ಮಂಗಳೂರು: 'ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆಯು ಹತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ದಶಮಾನೋತ್ಸವಕ್ಕೆ ಸಜ್ಜಾಗಿದೆ' ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ. ' ಇತ್ತೀಚೆಗೆ ಜರಗಿದ ಪೂರ್ವ ಸಿದ್ಧತಾ ಸಭೆಯಲ್ಲಿ '2022 ನವೆಂಬರ್ 21ರಿಂದ 27ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಶಮಾನ ಸಂಭ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ' ಎಂದರು.
ಹತ್ತನೇ ವರ್ಷದ ನುಡಿ ಹಬ್ಬ:
ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಹತ್ತನೇ ವರ್ಷದ ನುಡಿ ಹಬ್ಬ 'ಯಕ್ಷಗಾನ ತಾಳಮದ್ದಳೆ ಸಪ್ತಾಹ - 2022' ನಡೆಯಲಿದೆ.
ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲದೆ ಪ್ರತಿದಿನ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಲಾಪವನ್ನೂ ಏರ್ಪಡಿಸಲಾಗಿದೆ.
'ಸಪ್ತ ವಿಜಯ' ಪ್ರಸಂಗ ಸರಣಿ:
ದಶಮಾನೋತ್ಸವದ ಅಂಗವಾಗಿ 'ಸಪ್ತ ವಿಜಯ' ಪ್ರಸಂಗ ಸರಣಿಯನ್ನು ಸಂಯೋಜಿಸಿಕೊಳ್ಳಲಾಗಿದೆ. ನವೆಂಬರ 21ರಂದು ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗುವ ಯಕ್ಷಗಾನ ತಾಳಮದ್ದಳೆ ಕ್ರಮವಾಗಿ ಷಡಾನನ ವಿಜಯ, ವಾನರೇಶ್ವರ ವಿಜಯ, ವೀರಾಂಜನೇಯ ವಿಜಯ, ಭೀಮಸೇನ ವಿಜಯ, ವಿಕ್ರಮಾರ್ಜುನ ವಿಜಯ, ಸ್ವರಾಜ್ಯ ಸ್ವಾತಂತ್ರ್ಯ ವಿಜಯ ಮತ್ತು ಯಕ್ಷ ಲೋಕ ವಿಜಯ ಎಂಬ ಏಳು ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು. ದಿನಾಂಕ 27ರಂದು ಸಮಾರೋಪಕ್ಕೆ ಮುನ್ನ 'ಸಿರಿಕಿಟ್ಣ ವಿಜಯೊ' ಎಂಬ ತುಳು ಪ್ರಸಂಗವನ್ನೂ ಸಾಂದರ್ಭಿಕವಾಗಿ ಅಳವಡಿಸಿಕೊಳ್ಳಲಾಗಿದೆ.
ಸಂಸ್ಮರಣೆ - ಪ್ರಶಸ್ತಿ ಪ್ರದಾನ:
ಯಕ್ಷಾಂಗಣದ ವತಿಯಿಂದ ಯಕ್ಷಗಾನದ ಕಲಾಪೋಷಕರೊಬ್ಬರಿಗೆ ನೀಡುವ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ' ಮತ್ತು ಹಿರಿಯ ಕಲಾವಿದರಿಗೆ ಕೊಡ ಮಾಡುವ 'ಯಕ್ಷಾಂಗಣ ಗೌರವ ಪ್ರಶಸ್ತಿ'ಗೆ ಅರ್ಹರಾದ ಹಿರಿಯ ಸಾಧಕರನ್ನು ಆರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೆ ಅಗಲಿದ ಕಲಾವಿದರ ಸಂಸ್ಮರಣ ಕಾರ್ಯಕ್ರಮವನ್ನು ಪ್ರತಿ ದಿನ ನಡೆಸಲಾಗುವುದು ಎಂದು ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.
ಯಕ್ಷಾಂಗಣದ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷರಾದ ಬೆಟ್ಟಂಪಾಡಿ ಸುಂದರಶೆಟ್ಟಿ, ರವೀಂದ್ರ ರೈ ಹರೇಕಳ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ , ಜೊತೆ ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಮಹಿಳಾ ಪ್ರತಿನಿಧಿಗಳಾದ ನಿವೇದಿತಾ ಎನ್. ಶೆಟ್ಟಿ ಮತ್ತು ಸುಮಾ ಪ್ರಸಾದ್ ಸಭೆಯಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ