ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕೊಂಕಣಿ ಅಧ್ಯಯನ ಪೀಠ ಹಾಗೂ ಸ್ನಾತಕೋತ್ತರ ಅರ್ಥಶಾಸ್ತ್ರ, ಇತಿಹಾಸ ಹಾಗೂ ಪುರಾತತ್ವ ಮತ್ತು ಹಿಂದಿ ವಿಭಾಗಗಳ ಆಶ್ರಯದಲ್ಲಿ ಶುಕ್ರವಾರ ಒಂದು ದಿನದ ಸಂಶೋಧನಾ ವಿಧಾನ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪೂರ್ವತನ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಪತಿ ಕಲ್ಲೂರಾಯ ಕಾರ್ಯಾಗಾರ ಉದ್ಘಾಟಿಸಿದರು. “ಸಾಮಾಜಿಕ ವಿಜ್ಞಾನ ಆಧರಿತ ವಿಷಯದಲ್ಲಿ ಸಂಶೋಧನೆ ಮಾಡುವುದರಿಂದ ನಾವು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ, ಸ್ವಾಭಾವಿಕ ಕುತೂಹಲವೇ ಸಂಶೋಧನೆಯ ಮೂಲ”, ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯಾ ರೈ, ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಆಸಕ್ತಿಯನ್ನು ಬೆಳೆಸಬೇಕು, ಎಂದು ಕರೆ ನೀಡಿದರು. ಕಾರ್ಯಾಗಾರದಲ್ಲಿ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ದೇವದಾಸ ಪೈ, ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕ ಡಾ ನಿಯಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ಅರ್ಥಶಾಸ್ತ್ರ, ಇತಿಹಾಸ ಹಾಗೂ ಪುರಾತತ್ವ ವಿಭಾಗ ಮತ್ತು ಹಿಂದಿ ವಿಭಾಗಗಳ ಸ್ನಾತಕೋತ್ತರ ಸಂಯೋಜಕರುಗಳಾದ ಡಾ. ರಾಮಕೃಷ್ಣ ಬಿ.ಎಂ, ಡಾ ನಾಗರತ್ನ ರಾವ್ ಹಾಗೂ ಡಾ. ಕುಮಾರಸ್ವಾಮಿ ಉಪಸ್ಥಿತರಿದ್ದರು. ಮ0ಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ ನಾಯಕ್ ಪ್ರಾಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಮಧುರಾ ವಂದಿಸಿದರು ಹಾಗೂ ಉಪನ್ಯಾಸಕಿ ಶಮಾ ಕಾರ್ಯಕ್ರಮ ನಿರ್ವಹಿಸಿದರು.
Post a Comment