ಕನ್ನಡ ಅಕ್ಷರ ಲೋಕಕ್ಕೆ ತುಳುನಾಡಿನ ಕೊಡುಗೆ ದಾಖಲಾರ್ಹ: ಪುಂಡಿಕಾಯಿ ಗಣಪಯ್ಯ ಭಟ್

Upayuktha
0

ಮೂಡುಬಿದಿರೆ: “ಕನ್ನಡ ಎಂಬ ಪದವನ್ನು ಹೆಸರಿನಲ್ಲಿ ಒಳಗೊಂಡಿದ್ದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಬಹು ಭಾಷಿಕರ ಜಿಲ್ಲೆ ಎಂದು ಗುರುತಿಸಲ್ಪಡುವುದು ವಿಶೇಷ. 1800 ವರ್ಷಗಳ ಹಿಂದಿನ ತಮಿಳುನಾಡಿನ ಒಂದು ದಾಖಲೆಯ ಪ್ರಕಾರ ಈ ಜಿಲ್ಲೆ ತುಳುನಾಡು ಎಂದು ಉಲ್ಲೇಖಿಸಲ್ಪಟ್ಟಿದ್ದು ಈ ಜಿಲ್ಲೆಯ ಜನರು ನಾಲ್ಕು ಭಾಷೆಗಳನ್ನು ಸುಲಲಿತವಾಗಿ ಮಾತನಡಬಲ್ಲವರು ಎಂದೂ ದಾಖಲಿಸಿದೆ. 1931ರ ಜನಗಣತಿ ವರದಿ ಪ್ರಕಾರ ದಕ್ಷಿಣ ಕನ್ನಡದಲ್ಲಿ 31 ಭಾಷೆಗಳನ್ನಾಡುವ  ಜನರಿದ್ದಾರೆ ಎಂದು ದಾಖಲಾಗಿದೆ. ಹಾಗಿದ್ದರೂ ಈ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ, ಅಕ್ಷರ ಸಂಸ್ಕೃತಿಗೆ ನೀಡಿದ ಕೊಡುಗೆ ಅಚ್ಚರಿಯ ದಾಖಲೆಯಾಗಿದೆ” ಎಂಬುದಾಗಿ ಹಿರಿಯ ಲೇಖಕರು ಹಾಗೂ ಇತಿಹಾಸ ಸಂಶೋಧಕರೂ ಅಗಿರುವ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಅವರು  ತಿಳಿಸಿದರು.


ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ 13 ಕೃತಿಗಳ ಲೋಕಾರ್ಪಣೆ ನಿಮಿತ್ತ ಹಮ್ಮಿಕೊಂಡ ‘ಪುಸ್ತಕೋತ್ಸವ – 2022’ ಎಂಬ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಅವರು ಮಾತನಾಡಿದರು.


ಕನ್ನಡದ ಪ್ರಥಮ ದಿನಪತ್ರಿಕೆ, ಪ್ರಥಮ ಕಾದಂಬರಿ, ಸಣ್ಣ ಕಥೆಗಳ ಜನಕ, ಆಧುನಿಕ ಕನ್ನಡದ ಪ್ರಥಮ ಪ್ರಬಂಧ, ಪ್ರಥಮ ಶಬ್ದಕೋಶ, ಪ್ರಾಸರಹಿತ ಮೊದಲ ಕವನ, ಕನ್ನಡ ಅಚ್ಚುಮೊಳೆಗಳ ತಯಾರಿ ಇತ್ಯಾದಿ ಅನೇಕ ದಾಖಲೆಗಳನ್ನು ಈ ತುಳುನಾಡು ದಾಖಲಿಸಿದೆ. ಇದರ ಜೊತೆಗೆ ಈಗ ಪುಟ್ಟ ಹಳ್ಳಿಯಲ್ಲಿರುವ ಕಾಂತಾವರ ಕನ್ನಡ ಸಂಘವೂ ಕನ್ನಡದ ಅಕ್ಷರ ಲೋಕಕ್ಕೆ ನೀಡಿದ ಕೊಡುಗೆಯೂ ಶಾಶ್ವತ ದಾಖಲೆಯಾಗಿ ಉಳಿಯಲಿದೆ ಎಂದರು.


ಪುಸ್ತಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ವಿಜಯವಾಣಿ ದಿನಪತ್ರಿಕೆಯ ಮುಖ್ಯ ಉಪಸಂಪಾದಕರಾಗಿರುವ ಶಶಿಧರ ಹಾಲಾಡಿಯವರು ತೀರಾ ಗ್ರಾಮೀಣ ಭಾಗದಲ್ಲಿರುವ ಖಾಸಗಿ ಸಂಸ್ಥೆಯೊಂದು ವಿಶ್ವವಿದ್ಯಾನಿಲಯವೊಂದು ಮಾಡಬಹುದಾದ ಮೌಲಿಕ ಕೆಲಸಗಳನ್ನು ಮಾಡುತ್ತಿದೆ. ಕನ್ನಡ ಮತ್ತು ಕರ್ನಾಟಕದ ದೃಷ್ಟಿಯಿಂದ ನೋಡುವುದಾದರೆ ಕನ್ನಡ ಸಂಘದ ಕಾರ್ಯವು ಅಸಾಧಾರಣವಾದುದು ಎಂದರು.


ನಾಡಿಗೆ ನಮಸ್ಕಾರ ಗ್ರಂಥಮಾಲೆಯ 13 ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಹಿರಿಯ ಸಂಘಟಕ ಹಾಗೂ ಲೇಖಕರೂ ಆಗಿರುವ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡುತ್ತಾ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಕೃತಿಗಳು ಕೇವಲ ವ್ಯಕ್ತಿ ಚಿತ್ರಗಳಾಗಿರದೆ ಸಾಹಿತ್ಯ, ಸಾಂಸ್ಕೃತಿಕ, ಚಾರಿತ್ರಿಕ ಹಿನ್ನೆಲೆಯಲ್ಲಿಯೂ ಇವು ಮಹತ್ವದ ಕೃತಿಗಳಾಗಿದ್ದು ಇಲ್ಲಿ ಬಂದ ಎಲ್ಲ ಸಾಧಕರ ಬದುಕು ಕೂಡಾ ಎಲ್ಲರಿಗೂ ಮಾರ್ಗದರ್ಶಿ ಹಾಗೂ ಪ್ರೇರಣಾದಾಯಿಯೂ ಆಗಿದೆ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಪ್ರಚಾರ ಬಯಸದೆ ತೊಡಗಿಸಿಕೊಂಡ ಕನ್ನಡ ಸಂಘದ ಈ ಕಾರ್ಯವನ್ನು ಯಾವ ಪ್ರಶಸ್ತಿಯಿಂದಲೂ ಸರಿಗಟ್ಟಲಾಗದು ಎಂದರು.


ಗ್ರಂಥಮಾಲೆಯಲ್ಲಿ ಬಂದ ಸಾಧಕರನ್ನು ಮತ್ತು ಲೇಖಕರನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಡಾ.ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಠಲ ಬೇಲಾಡಿಯವರು ಕಾರ್ಯಕ್ರಮ ನಿರೂಪಿಸಿ ಸದಾನಂದ ನಾರಾವಿ ಸ್ವಾಗತಿಸಿ ವಂದಿಸಿದರು.

-ಸದಾನಂದ ನಾರಾವಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top