ಮಂಗಳೂರು: ನಗರದ ಮೇರಿಹಿಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಗೃಹರಕ್ಷಕರಿಗೆ ಹಾಗೂ ಪೌರರಕ್ಷಣಾ ಪಡೆ ಕಾರ್ಯಕರ್ತರಿಗೆ ಉಚಿತ ದಂತ ಚಿಕಿತ್ಸಶಿಬಿರ ಮತ್ತು ಉಚಿತ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಇಂದು (ಫೆ.24) ನಡೆಸಲಾಯಿತು. ಎ. ಜೆ ಆಸ್ಪತ್ರೆಯ ಎ.ಜೆ ದಂತ ಮಹಾವಿದ್ಯಾಲಯ ವೈದ್ಯರು ಶಿಬಿರವನ್ನು ನಡೆಸಿಕೊಟ್ಟರು.
ಎ.ಜೆ ದಂತ ಮಹಾವಿದ್ಯಾಲಯ, ಸಮುದಾಯ ದಂತ ವೈದ್ಯಕೀಯ ವಿಭಾಗ ಇದರ ಮುಖ್ಯಸ್ಥರಾದ ಶ್ರೀಮತಿ ಡಾ|| ವಿಜಯಾ ಹೆಗ್ಡೆ ಅವರು ದೀಪ ಬೆಳಗಿಸಿ ಈ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎ. ಜೆ ಆಸ್ಪತ್ರೆಯ ವೈದ್ಯರಾದ ಡಾ|| ಕಿಶನ್ ರಾವ್ ಅವರು ಭಾಗವಹಿಸಿದ್ದರು. ಕ್ಯಾನ್ಸರ್ ಬಗ್ಗೆ ಸವಿವರವಾದ ಮಾಹಿತಿಯನ್ನು ಅವರು ಗೃಹರಕ್ಷಕರಿಗೆ ಮನದಟ್ಟು ಮಾಡಿದರು.
ಕ್ಯಾನ್ಸರ್ ರೋಗ ಬಂದರೆ ದಿಗಿಲುಗೊಂಡು ಜೀವನವೇ ಸರ್ವನಾಶ ಆಯಿತು ಎಂದು ತಲೆಕೆಡಿಸಿಕೊಳ್ಳಬಾರದು. ನಾವೀಗ 21ನೇ ಶತಮಾನದಲ್ಲಿ ಇದ್ದೇವೆ. ವೈದ್ಯರ ಬಳಿ ಅತ್ಯಾಧುನಿಕ ಉಪಕರಣಗಳು ಮತ್ತು ಚಿಕಿತ್ಸ ಔಷದಿಗಳು ಲಭ್ಯವಿದೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಉತೃಷ್ಟ ಕ್ಯಾನ್ಸರ್ ಚಿಕಿತ್ಸೆ ಸಿಗುವಂತಾಗಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಜನರು ಇದರ ಸದುಪಯೋಗ ಪಡೆಯಬೇಕು.
ಬಾಯಿ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದರೆ ಪೂರ್ಣವಾಗಿ ಗುಣಪಡಿಸಬಹುದು. ಹಳ್ಳಿ ಮದ್ದು ಮತ್ತು ಅವೈಜ್ಞಾನಿಕವಾದ ಚಿಕಿತ್ಸ ಪದ್ಧತಿಯಿಂದ ರೋಗಿಗೆ ಉಪಕಾರಕ್ಕಿಂತ ಉಪದ್ರವವೇ ಜಾಸ್ತಿಯಾಗಿ ರೋಗ ಉಲ್ಬಣಿಸಬಹುದು. ತಂಬಾಕು ಉತ್ಪನ್ನಗಳನ್ನು ತ್ಯಜಿಸಿದರೆ ನೂರರಲ್ಲಿ 80ಶೇಕಡಾ ಬಾಯಿ ಕ್ಯಾನ್ಸರ್ ರೋಗ ತಡೆಗಟ್ಟಲು ಸಾಧ್ಯ ಮತ್ತು ಒಂದನೇ ಮತ್ತು ಎರಡನೇ ಹಂತದಲ್ಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತದೆ ಎಂದು ಖ್ಯಾತ ವೈದ್ಯ ಕ್ಯಾನ್ಸರ್ ತಜ್ಞ ಹಾಗೂ ಜನರಲ್ ಸರ್ಜನ್ ಎ. ಜೆ ಆಸ್ಪತ್ರೆಯ ಡಾ|| ಕಿಶನ್ ರಾವ್ ಬಾಳಿಲ ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮುದಾಯ ದಂತ ವಿಭಾಗದ ಮುಖ್ಯಸ್ಥೆ ಡಾ|| ವಿಜಯಾ ಹೆಗ್ಡೆ ಅವರು ಮಾತನಾಡಿ ಬಾಯಿ ನಮ್ಮ ದೇಹದ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ಅಂಗವಾಗಿದ್ದು, ಬಾಯಿಯ ಆರೋಗ್ಯಕ್ಕೆ ವಿಶೇಷ ಗಮನ ನೀಡಬೇಕಾದ ಅನಿವಾರ್ಯತೆ ಇದೆ. ಬಾಯಿಯ ಅರೋಗ್ಯ ಹದಗೆಟ್ಟಲ್ಲಿ ದೇಹದ ಎಲ್ಲಾ ಇತರ ಅಂಗಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ನಿರಂತರ ಬಾಯಿ ಪರೀಕ್ಷೆ, ದಂತ ಪರೀಕ್ಷೆ ಹಾಗೂ ಚಿಕಿತ್ಸೆ ಅತೀ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಗೃಹರಕ್ಷಕದಳದ ಸಮಾದೇಷ್ಟರು ಹಾಗೂ ಪೌರರಕ್ಷಣಾ ಪಡೆಯ ಮುಖ್ಯಪಾಲಕ ಡಾ|| ಮುರಲೀ ಮೋಹನ್ ಚೂOತಾರು ಅವರು ಮಾತನಾಡಿ ಬಾಯಿ ಸ್ವಚ್ಛತೆ ಕಾಪಾಡಿಕೊಂಡಲ್ಲಿ ಹೃದಯ ರೋಗ, ವಸಡು ರೋಗ, ಮೆದುಳಿನ ಮರೆಗುಳಿತನ ರೋಗ ಹೀಗೆ ಹತ್ತು ಹಲವು ರೋಗ ಬಾರದಂತೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಗೃಹರಕ್ಷಕರಿಗೆ ದಂತ ಪರೀಕ್ಷೆ, ದಂತ ಚಿಕಿತ್ಸೆ ಹಾಗೂ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲಾಯಿತು.
ಈ ಹಿಂದೆ ಮಧುಮೇಹ ತಪಾಸಣಾ ಶಿಬಿರ, ಅಧಿಕ ರಕ್ತದೋತ್ತದ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಹೃದಯ ರೋಗ ತಪಾಸಣಾ ಶಿಬಿರ, ಆಯುರ್ವೇದ ಚಿಕಿತ್ಸ ಶಿಬಿರ ನಡೆಸಿರುತ್ತೇವೆ. ಸಮಾಜದ ಸ್ವಾಸ್ತ್ಯ ಕಾಪಾಡುವ ಗೃಹರಕ್ಷಕರು ತಮ್ಮ ಆರೋಗ್ಯದ ಮೇಲೂ ವಿಶೇಷ ಮುತುವರ್ಜಿ ವಹಿಸಬೇಕು. ಹಾಗಾದರೆ ಮಾತ್ರ ಕೆಲಸದಲ್ಲಿ ಹೆಚ್ಚಿನ ದೃಢತೆ ಮತ್ತು ಪರಿಪೂರ್ಣತೆ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಉಪ ಸಮಾದೇಷ್ಟರಾದ ರಮೇಶ್ ಅವರು ಸ್ವಾಗತಿಸಿದರು. ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರ ಅವರು ವಂದನಾರ್ಪಣೆ ಮಾಡಿದರು. ಕಚೇರಿ ಅಧೀಕ್ಷಕ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ. ಎಸ್, ಗೃಹರಕ್ಷಕರಾದ ದುಷ್ಯಂತ್ ರೈ, ದಿವಾಕರ, ರಾಜಶ್ರೀ, ರಾಜೇಶ್ ಗಟ್ಟಿ, ಅಬ್ದುಲ್ ರಾವೂಫ್, ಮಂಜುಳಾ ಮುಂತಾದವರು ಉಪಸ್ಥಿತರಿದ್ದರು. ಎ. ಜೆ ಆಸ್ಪತ್ರೆಯ ವೈದ್ಯರು ಹಾಗೂ ತಂತ್ರಜ್ಞರು ಈ ಶಿಬಿರ ನಡೆಸಿಕೊಟ್ಟರು. ಸುಮಾರು 100 ಮಂದಿ ಗೃಹರಕ್ಷಕರು ಈ ಶಿಬಿರದ ಪ್ರಯೋಜನ ಪಡೆದರು.