ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ನೀತಿ ಶೀಘ್ರದಲ್ಲೇ ಜಾರಿ: ಪ್ರೊ. ಪಿ ಎಸ್. ಯಡಪಡಿತ್ತಾಯ

Upayuktha
0

ಮಂಗಳಾ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯದ 43ನೇ ಸಂಸ್ಥಾಪನಾ ದಿನಾಚರಣೆ


ಮಂಗಳೂರು: ವರ್ಷಾಂತ್ಯದ ವೇಳೆಗೆ, ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಡಾ. ಬಿ ಆರ್ ಅಂಬೇಡ್ಕರ್, ವಿವೇಕಾನಂದರ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು. ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಘೋಷಿಸಿದ್ದಾರೆ. 


ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯದ 43 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು, ʼಟ್ರೀ ಪಾರ್ಕ್ʼ ಯೋಜನೆ ಜಾರಿ, ಮಂಗಳಾ ಅಲ್ಯುಮ್ನೈ ಅಸೋಸಿಯೇಷನ್ ನ ಕಟ್ಟಡಕ್ಕೆ ಜಾಗ ಗುರುತಿಸುವ ಕೆಲಸ ಶೀಘ್ರದಲ್ಲೇ ನಡೆಯಲಿದೆ, ಎಂದರು. “ಆತಂಕ, ಸವಾಲುಗಳಿದ್ದರೂ ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ. ಬಹುನಿರೀಕ್ಷೆಯ ಮಧ್ಯಾಹ್ನದ ಬಿಸಿಯೂಟವನ್ನು ಆರಂಭಿಸಲಾಗಿದೆ. ಶಹೀದ್ ಸ್ಥಳ, ವಾತ್ಸಲ್ಯ ನಿಧಿಗಳ ರಚನೆ, ಸತತ ಎರಡನೇ ಬಾರಿಗೆ ʼಕ್ಲಿನ್ ಅಂಡ್ ಗ್ರೀಸ್ ಕ್ಯಾಂಪಸ್ʼ ಗೌರವ ಪಡೆದಿರುವುದು, ಬೆಳಪುವಿನಲ್ಲಿ 5 ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸಿರುವುದು ಹೆಮ್ಮೆಯ ಸಂಗತಿಗಳು,” ಎಂದರು. 


ಅಂತಾರಾಷ್ಟ್ರೀಯ ತರಬೇತುದಾರ ಡಾ. ಭರತ್ ಚಂದ್ರ ತಮ್ಮ ವಿಶೇಷ ಉಪನ್ಯಾಸದಲ್ಲಿ, ಬದುಕಿನಲ್ಲಿ ಗುರಿಯಿಲ್ಲದಿದ್ದರೆ ನಾವು ಅಡಿಯಾಳಾಗುತ್ತೇವೆಯೇ ಹೊರತು, ಗುರುವಾಗಲಾರೆವು. ಕಷ್ಟಪಟ್ಟು ದುಡಿಯುವುದಕ್ಕಿಂತ, ಸಮಯದ ಸದುಪಯೋಗ, ಪರಿಣಾಮಕಾರಿ ಕೆಲಸ, ಸಾಧಿಸುವ ಹಸಿವು ನಮ್ಮನ್ನು ಬೆಳೆಸುತ್ತವೆ. “ನಮ್ಮ ಯಶಸ್ಸು ಮಾನಸಿಕವಾಗಿ ಆರಂಭಗೊಳ್ಳುತ್ತದೆ. ಆಲಸ್ಯ, ಕೀಳರಿಮೆ, ನೆಪ ಹೇಳುವ ಅಭ್ಯಾಸವಿದ್ದರೆ ನಮ್ಮಲ್ಲಿ ಇದ್ದಷ್ಟು ನಾವು ಮುಂದೆ ಸಾಗಲಾರೆವು,” ಎಂದರು. 


ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಮಾತನಾಡಿ, ಪಠ್ಯಪುಸ್ತಕ ರಚನೆಯಲ್ಲಿ ರಾಜಕೀಯ ಹಸ್ತಕ್ಷೇಪವಾಗಿರುವುದು ಬೇಸರದ ಸಂಗತಿ. ಶಿಕ್ಷಣ ಮತ್ತು ಆರೋಗ್ಯ ನಮ್ಮೆಲ್ಲರ ಮೂಲಭೂತ ಹಕ್ಕು, ಆದರೆ ಅವೆರಡೂ ದುಬಾರಿಯಾಗಿವೆ. ಈ ಸಂದರ್ಭದಲ್ಲಿ ಶೋಷಣೆಯ ವಿರುದ್ಧ ಹೋರಾಡಿದ, ಶಿಕ್ಷಣವನ್ನು ಪ್ರತಿಪಾಧಿಸಿದ ನಾರಾಯಣಗುರುಗಳು ನೆನಪಾಗುತ್ತಾರೆ. ನಮಗೆ ಈಗ ಜೀವನ ಶಿಕ್ಷಣದ ಅಗತ್ಯವಿದೆ. ವಿವಿಗಳು ಅನ್ವೇಷನಾ ಕೇಂದ್ರಗಳಾಗಬೇಕು, ನಿಜವಾದ ಗುಣಮಟ್ಟದ ಶಿಕ್ಷಣ ಎಂದರೇನು, ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು, ಎಂದರು. 


ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 28 ಜನರನ್ನು ಸನ್ಮಾನಿಸಲಾಯಿತು. ಅಮೈ ಮಹಾಲಿಂಗ ನಾಯ್ಕ (ಪದ್ಮಶ್ರೀ ಪ್ರಶಸ್ತಿ ವಿಜೇತ),  ಸ್ವಾಮಿ ಏಕಗಮ್ಯಾನಂದ ಜೀ (ಸಮಾಜ ಸೇವೆ), ಸದಾನಂದ ಶೆಟ್ಟಿ, ಕೆ ವಿ ರಾವ್ (ಸಂಶೋಧಕ), ಬಿ ಎಂ ರೋಹಿಣಿ (ಬರಹಗಾರ್ತಿ), ಹಾಜಿ ಯು ಕೆ ಮೋನು (ಉದ್ಯಮಿ), ಡಾ. ಎಂ ಜಗದೀಶ್ ಶೆಟ್ಟಿ ಬಿಜೈ (ಯೋಗ ಗುರು), ಎಂ. ವಾಮನ ಕಾಮತ್ (ವಾಣಿಜ್ಯೋದ್ಯಮಿ), ನಂದಳಿಕೆ ಬಾಲಚಂದ್ರ ರಾವ್ (ಸಮಾಜ ಸೇವೆ), ಡಾ. ಅಣ್ಣಯ್ಯ ಕುಲಾಲ್ (ಆರೋಗ್ಯ), ಎಂ. ನಾರಾಯಣ್ (ಸಂಗೀತ), ಆರ್ ಕೆ ಶೆಟ್ಟಿ (ಹಣಕಾಸು), ಎಸ್ ಎಸ್ ನಾಯಕ್  (ಶಿಕ್ಷಣ, ಹಣಕಾಸು), ಡಾ. ಶಿವರಾಮ ಕೆ ಭಂಡಾರಿ (ಉದ್ಯೋಗದಾತ), ರೋನ್ಸ್ ಬಂಟ್ವಾಳ (ಹೊರನಾಡ ಪತ್ರಕರ್ತ), ಗುರುವಪ್ಪ ಎನ್ ಬಾಳೆಪುಣಿ (ಪತ್ರಕರ್ತ), ರವಿ ಕಕ್ಕೆಪದವು (ಸಾಧಕ), ಮಾಧವ ಉಳ್ಳಾಲ್ (ಸಮಾಜ ಸೇವಕ), ರವಿ ಕಟಪಾಡಿ (ಸಮಾಜ ಸೇವಕ), ಲಾಲ್ ಗೋಯಲ್  (ಜನಜಾಗೃತಿ), ವಿಜಯ ಐತಾಳ್  (ಮಂಗಳೂರು ವಿವಿ ತಂತ್ರಜ್ಞ), ವಿಂಗ್ ಕಮಾಂಡರ್ ರೋಶೆಲ್ ಡಿಸಿಲ್ವಾ (ರಕ್ಷಣೆ), ಡಾ. ಶ್ಯಾಂ ಪ್ರಸಾದ್ ವಿ ಆರ್ (ಸಂಶೋಧಕ), ರಶ್ಮಿ ಜೆ ಅಂಚನ್ (ಎನ್ಎಸ್ಎಸ್), ಸೈಯದ್ ಅನ್ವರ್ ಹುಸೈನಿ (ಸಮರ ಕಲೆ) ಅವರು ಗೌರವ ಸ್ವೀಕರಿಸಿದರು. ಗೌರವಾನ್ವಿತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸನ್ಮಾನಿತರಾದ 28 ಸಾಧಕರ ಜೀವನಗಾಥೆಗಳನ್ನು ಪ್ರಸಾರಾಂಗದ ಮೂಲಕ ಪುಸ್ತಕ ರೂಪದಲ್ಲಿ ಹೊರತರುವ ಯೋಜನೆಯಿದೆ, ಎಂದು ಇದೇ ವೇಳೆ ಕುಲಪತಿ ಹೇಳಿದರು. 


ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ ಕೆ, ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ, ಹಣಕಾಸು ಸಚಿವ ಡಾ. ಜಯಪ್ಪ, ಮೊದಲಾದವರು ಹಾಜರಿದ್ದರು. ಕಾರ್ಯಕ್ರಮ ಸಂಯೋಜಕ ಪ್ರೊ. ಮಂಜುನಾಥ ಪಟ್ಟಾಭಿ ಧನ್ಯವಾದ ಸಮರ್ಪಿಸಿದರು. ಹಿರಿಯ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಹಾಗೂ ಡಾ. ಪ್ರೀತಿ ಕೀರ್ತಿ ಡಿʼಸೋಜ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ನಿಕೇತನ, ಕೊಡವೂರು, ಉಡುಪಿ ಇಲ್ಲಿನ ಕಲಾವಿದರಿಂದ ʼನೃತ್ಯ ಸಿಂಚನʼ ಕಾರ್ಯಕ್ರಮ ನಡೆಯಿತು. 

web counter

إرسال تعليق

0 تعليقات
إرسال تعليق (0)
To Top