂತದಲ್ಲಿ ಮಹತ್ವದ ಸ್ತೋತ್ರ ವಾಗಿದೆ. ಇದರ ಪ್ರಾರಂಭಿಕ ಸಾಲುಗಳಲ್ಲಿ ಜ್ಞಾನ ನಿಧಿಯಾದ ದಕ್ಷಿಣಾಮೂರ್ತಿಯ ಆಶೀರ್ವಾದ ಬೇಡುವ ಶ್ಲೋಕಗಳನ್ನು ಕಾಣಬಹುದು. ಇದರಲ್ಲಿ ತೇಜೋಪುಂಜನಾದ ಶಿವನು ತರುಣ ಸ್ವರೂಪಿಯಾಗಿ ಜ್ಞಾನ ಪಡೆವ ಹಂಬಲದಲ್ಲಿರುವ, ತನಗೆ ಶರಣು ಹೋದ ಶಿಷ್ಯರಿಂದ ಸುತ್ತುವರಿಯಲ್ಪಟ್ಟಿದ್ದಾನೆ. ಹೀಗೆ ತನ್ನನ್ನು ಆಶ್ರಯಿಸಿದವರಿಗೆ ದಕ್ಷಿಣಾಮೂರ್ತಿಯು ಲೌಕಿಕ ಸುಖ ಭೋಗಗಳನ್ನು ಕರುಣಿಸುವುದರ ಜೊತೆಗೆ ಪರಮ ಗಮ್ಯವಾದ ಮೋಕ್ಷವನ್ನು ಕರುಣಿಸುತ್ತಾನೆ ಎನ್ನಲಾಗುತ್ತದೆ.
ಒಟ್ಟಿನಲ್ಲಿ ಅಲೌಕಿಕ ಜ್ಞಾನ ನೀಡಿ ಮೋಕ್ಷ ಪಥದೆಡೆಗೆ ನಡೆಸುವ ಮಹಾಗುರುವಾದ ದಕ್ಷಿಣಾಮೂರ್ತಿಯನ್ನು ಸೇರಿ, ನಮ್ಮ ಬಾಳಿಗೆ ಬೆಳಕಾದ ಎಲ್ಲ ಗುರುಗಳನ್ನು ನೆನೆದು ಅವರನ್ನು ಆರಾಧಿಸುವುದು, ಗೌರವ ಸಮರ್ಪಿಸುವುದು ಈ ಪುಣ್ಯ ದಿನದ ವಿಶೇಷವೇ ಹೌದು.
ಎಸ್.ಎಲ್. ವರಲಕ್ಷ್ಮೀಮಂಜುನಾಥ್. ನಂಜನಗೂಡು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ