ವಿಟ್ಲ: ಸರಕಾರಿ ಶಿಕ್ಷಣ ಸಂಸ್ಥೆಯ ನಾಲ್ಕು ಆಧಾರ ಸ್ತಂಭಗಳೆಂದರೆ ಅವು ಸರಕಾರ, ಶಿಕ್ಷಕರು, ಪೋಷಕರು. ಮತ್ತು ವಿದ್ಯಾರ್ಥಿಗಳು. ಇವುಗಳಲ್ಲಿ ಸಂಸ್ಥೆಯ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಯಲ್ಲಿ ಶಿಕ್ಷಕರು ಮತ್ತು ಪೋಷಕರು ನೇರ ನಿಯಂತ್ರಣ ಹೊಂದಿರುತ್ತಾರೆ. ಹಾಗೂ ಬಹಳಷ್ಟು ಶ್ರಮವಹಿಸುವ ಅಗತ್ಯವಿದೆ. ಅದು ಸಂಸ್ಥೆಯ ಸರ್ವಾಂಗೀಣ ಬೆಳವಣಿಗೆಗೆ ನಿರಂತರ ಪ್ರಯತ್ನ ಮಾಡಬೇಕು. ಶಿಕ್ಷಣ ಸಂಸ್ಥೆಯು ಪ್ರಗತಿ ಪಥದಲ್ಲಿ ಮಂದುವರಿಯಲು ಶಿಕ್ಷಕರ ಜೊತೆ ಪೋಷಕರು ಕೈ ಜೋಡಿಸುವುದು ಬಹಳ ಮಖ್ಯವಾಗಿದೆ. ವಿದ್ಯಾರ್ಥಿಗಳ ಅಧ್ಯಯಕ್ಕೆ ಪೂರಕ ಅವಕಾಶ ಹಾಗೂ ಅವರ ಬಗ್ಗೆ ಸೂಕ್ತ ತಿಳುವಳಿಕೆ ಮೂಡಿಸಿಕೊಂಡು ಅವರ ಶೈಕ್ಷಣಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಆಂಟನಿ ಟಿ.ಪಿ ಹೇಳಿದರು.
ಕಾಲೇಜಿಗೆ ಮಕ್ಕಳನ್ನು ಸೇರಿಸಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬ ಪೋಷಕರ ಮನಸ್ಥಿತಿ ಬದಲಾಗಬೇಕು. ಅಸಲಿಗೆ ಮಕ್ಕಳನ್ನು ಕಾಲೇಜಿಗೆ ಸೇರಿಸಿದರೆ ತಮ್ಮ ಜವಾಬ್ದಾರಿ ಪ್ರಾರಂಭವಾಯಿತು ಎಂದು ಪೋಷಕರು ಅರಿತುಕೊಳ್ಳಬೇಕು.
ಇಂದಿನ ಆಕರ್ಷಣೀಯ ಜಗತ್ತಿನಲ್ಲಿ ತಮ್ಮ ಮಕ್ಕಳು ತಮ್ಮನ್ನು ತಾವು ಹೊರ ಜಗತ್ತಿಗೆ ತೆರೆದು ಕೊಂಡಾಗ ಅವರಿಗೆ ಪ್ರಪಂಚವು ಬಣ್ಣ ಬಣ್ಣವಾಗಿ ಕಾಣುತ್ತದೆ. ಬಣ್ಣಗಳ ಮಧ್ಯೆ ವಾಸ್ತವತೆ ಮರೆಯಾಗುತ್ತದೆ. ಮತ್ತು ಮಕ್ಕಳು ಅವರ ಜವಾಬ್ದಾರಿನ್ನು ಮರೆತು ಬಣ್ಣದ ಲೋಕದ ಹಲವಾರು ಆಕರ್ಷಣೆಗಳಿಗೆ ದಾಸರಾಗಿ ಅವರ ಭವಿಷ್ಯವನ್ನೂ ಹಾಳು ಮಾಡಿಕೊಂಡಂತಹ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಆದುದರಿಂದ ಜವಾಬ್ದಾರಿಯುತ ಪೋಷಕರಾದ ನಾವುಗಳು ನಮ್ಮ ಮಕ್ಕಳಲ್ಲಿ ಉತ್ತಮ ಶಿಸ್ತು ಮತ್ತು ನಡವಳಿಕೆ ಮೂಡಿಸುವ ಜವಾಬ್ದಾರಿಯನ್ನು ಹೊಂದಿರುತ್ತೇವೆ . ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಿಗಂಗಿಂತಲೂ ರಕ್ಷಕರ ಪಾತ್ರ ಹಿರಿದಾದುದು ಅವರು ನುಡಿದರು.
ಅವರು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಉದ್ದೇಶಿಸಿ ಉನ್ನತ ಶಿಕ್ಷಣದಲ್ಲಿ ಉನ್ನತಿಯಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಕಾಲೇಜು ಶಿಕ್ಷಣದ ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಸೂಕ್ಷ್ಮ ನಿಲುವು ಹೊಂದಿರಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಿಗಿಂತಲೂ ಪೋಷಕರ ಪಾತ್ರ ಹಿರಿದಾದುದು. ಉತ್ತಮ ಧ್ಯೇಯಗಳು ವಿದ್ಯಾರ್ಥಿಗಳ ಮುಂದಿನ ಭವ್ಯ ಬದುಕನ್ನು ಕಟ್ಟಿ ಕೊಡಬಲ್ಲವು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಆಧ್ಯಕ್ಷರಾಗಿ ಆನಂದ, ಉಪಾಧ್ಯಕ್ಷರಾಗಿ ಶ್ರೀಮತಿ ಮೀನಾಕ್ಷಿ, ಕಾರ್ಯದರ್ಶಿಯಾಗಿ ಪ್ರೊ. ಮಾಧವ ಎಂ ಮತ್ತು ಖಜಾಂಚಿಯಾಗಿ ರಾಮ ಮೂಲ್ಯ ಆಯ್ಕೆಯಾದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಜಾ ಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಚಕ್ರೇಶ್ವರೀ ಎ.ಬಿ, ಐಕ್ಯೂಎಸಿ ಸಂಚಾಲಕಿ ಪ್ರೊ. ಪರಮೇಶ್ವರಿ ಎನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕುಂಞಣ್ಣ ನಾಯಕ್, ಖಜಾಂಚಿ ಲಿಂಗಪ್ಪ ಗೌಡ ವೇದಿಕೆಯಲ್ಲಿದ್ದರು. ಸಂಘದ ಸಂಚಾಲಕ ಪ್ರೊ ಮಾಧವ ಎಂ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಪರಮೇಶ್ವರಿ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಕೆ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ