ಸರಳ ಸಜ್ಜನ ರಾಜಕಾರಣಿ, ಮಾಜಿ ಸ್ಪೀಕರ್ ಕೃಷ್ಣ ಅವರ ಆದರ್ಶಗಳು ಇಂದಿನವರಿಗೆ ಮಾದರಿ: ಚೆಲುವರಾಯಸ್ವಾಮಿ

Upayuktha
0

ಕೃಷ್ಣ ಅವರ 83ನೇ ವರ್ಷದ ಹುಟ್ಟು ಹಬ್ಬ, ಕೃಷ್ಣ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ



ಕೆ.ಆರ್.ಪೇಟೆ (ಮಂಡ್ಯ): ಕಲುಷಿತಗೊಂಡಿರುವ ಇಂದಿನ ರಾಜಕಾರಣದಲ್ಲಿ ಪ್ರಾಮಾಣಿಕತೆ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡು ಶ್ರೀಸಾಮಾನ್ಯರ ಮಧ್ಯದಲ್ಲಿದ್ದುಕೊಂಡು ಜನಪರ ಕೆಲಸ ಮಾಡಿದ ಸರಳ ಸಜ್ಜನ ರಾಜಕಾರಣಿ ಮಾಜಿ ಸ್ಪೀಕರ್ ಕೃಷ್ಣ ಅವರ ಆದರ್ಶಗಳು ಇಂದಿನ ರಾಜಕಾರಣಿಗಳು ಹಾಗೂ ಯುವ ಜನರಿಗೆ ಮಾದರಿಯಾಗಿವೆ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಹೇಳಿದರು.


ಅವರು ಭಾನುವಾರ (ಜು.2) ಕೆ.ಆರ್ ಪೇಟೆ ಪಟ್ಟಣದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರ 83ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಡೆದ ಕೃಷ್ಣ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು.


ಕೃಷ್ಣ ಅವರಂತಹ ಮೌಲ್ಯಾಧಾರಿತ ರಾಜಕಾರಣಿಗಳು ಇಂದಿನ ದಿನಮಾನದಲ್ಲಿ ಅಪರೂಪವಾಗುತ್ತಿದ್ದಾರೆ. ಕೃಷ್ಣರ ಆದರ್ಶಗಳು ಹಾಗೂ ಪ್ರಾಮಾಣಿಕತೆಯನ್ನು ನಮ್ಮ ಮುಂದಿನ ಯುವ ಜನಾಂಗಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅವಶ್ಯಕತೆ ಇರುವುದರಿಂದ ಕೃಷ್ಣ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿರುವ ಇಂದಿನ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ. ನುಡಿದಂತೆ ನಡೆಯುವ ನೇರ ನಿಷ್ಠುರವಾದಿ ರಾಜಕಾರಣಿ ಆಗಿದ್ದ ಕೃಷ್ಣ ಅವರು ತಮ್ಮ ಜೀವನದುದ್ದಕ್ಕೂ ಗಾಂಧಿ ಗಿರಿಯನ್ನು ಮೈಗೂಡಿಸಿಕೊಂಡು ಸರಳವಾಗಿ ಜೀವನವನ್ನು ನಡೆಸಿದರು. ಕೃಷ್ಣ ಅವರ ಆದರ್ಶ ಗುಣಗಳನ್ನು ನಮ್ಮ ಮುಂದಿನ ತಲೆಮಾರಿಗೆ ತಲುಪಿಸುವ ದೃಷ್ಟಿಯಿಂದ ಇಂದಿನ ಹುಟ್ಟುಹಬ್ಬದ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಆದ್ದರಿಂದ ನಾನು ಕಾರ್ಯಕ್ರಮದ ಸಂಘಟಕರನ್ನು ಅಭಿನಂದಿಸುತ್ತೇನೆ. ಕೃಷ್ಣ ಪ್ರತಿಷ್ಠಾನದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳು ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಚೆಲುವರಾಯಸ್ವಾಮಿ ಹೇಳಿದರು.


ರಾಜ್ಯದ ಅಕ್ರಮ ಭೂ ಒತ್ತುವರಿ ತೆರವು ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿ ಮಾತನಾಡಿ, ಕೃಷ್ಣ ಅವರ ರಾಜಕೀಯ ಜೀವನ ಒಂದು ತೆರೆದ ಪುಸ್ತಕವಿದ್ದಂತೆ. 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪ್ರಾಮಾಣಿಕ ಆಡಳಿತ ನೀಡಿದ್ದಾರೆ. ಕೃಷ್ಣ ಅವರು ತಮ್ಮ ಮನೆ ಬಾಗಿಲಿಗೆ ಗುತ್ತಿಗೆದಾರರೊಬ್ಬರು ತೆಗೆದುಕೊಂಡು ಹೋಗಿದ್ದ ಹಣವನ್ನು ಸ್ವೀಕರಿಸದೆ ಗೆಟೌಟ್ ಎಂದು ಹೇಳಿದ ದಿಟ್ಟ ಧೀಮಂತ ರಾಜಕಾರಣಿ ಎಂದರೆ ಅದು ಕೆ ಆರ್ ಪೇಟೆ ಕೃಷ್ಣ ಮಾತ್ರ. ಕೃಷ್ಣ ಅವರು ನನ್ನ ಗುರುಗಳು ಎಂದು ಹೇಳಿಕೊಳ್ಳಲು ನನಗೆ ಅಭಿಮಾನ ಎನಿಸುತ್ತದೆ ಎಂದು ಹೇಳಿದ ರಾಮಸ್ವಾಮಿ ಕಲುಹಿತಗೊಂಡಿರುವ ಇಂದಿನ ರಾಜಕೀಯ ರಂಗದಲ್ಲಿ ಕೃಷ್ಣ ಅವರಂತಹ ಪ್ರಾಮಾಣಿಕರು ಸಿಗುವುದು ವಿರಳ. ಮಂತ್ರಿಯಾಗಿ, ಸ್ಪೀಕರ್ ಆಗಿ, ಸಂಸದರಾಗಿ ಸೇವೆ ಸಲ್ಲಿಸಿದ್ದರೂ ಯಾವುದೇ ಗರ್ವ ಅಹಂಕಾರವಿಲ್ಲದೇ ಬಸ್ಸಿನಲ್ಲಿ ಓಡಾಡುವ ಸರಳ ವ್ಯಕ್ತಿತ್ವ ಶ್ರೇಷ್ಠ ರಾಜಕಾರಣಿಗಳ ಪೈಕಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಮಂಡ್ಯದ ಗಾಂಧಿ ಎಂಬ ಹೆಸರಿಗೆ ಭಾಜನರಾಗಿ ಹತ್ತು ಹಲವು ಸಾಧನೆಗಳನ್ನು ಮಾಡಿದ ಕೃಷ್ಣ ಇತಿಹಾಸ ನಿರ್ಮಿಸಿದ್ದಾರೆ ಎಂದು ಗುಣಗಾನ ಮಾಡಿದರು.


ಮಾಜಿ ಸಚಿವ ಡಾ. ನಾರಾಯಣ ಗೌಡ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಶ್ರಮಿಸಿದ ಕೃಷ್ಣ ಕೃಷ್ಣರಾಜಪೇಟೆ ತಾಲೂಕಿನ ಅಭಿವೃದ್ಧಿಗೆ ಸಮಗ್ರವಾದ ಕಾಣಿಕೆಯನ್ನು ನೀಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಾಂತ್ರಿಕ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಕೆ ಆರ್ ಪೇಟೆಗೆ ತಂದಿದ್ದರು. ಆದ್ದರಿಂದ ಇಂಜಿನಿಯರಿಂಗ್ ಕಾಲೇಜಿಗೆ ಕೆ.ಆರ್ ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂದು ಸರ್ಕಾರದ ವತಿಯಿಂದ ನಾಮಕರಣ ಮಾಡಿದ್ದಲ್ಲದೆ ಕೃಷ್ಣ ಅವರ ಪುತ್ಥಳಿಯನ್ನು ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗಿದೆ. ಕೃಷ್ಣ ಅವರಂತೆ ಪ್ರಾಮಾಣಿಕ ಜೀವನ ನಡೆಸುವುದು ಇಂದಿನ ರಾಜಕಾರಣಿಗಳಿಗೆ ಕಷ್ಟಕರವಾಗಿದೆ ಎಂದು ಕೃಷ್ಣ ಅವರ ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು.


ಕೆ.ಆರ್ ಪೇಟೆ ಶಾಸಕ ಎಚ್.ಟಿ ಮಂಜು ಅವರು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊಫೆಸರ್ ಬಿ ಜಯಪ್ರಕಾಶ್ ಗೌಡ, ಪ್ರಗತಿಪರ ಕೃಷಿಕ ಪ್ರಸನ್ನ, ಶ್ರೀಗಂಧ ಬೆಳೆಗಾರ ಮಾವಿನಕೆರೆ ರಮೇಶ್, ಉರಗ ತಜ್ಞ ಸ್ನೇಕ್ ಮುನ್ನ, ಆಶಾ ಕಾರ್ಯಕರ್ತೆ ವಿಠಲಾಪುರ ಎಂ.ಆರ್.ಜ್ಯೋತಿ, ಅಂಗನವಾಡಿ ಶಿಕ್ಷಕಿ ಅನುವಿನಕಟ್ಟೆ ಶೋಭ  ಅವರು ಮಾಜಿ ಸ್ಪೀಕರ್ ಕೃಷ್ಣ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.


ಜಿಲ್ಲಾ ಪಂಚಾಯಿತಿ‌ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್ ಸನ್ಮಾನಿತರಾದ ಎಲ್ಲರಿಗೂ ತಲಾ ಐದು ಸಾವಿರ, ವಿದ್ಯಾರ್ಥಿಗಳಿಗೆ ತಲಾ ಎರಡೂವರೆ ಸಾವಿರ ರೂ ನಗದು ಪುರಸ್ಕಾರಕ್ಕೆ 45ಸಾವಿರ ರೂ ದೇಣಿಗೆ  ನೀಡಿದರು. 


ಕೆ.ಆರ್ ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಳ್ಳಿ ಜವರಾಯಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಕೃಷ್ಣ ಪ್ರತಿಷ್ಠಾನದ ಉಪಾಧ್ಯಕ್ಷ ಕೆ.ಟಿ. ಚಂದ್ರೇಗೌಡ, ಕಾರ್ಯದರ್ಶಿ ವಾಸು, ಖಜಾಂಚಿ ಹೆಮ್ಮನಹಳ್ಳಿ ರಮೇಶ್, ಸಹ ಕಾರ್ಯದರ್ಶಿ ಹೊಸಹೊಳಲು ಮಂಜುಳಮ್ಮ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಮನ್ ಮುಲ್ ನಿರ್ದೇಶಕ ಡಾಲು ರವಿ, ಮಾಜಿ ಅಧ್ಯಕ್ಷರಾದ ಎಂ.ಬಿ.ಹರೀಶ್, ಚನ್ನಿಂಗೇಗೌಡ, ಬಿ.ಜವರಾಯಿಗೌಡ, ಆರ್.ಎಸ್.ಶಿವರಾಮೇಗೌಡ, ಅಂಚಿ ಸಣ್ಣಸ್ವಾಮೀಗೌಡ, ನಿವೃತ್ತ ಕೆ.ಇ.ಬಿ ಇಂಜಿನಿಯರ್ ಆಲೇನಹಳ್ಳಿ ಜಯರಾಜು, ಹಾದನೂರು ಪರಮೇಶ್, ಸಂತೇಬಾಚಹಳ್ಳಿ ನಾಗರಾಜು, ಕೆ.ಟಿ.ಚಂದ್ರೇಗೌಡ, ಸಿಂಧುಘಟ್ಟ ರವಿ, ಮಾಕವಳ್ಳಿ ವಸಂತಕುಮಾರ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿ ನಾಗೇಂದ್ರ ಕುಮಾರ್, ಕೃಷ್ಣ ಅವರ ಧರ್ಮಪತ್ನಿ ಇಂದ್ರಮ್ಮ, ರೈತ ಮುಖಂಡರಾದ  ಮಂದಗೆರೆ ಕೆ.ಆರ್. ಜಯರಾಮ್, ನಂದಿನಿ ಜಯರಾಮ್, ಹೊಸಹೊಳಲು ಮಂಜುಳಮ್ಮ, ಕೊಟಗಹಳ್ಳಿ ಮಂಜುಳಾ, ಆಲಂಬಾಡಿಕಾವಲು ಎ.ರಾಜು ಸೇರಿದಂತೆ  ಕೃಷ್ಣ ಅವರ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕೃಷ್ಣ ಅವರ ಧರ್ಮಪತ್ನಿ ಪ್ರೊ.ಇಂದಿರಾಕೃಷ್ಣ ಅವರು ಜೈಹಿಂದ್ ಉಚಿತ ವೃದ್ದಾಶ್ರಮಕ್ಕೆ ಕೃಷ್ಣ ರವರ ಹುಟ್ಟು ಹಬ್ಬದ ಅಂಗವಾಗಿ 10 ಸಾವಿರ ನಗದು ದೇಣಿಗೆ ನೀಡಿದರು. 

ದೇಣಿಗೆ: 

ಕೃಷ್ಣ ಪ್ರತಿಷ್ಠಾನ ಟ್ರಸ್ಟ್ ಗೆ ಶೂದ್ರಶಕ್ತಿ ಪತ್ರಿಕೆ ಸಂಪಾದಕ 1 ಲಕ್ಷ ರೂ, ನಿವೃತ್ತ ಕೆ.ಇ.ಬಿ ಇಂಜಿನಿಯರ್ ಆಲೇನಹಳ್ಳಿ ಜಯರಾಜು 1.5 ಲಕ್ಷ ರೂ, ನಿವೃತ್ತ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಐ.ಸಿ.ಬಸವರಾಜು 25ಸಾವಿರ ರೂ, ನಾಟನಹಳ್ಳಿ ಹಾಗೂ ಬಂಡಿಹೊಳೆ ಹಾಲು ಉತ್ಪಾದಕರ ಸಹಕಾರ ಸಂಘ ತಲಾ 10 ಸಾವಿರ ದೇಣಿಗೆ ನೀಡಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top