ಫೆ. 26-27 ಮಂಗಳೂರು ಪುರಭವನದಲ್ಲಿ ಎರಡು ದಿನಗಳ ವೈವಿಧ್ಯಮಯ ಕಾರ್ಯಕ್ರಮ
.
ಮಂಗಳೂರು: ಭಾರತ ದೇಶದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಸಂದರ್ಭ ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಸೇನಾನಿ ತುಳುನಾಡಿನ ಅಬ್ಬಕ್ಕ ರಾಣಿಯನ್ನು ಸ್ಮರಿಸುವ ಸಲುವಾಗಿ ಫೆಬ್ರವರಿ 26 ಮತ್ತು 27ರಂದು 2 ದಿನಗಳ `ನಮ್ಮ ಅಬ್ಬಕ್ಕ – 2022 : ಅಮೃತ ಸ್ವಾತಂತ್ರ್ಯ ಸಂಭ್ರಮ’ ಮಂಗಳೂರು ಪುರಭವನದಲ್ಲಿ ಏರ್ಪಡಿಸಲಾಗಿದೆ. ಮಂಗಳೂರು ಮಹಾನಗರಪಾಲಿಕೆಯು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಅಮೃತ ಭಾರತ ಸಾಂಸ್ಕೃತಿಕ ಸ್ಪರ್ಧೆಗಳು: ಫೆ. 26ರಂದು ಬೆಳಿಗ್ಗೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಮೂಹ ದೇಶಭಕ್ತಿ ಗೀತೆ ಹಾಗೂ ಸಾರ್ವಜನಿಕರಿಗಾಗಿ `ಸ್ವಾತಂತ್ರ್ಯ ಅಮೃತೋತ್ಸವ – ರಾಣಿ ಅಬ್ಬಕ್ಕನ ನೆನಹು’ ಭಾಷಣ ಸ್ಪರ್ಧೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಸಾಯಂಕಾಲ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ವಿ. ಸುನೀಲ್ ಕುಮಾರ್ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ವೈ ಶೆಟ್ಟಿ, ಮಂಜುನಾಥ ಭಂಡಾರಿ ಅತಿಥಿಗಳಾಗಿರುವ ಸಭೆಯ ಅಧ್ಯಕ್ಷತೆಯನ್ನು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ವಹಿಸುವರು.
ಅಬ್ಬಕ್ಕ ಸಂಕಥನ ಮತ್ತು ಸ್ವಾತಂತ್ರ್ಯಾಮೃತ ಕವಿನಮನ: ಫೆ. 27ರಂದು ಪೂರ್ವಾಹ್ನ ‘ಕರಾವಳಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆ ಗುರುತುಗಳು’ ಎಂಬ ವಿಷಯದಲ್ಲಿ ಅಬ್ಬಕ್ಕ ಸಂಕಥನ-ವಿಚಾರಗೋಷ್ಠಿ ನಡೆಯಲಿದ್ದು, ಇತಿಹಾಸ ಸಂಶೋಧಕ ಡಾ. ಪುಂಡಿಕಾೈ ಗಣಪಯ್ಯ ಭಟ್ ಅಧ್ಯಕ್ಷತೆ ವಹಿಸುವರು. ಡಾ. ತುಕಾರಾಮ ಪೂಜಾರಿ (ರಾಣಿ ಅಬ್ಬಕ್ಕನ ಹೋರಾಟದ ನೆಲೆಗಳು); ಡಾ. ಪ್ರಭಾಕರ ನೀರುಮಾರ್ಗ (ಅಮರಸುಳ್ಯ ಕ್ರಾಂತಿ ಮತ್ತು ರೈತ ಹೋರಾಟ) ಹಾಗೂ ಮನೋಹರ್ ಪ್ರಸಾದ್ (ತುಳುನಾಡಿನಲ್ಲಿ ಗಾಂಧಿ ಕಾಲದ ಸ್ವಾತಂತ್ರ್ಯ ಸಂಗ್ರಾಮ) ಪ್ರಬಂಧಗಳನ್ನು ಮಂಡಿಸುವರು.
ಅಪರಾಹ್ನ ನಡೆಯುವ `ಸ್ವಾತಂತ್ರ್ಯಾಮೃತ ಕವಿನಮನ’ದಲ್ಲಿ ಹಿರಿಯ ಕವಿ ಮತ್ತು ಸಾಹಿತಿ ಡಾ. ನಾ. ಮೊಗಸಾಲೆ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಮುದ್ದು ಮೂಡುಬೆಳ್ಳೆ, ಮಹಮ್ಮದ್ ಬಡ್ಡೂರು, ರಘು ಇಡ್ಕಿದು, ಕಾ.ವಿ. ಕೃಷ್ಣದಾಸ್, ಅಕ್ಷಯ್ ಆರ್. ಶೆಟ್ಟಿ, ಫೆಲ್ಸಿ ಲೋಬೋ, ಮಲ್ಲಿಕಾ ಜೆ. ರೈ ಗುಂಡ್ಯಡ್ಕ, ಅಕ್ಷತಾರಾಜ್ ಪೆರ್ಲ, ಅರ್ಚನಾ ಬಂಗೇರ ಕುಂಪಲ ಕನ್ನಡ, ಬ್ಯಾರಿ, ಕೊಂಕಣಿ ಮತ್ತು ಹಿಂದಿ ಕವನಗಳನ್ನು ವಾಚಿಸುವರು. ತೋನ್ಸೆ ಪುಷ್ಕಳ ಕುಮಾರ್ ಮತ್ತು ಮಾಲಿನಿ ಕೆ. ಪ್ರಸಾದ್ ಕವಿತೆಗಳನ್ನು ಸ್ವರಬದ್ಧಗೊಳಿಸಿ ಹಾಡುವರು.
ಪ್ರಶಸ್ತಿ ಪ್ರದಾನ: ಆದಿತ್ಯವಾರ ಸಂಜೆ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗುವುದು. ಈ ಸಂದರ್ಭ ಹಿರಿಯ ಸಾಹಿತಿ ಹಾಗೂ ಜಾನಪದ ವಿದ್ವಾಂಸ ಪ್ರೊ. ಡಾ. ಅಮೃತ ಸೋಮೇಶ್ವರ ಅವರ ಜೀವಮಾನ ಸಾಧನೆಗಾಗಿ `ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯೋತ್ಸವ ಪ್ರಶಸ್ತಿ’ ಮತ್ತು ಹಿರಿಯ ಸಮಾಜ ಸೇವಾ ಕಾರ್ಯಕರ್ತೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಅವರಿಗೆ ‘ನಮ್ಮ ಅಬ್ಬಕ್ಕ ಸೇವಾ ಪುರಸ್ಕಾರ’ ನೀಡಲಾಗುವುದು. ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಪ್ರಶಸ್ತಿ ಪ್ರದಾನ ಮಾಡುವರು. ಲೋಕಸಭಾ ಸದಸ್ಯರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಿನ್ನವತ್ತಳೆ ನೀಡಿ ಸನ್ಮಾನಿಸುವರು. ಮಂಗಳೂರು ದಕ್ಷಿಣ ವಿಧಾನಸಭಾ ಸದಸ್ಯ ಡಿ. ವೇದವ್ಯಾಸ ಕಾಮತ್, ಮಂಗಳೂರು ವಿ.ವಿ. ಕುಲಪತಿ ಡಾ. ಪಿ.ಎಸ್. ಎಡಪಡಿತ್ತಾಯ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮೊದಲಾದವರು ಅತಿಥಿಗಳಾಗಿರುವರು.
ಸಾಂಸ್ಕೃತಿಕ ಸಂಭ್ರಮ: ಕಾರ್ಯಕ್ರಮದ ಎರಡು ದಿನಗಳಲ್ಲಿ ಆಕರ್ಷಕ ಸಾಂಸ್ಕøತಿಕ ಸಂಭ್ರಮವನ್ನು ಏರ್ಪಡಿಸಲಾಗಿದೆ. ಮೊದಲ ದಿನ ಜಾನಪದ ವೈವಿಧ್ಯ, ಬಲೇ ತೆಲಿಪಾಲೆ ಖ್ಯಾತಿಯ ಮಸ್ಕಿರಿ ಕುಡ್ಲ ಇವರಿಂದ ದೀಪಕ್ ರೈ ಪಾಣಾಜೆ ಮತ್ತು ಬಳಗದ ‘ತೆಲಿಕೆ ಬಂಜಿ ನಿಲಿಕೆ’ ಹಾಸ್ಯ ರಂಜನೆ, ಕಲರ್ಸ್ ಕನ್ನಡ ಎದೆತುಂಬಿ ಹಾಡಿದೆನು ಖ್ಯಾತಿಯ ಸಂದೇಶ ನೀರುಮಾರ್ಗ ಮತ್ತು ಡಾ. ವೈಷ್ಣವಿ ಕಿಣಿ ಬಳಗದ ‘ಅಮೃತ ಸುಧಾ’ ಸಂಗೀತ ಸೌರಭ ಜರಗಲಿದೆ.
ಫೆ. 27ರಂದು ಬೆಳಿಗ್ಗೆ ಶಾರದಾ ವಿದ್ಯಾಲಯದ ಮಕ್ಕಳಿಂದ `ರಾಷ್ಟ್ರವಂದನ’, ತುಳು ಎಂ.ಎ. ವಿದ್ಯಾರ್ಥಿಗಳಿಂದ ‘ಪರಪುದ ಪನಿ’ ಹಾಗೂ ಅಪರಾಹ್ನ ಪಟ್ಲ ಸತೀಶ್ ಶೆಟ್ಟಿ ಮತ್ತು ಅಮೃತ ಅಡಿಗರ ಭಾಗವತಿಕೆಯಲ್ಲಿ ‘ಯಕ್ಷ-ಗಾನ-ನೃತ್ಯ’, ಸನಾತನ ನಾಟ್ಯಾಲಯದ ವಿ| ಶಾರದಾಮಣಿ ಶೇಖರ್ ಮತ್ತು ಬಳಗದವರಿಂದ ಭಾಸ್ಕರ ರೈ ಕುಕ್ಕುವಳ್ಳಿ ವಿರಚಿತ ‘ಅಮೃತ ಸ್ವಾತಂತ್ರ್ಯ ಗೀತ ನೃತ್ಯ’ ಹಾಗೂ ರಾತ್ರಿ 7.30ರಿಂದ ಜರ್ನಿ ಥೇಟರ್ ಗ್ರೂಪ್ ಇವರು ಪ್ರೊ. ಅಮೃತ ಸೋಮೇಶ್ವರರ ‘ಗೊಂದೊಳು’ ತುಳು ನಾಟಕವನ್ನು ಅಭಿನಯಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ