ಪುತ್ತೂರು ಡಿ. 7: ಪ್ರಸ್ತುತ ದಿನಗಳಲ್ಲಿ ವಾಣಿಜ್ಯವು ದೇಶಕ್ಕೆ ಆರ್ಥಿಕ ಸ್ಥಿತಿಗತಿಗೆ ಬಹಳ ಮುಖ್ಯವಾಗಿದೆ. ದೇಶದ ಹಣಕಾಸು ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದರಲ್ಲಿ ವಾಣಿಜ್ಯ ಕ್ಷೇತ್ರವು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀನಿವಾಸ್ ಸಾಮಂತ್ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.
ವಾಣಿಜ್ಯ ಸಂಘವು ನಾಯಕತ್ವ ಗುಣವನ್ನು ಬೆಳೆಸಲು ಸಹಕಾರಿಯಾಗಿದೆ. ಪಠ್ಯಕ್ಕಿಂತಲೂ ಪ್ರಾಯೋಗಿಕ ವಿಚಾರಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರೆ ಅವರ ಜೀವನಕ್ಕೆ ಸಹಕಾರಿಯಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, 18 ವರ್ಷ ತುಂಬಿದ ಕೂಡಲೇ ನಾವು ಪ್ರಬುದ್ಧರಾಗುವುದಿಲ್ಲ. ನಮ್ಮಲ್ಲಿ ಜ್ಞಾನ ಬೆಳೆಯಬೇಕಾದರೆ ಕಾಲೇಜಿನಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಅಲ್ಲಿ ತಿಳಿಸುವ ಬೇರೆ ಬೇರೆ ವಿಷಯಗಳನ್ನು ನಾವು ಪ್ರಾಯೋಗಿಕವಾಗಿ ಪ್ರಯತ್ನಿಸುವ ಮೂಲಕ ಹೊಸ ವಿಷಯಗಳನ್ನು ಕಲಿಯಬೇಕು. ಕಾಲೇಜು ಲೈಫ್, ಗೋಲ್ಡನ್ ಲೈಫ್ ಆಗಬೇಕಾದರೆ ನಮ್ಮಲ್ಲಿರುವ ಪ್ರತಿಭೆಯನ್ನು ಅಭಿವೃದ್ಧಿಪಡಿಸಬೇಕು. ಕಾಲೇಜಿನಲ್ಲಿ ಸಿಗುವ ಅವಕಾಶಗಳನ್ನು ಹೇರಳವಾಗಿ ಬಳಸಿಕೊಳ್ಳಬೇಕು ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ ಮಾತನಾಡಿ, ಒಂದು ವೇದಿಕೆ ಯಾವಾಗ ಸಾರ್ಥಕತೆ ಪಡೆಯುತ್ತದೆ ಎಂದರೆ ಆ ವೇದಿಕೆಯಿಂದ ಪಾಠ ಕಲಿತು ನಮ್ಮ ವ್ಯಕ್ತಿತ್ವ ವಿಕಸನವಾದಾಗ ಮಾತ್ರ. ಮೊದಲಿಗೆ ನಾವು ನಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡುವುದನ್ನು ಬಿಡಬೇಕು ನಾನು ಪರಿಪೂರ್ಣ ನಾಗಿದ್ದೇನೆ ಎಂಬ ಮನೋಭಾವನೆ ಹೊಂದಬೇಕು ನಮ್ಮ ಸದ್ಗುಣ ಹಾಗು ದುರ್ಗುಣದ ಬಗ್ಗೆ ವಿವೇಚನೆ ಮಾಡಬೇಕು. ವಾಣಿಜ್ಯ ಸಂಘದ ಜೊತೆಗೆ SPECTRUM ಹಾಗೂ A STEP TO STEP ಎಂಬ ಎರಡು ವೇದಿಕೆಯನ್ನು ಅನಾವರಣಗೊಳಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ವಾಣಿಜ್ಯ ಶಾಸ್ತ್ರ ಎನ್ನುವಂತದ್ದು ಸ್ಪರ್ಧಾತ್ಮಕ ಜಗತ್ತಾಗಿದೆ. ನಮ್ಮ ಜೀವನವನ್ನು ರೂಪಿಸಿಕೊಳ್ಳಲು ನಾವೇ ಶ್ರಮಿಸಬೇಕು. ಮುಂದಿನ ಜೀವನಕ್ಕೆ ಪದವಿಯಲ್ಲಿ ಹಂತದಲ್ಲೇ ಅಡಿಪಾಯ ಹಾಕಬೇಕು. ಇದರಿಂದ ಮಾತ್ರ ಜೀವನ ಯಶಸ್ವಿಗೊಳಿಸಲು ಸಾದ್ಯ ಎಂದು ನುಡಿದರು.
ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಅಕ್ಷತಾ ಉಪಸ್ಥಿತರಿದ್ದರು. ಬಿಕಾಂ ವಿದ್ಯಾರ್ಥಿಗಳಾದ ಆಕಾಂಕ್ಷಾ ಹೆಚ್ ಸ್ವಾಗತಿಸಿ, ಅಭಯ್ ರಾಮ್ ವಂದಿಸಿ, ಸಾಕ್ಷಿತ ವಿ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ