|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ನೆನಪಿನಲ್ಲಿ- ಸೆಪ್ಟೆಂಬರ್ ‌11

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ನೆನಪಿನಲ್ಲಿ- ಸೆಪ್ಟೆಂಬರ್ ‌11




ಸೀಡ್ ಲೆಸ್ ಯುವ ಜನಾಂಗ ಸೃಷ್ಟಿಯಾಗಿದೆಯೇ?

ಹೌದು ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.


ಜಾಗತೀಕರಣದ ಪ್ರಭಾವದಿಂದಾಗಿ ಭಾರತದ ಮಧ್ಯಮ ವರ್ಗದ ಕುಟುಂಬಗಳಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಊಟ ಬಟ್ಟೆ ವಸತಿಯ ವಿಷಯದಲ್ಲಿ ಮಕ್ಕಳಿಗೆ ಹೆಚ್ಚಿನ ಕೊರತೆಯಾಗದಂತೆ ಪೋಷಕರು ನೋಡಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬಂದಿತು. ಅವಿಭಕ್ತ ಕುಟುಂಬಗಳು ಶಿಥಿಲವಾಗಿ ಚಿಕ್ಕ ಸಂಸಾರಗಳು ಅಸ್ತಿತ್ವಕ್ಕೆ ಬಂದವು.


 ಅದರಿಂದಾಗಿ ಮಕ್ಕಳ ಮೇಲೆ ಪೋಷಕರು ಪ್ರೀತಿ ಹೆಚ್ಚಾಯಿತು. ಟಿವಿ ಮೊಬೈಲ್ ವಿಡಿಯೋ ಗೇಮ್ ಸಿನಿಮಾ ಮನರಂಜನೆ ಮುಂತಾದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಿಂದ ಮಕ್ಕಳ ಮನಸ್ಥಿತಿ ಹೆಚ್ಚು ಶಾರ್ಪ್ ಆಯಿತು. ಕಲಬೆರಕೆ ಆಹಾರ ಜಂಕ್ ಪುಡ್ ಮುಂತಾದ ರಸಾಯನಿಕ ಮಿಶ್ರಿತ ಪದಾರ್ಥಗಳ ತಿಂಡಿಗಳು  ಮತ್ತು ಅತಿಯಾದ ವಾಹನಗಳ ಬಳಸುವಿಕೆ ಹಾಗು ಪರಿಸರ ಮಾಲಿನ್ಯದಿಂದ ದೇಹ ಮತ್ತು ಮನಸ್ಸುಗಳಲ್ಲಿ ಆಲಸ್ಯ ಉಂಟಾಯಿತು.


 ತೀರಾ ಹಸಿವಿನ ಸಂಕಷ್ಟಗಳ ಅನುಭವ ಅವರಿಗೆ ಆಗಲೇ ಇಲ್ಲ. ಯಾವುದೇ ಭಯಂಕರ ಯುದ್ಧ ಪ್ರಾಕೃತಿಕ ವಿಕೋಪ ಹಿಂಸೆಯ ಕ್ರಾಂತಿ  ಇತ್ತೀಚಿನ ವರ್ಷಗಳಲ್ಲಿ ನಡೆಯಲಿಲ್ಲ. ಇದರ ಜೊತೆಗೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಉಚಿತ ಇಂಟರ್ ನೆಟ್ ಸೌಲಭ್ಯ ಮತ್ತು ಓಡಾಡಲು ದ್ವಿಚಕ್ರ ವಾಹನ ದೊರೆಯಿತು. ಕೈಗೊಂದಿಷ್ಟು ಕಾಸು ಹತ್ತಿರದಲ್ಲಿ ಮಾಲ್ ಗಳು. ಇಷ್ಟು ಸಾಕಲ್ಲವೇ ????


ಇತಿಹಾಸದ ನೋವುಗಳ ನೆನಪುಗಳಿಲ್ಲ, ಭವಿಷ್ಯದ ಕನಸುಗಳು ಮುನ್ನೋಟವಿಲ್ಲ. ಈ ಕ್ಷಣದ ಮಜಾ ಮಾತ್ರ ಅವರ ಪ್ರಾಮುಖ್ಯತೆಯಾಯಿತು. ಸ್ವಂತಿಕೆ ಮತ್ತು ಸ್ವಾಭಿಮಾನ ಇಲ್ಲದೇ ಹೋಯಿತು.


ಇದಕ್ಕಾಗಿಯೇ ಹೊಂಚು ಹಾಕಿ ಕುಳಿತಿದ್ದ ಕೆಲವು ರಾಜಕೀಯ ಪಕ್ಷಗಳು ಕೋತಿಗಳಿಗೆ ಕಡಲೆ ಬೀಜ ಹಾಕಿ ಭೋನಿಗೆ ಬೀಳಿಸುವಂತೆ ಭ್ರಷ್ಟಾಚಾರ, ಧರ್ಮ, ಜಾತಿ, ಭಾಷೆ, ಪಂಥ, ದೇಶಪ್ರೇಮ ಅದು ಇದು ಎಂಬ ಮಸಾಲೆ ಹಾಕಿದ ಕಡಲೇ ಬೀಜಗಳನ್ನು ಎಸೆದರು ನೋಡಿ. ಈ ಯುವಕರು ಸುಲಭವಾಗಿ ಅದರ ಬಲೆಗೆ ಬಿದ್ದರು.


ಇದರ ಜೊತೆಗೆ ಎಲ್ಲೆಲ್ಲೂ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಶಾಪಿಂಗ್ ಮಾಲ್ ಗಳು, ಸಿಗರೇಟು ಗಾಂಜಾಗಳು ಸುಲಭವಾಗಿ ದೊರೆಯತೊಡಗಿದವು. ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್‌ಗಳು, ಕರೀನಾ ತಮನ್ನಾ ದೀಪಿಕಾ ಪಡುಕೋಣೆ ಕತ್ರಿನಾ ಕೈಫ್‌ಗಳು, ದರ್ಶನ್ ಸುದೀಪ್ ಪುನೀತ್ ಯಶ್ ಗಳು, ಜೊತೆಗೊಂದಿಷ್ಟು ಬೆಟ್ಟಿಂಗ್ ಕಟ್ಟಲು ತೆಂಡೂಲ್ಕರ್ ಕೊಹ್ಲಿ ಧೋನಿಗಳು, ಹುಚ್ಚೆಬ್ಬಿಸಲು ಮೋದಿ ರಾಹುಲ್ ಮಮತಾಗಳು.


ಇನ್ನೆಲ್ಲಿಯ ಸ್ವಂತಿಕೆ? ಸೀಡ್‌ಲೆಸ್ ಜನಾಂಗ ಸೃಷ್ಟಿಯಾಗದೆ ಇನ್ನೇನಾಗುತ್ತದೆ? ಆದರ್ಶಗಳಿಲ್ಲದ ಕೇವಲ ಆಡಂಬರಗಳು.


ಇತ್ತೀಚೆಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಮಂಜುನಾಥ್ ಅವರು "ಹಿಂದೆ ಮಕ್ಕಳು ತಂದೆ ತಾಯಿ ಮುಂತಾದ ಹಿರಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿಗಳು ಮಕ್ಕಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವ ಬದಲಾವಣೆಯ ದೃಶ್ಯಗಳನ್ನು ನೋಡುತ್ತಿದ್ದೇವೆ ಎಂದು ಹೇಳಿದರು.


 ಇದು ದೇಹ ಸೀಡ್ ಲೆಸ್ ಆಗಿರುವುದಕ್ಕೆ ಒಂದು ಉದಾಹರಣೆ. ಹಾಗೆಯೇ ಯಾವುದೇ ಗಹನವಾದ ತರ್ಕಬದ್ಧವಾದ ಆಳವಾದ ಚಿಂತನೆಯಿಲ್ಲದೆ ವಿಷಯವನ್ನು ಕೇವಲ ವಾಕ್ಚಾತುರ್ಯ ಮತ್ತು ನಿರೂಪಣೆಯಿಂದ ಯುವ ಸಮೂಹವನ್ನು ಮೆಚ್ಚಿಸಿ ಅವರಿಂದ ಚಪ್ಪಾಳೆ ಮತ್ತು ಓಟು ಪಡೆಯಬಹುದು ಎಂಬುದು ಅವರ ಮಾನಸಿಕ ಸೀಡ್ ಲೆಸ್ ತನಕ್ಕೆ ಮತ್ತಷ್ಟು ಉದಾಹರಣೆಗಳು. ಆದ್ದರಿಂದಲೇ ಹಣ ಇರುವ ಜಾತಿ ರಾಜಕಾರಣದ ಭ್ರಷ್ಟ ವ್ಯಕ್ತಿಗಳು ಸುಲಭವಾಗಿ ಜನ ಪ್ರತಿನಿಧಿಗಳಾಗಿ ಮತ್ತೆ ಮತ್ತೆ ಆಯ್ಕೆಯಾಗುತ್ತಾರೆ.


ಮದುವೆಯಾಗಲು ಹುಡುಗ ಹುಡುಗಿಯರು ಕೇಳುತ್ತಿರುವ ಅಥವಾ ಬಯಸುತ್ತಿರುವ ಬೇಡಿಕೆಗಳು, ಕೆಲವೇ ತಿಂಗಳುಗಳಲ್ಲಿ ಅವರ ನಡುವೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳು, ಹಣದ ಬಗೆಗಿನ ಮೋಹ, ವ್ಯಕ್ತಿತ್ವ ಮತ್ತು ಮೌಲ್ಯಗಳ ಬಗೆಗಿನ ತಿರಸ್ಕಾರ ಗಮನಿಸಿದರೆ ಈ ಸೀಡ್ ಲೆಸ್ ಜನಾಂಗದ ಬಗ್ಗೆ ಸ್ವಲ್ಪ ಅರ್ಥವಾಗಬಹುದು.


ಸ್ವಾಮಿ ವಿವೇಕಾನಂದರ ಕನಸಿನ, ಉಕ್ಕಿನ ದೇಹದ, ಕಠಿಣ ಮನಸ್ಥಿತಿಯ, ಶುದ್ದ ವ್ಯಕ್ತಿತ್ವದ, ಕ್ರಿಯಾತ್ಮಕ ಚಿಂತನೆಯ ಭಾರತದ ಯುವ ಜನಾಂಗ ಎಲ್ಲಿ ಹೋಯಿತು.


ದ್ವೇಷ ಕಾರುವ, ಸಣ್ಣ ಮನಸ್ಸಿನ ಅಸೂಯಾಪರ ಯುವ ಜನಾಂಗವನ್ನು ನೋಡಿ ಮನಸ್ಸು ಒದ್ದಾಡುತ್ತಿದೆ.


ಒಳ್ಳೆಯ ಅಂಶಗಳು ಇಲ್ಲವೆಂದಲ್ಲ. ಪಾಪ ಅವರಿಗೆ ಒಳ್ಳೆಯ ಮಾರ್ಗದರ್ಶನ ಸಿಗುತ್ತಿಲ್ಲ. ಒಳ್ಳೆಯದನ್ನು ಗ್ರಹಿಸುವ ಮನಸ್ಥಿತಿಯನ್ನು ಅವರಲ್ಲಿ ನಾವು ಬೆಳೆಸುತ್ತಿಲ್ಲ.  ಎಳನೀರಿನ ಜಾಗದಲ್ಲಿ ಪೆಪ್ಸಿ ಕೋಲಾಗಳು, ಸಹಜತೆಯ ಜಾಗದಲ್ಲಿ ಕೃತಕ ಬಣ್ಣಗಳು ಅವರನ್ನು ಆಕರ್ಷಿಸುತ್ತಿವೆ.


ಯುವಕರ ಐಕಾನ್ ವಿವೇಕಾನಂದರ ಚಿಕಾಗೋ ಭಾಷಣದ ಸಂದರ್ಭದಲ್ಲಿ ಮತ್ತೊಮ್ಮೆ ಯುವಕರನ್ನು ಈ ವಿಷ ಚಕ್ರದಿಂದ ಬಿಡುಗಡೆ ಮಾಡಿ ಸಹಜ ಮೌಲ್ಯಯುತ ಸುಂದರ ಬದುಕಿನತ್ತ ಕರೆದೊಯ್ಯುವ ಜವಾಬ್ದಾರಿ ನಾವು ಹೊರಬೇಕಿದೆ. ಅದರ ಪ್ರಯತ್ನದ ಒಂದು ಸಣ್ಣ ಭಾಗವೇ.


-ವಿವೇಕಾನಂದ. ಹೆಚ್.ಕೆ.

9844013068



0 Comments

Post a Comment

Post a Comment (0)

Previous Post Next Post