ಆಕೆ ಭಿಕ್ಷುಕಿ. ಜೋಪಡಿಯಲ್ಲಿ ತಾಯಿ ಉಬ್ಬಸದಿಂದ ಒದ್ದಾಡುತ್ತಿದ್ದರೆ ಆಕೆಯ ಬಳಿ ಉಬ್ಬಸದ ಔಷಧ ಖಾಲಿ ಆಗಿತ್ತು. ಔಷಧ ಬಾಟಲ್ ನೋಡಿದಳು 48 ರೂ, ತನ್ನಲ್ಲಿ ಇದ್ದದ್ದು ಕೇವಲ 8 ರೂ. ತಾಯಿಯ ಉಸಿರಾಟ ಇನ್ನಷ್ಟು ಜೋರಾದಾಗ ವಿಧಿ ಇಲ್ಲದೆ ಆ ಬಾಟಲ್ ಹಿಡಿದುಕೊಂಡು ಸಮೀಪದ ಮೆಡಿಕಲ್ನತ್ತ ಓಡಿದಳು. ಮೆಡಿಕಲ್ನವನಲ್ಲಿ ಪರಿ ಪರಿಯಾಗಿ ಬೇಡಿಕೊಂಡಳು.
ಹೋಗಾಚೆ ಎಂದು ದೂಡಿದ ಆತ, ಎಲ್ಲೆಲ್ಲಿಂದ ಬರುತ್ತವೆ ಬೆಳಿಗ್ಗೆ ಬೆಳಿಗ್ಗೆ ಎಂದು ಗೊಣಗುತ್ತ. ಕೆದರಿದ ಕೂದಲೊಂದಿಗೆ ಭಿಕ್ಷೆಗಿಳಿದಳು ಆಕೆ.
1 ಗಂಟೆ ಕಳೆದರೂ 10 ರೂ ಕೂಡ ಸಂಗ್ರಹಗೊಂಡಿರಲಿಲ್ಲ. ಎಲ್ಲರೂ ಊಟ ಕೊಡುತ್ತೇವೆ, ತಿಂಡಿ ಕೊಡುತ್ತೇವೆ, ನೋ ಕ್ಯಾಶ್ ಅಂದುಬಿಟ್ಟರು. ಆದರೆ ಈಕೆಗೆ ಕ್ಯಾಶ್ ಏ ಬೇಕಿತ್ತು ಅಮ್ಮನ ಔಷಧಿಗೆ. ದುಃಖದಿಂದ ಸಮೀಪದ ಅಂಗಡಿ ಬಳಿ ಗೋಡೆಗೆ ಎರಗಿ ನಿಂತಳು. ಅಲ್ಲಿ 2 ಯುವಕರು ಮಾತಾಡುವುದು ಕೇಳುತ್ತಿತ್ತು ಆಕೆಗೆ. ಕಿವಿ ಅಗಲಿಸಿ ಕೇಳಿದ್ದಳು.
"ನೋಡು ಈ ಸಂದೇಶ ಇಂದು ಎಲ್ಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಿಕ್ಷುಕರಿಗೆ ಕ್ಯಾಶ್ ಕೊಡುವುದರಿಂದ ನಾವು ಇನ್ನಷ್ಟು ಭಿಕ್ಷುಕರನ್ನು ಉತ್ಪತ್ತಿ ಮಾಡುತ್ತಿದ್ದೇವೆ, ಅದರ ಬದಲು ಊಟ ಕೊಡಿ, ಹಣಕೊಡಬೇಡಿ ಎಂದಿತ್ತಂತೆ. ಆ ವೈರಲ್ ಸಂದೇಶ. ಕೇಳುತ್ತಿದ್ದಂತೆ ಆಕೆಯ ಕಣ್ಣಲ್ಲಿ ನೀರಿತ್ತು. ಆಕೆಗೆ ಊಟ ಬೇಕಿರಲಿಲ್ಲ. ಕ್ಯಾಶ್ ಮಾತ್ರ ಸಾಕಿತ್ತು ಆ ಔಷಧಿ ಕೊಳ್ಳಲು ಯಾಕೆಂದರೆ ಆ ಮೆಡಿಕಲ್ ನವ ಹಣವನ್ನೇ ಕೇಳುತ್ತಿದ್ದ, ಅನ್ನ-ತಿಂಡಿಯನ್ನಲ್ಲ.
ಹೌದಲ್ಲವೇ ಇಂದು ಅದೆಷ್ಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಸಂದೇಶಗಳು ಅದೆಷ್ಟೋ ಜನರಿಗೆ ಮಾರಕವಾಗಿದೆ. ಭಿಕ್ಷುಕರಿಗೆ ಕ್ಯಾಶ್ ಕೊಡಬೇಡಿ ಎಂಬ ಸಂದೇಶ ಮೇಲ್ನೋಟಕ್ಕೆ ಉತ್ತಮ ಉದ್ದೇಶವಿರುವಂತೆ ಕಂಡರೂ ಸುಮಾರು 90 ಶೇಕಡಾ ಕಳ್ಳ ಭಿಕ್ಷುಕರ ಮಟ್ಟಿಗೆ ನಿಜವಾಗಿ ಕಂಡರೂ, 10 ಶೇಕಡಾ ನಿಜವಾದ ಭಿಕ್ಷುಕರ ಮಟ್ಟಿಗೆ ನಿಜಕ್ಕೂ ಕೊರಳಿಗೆ ಉರುಳಾಗಿದೆ.
ಹೊಟ್ಟೆಗೆ ಊಟ ಸಾಕಾದರೂ ಔಷಧ, ಬಟ್ಟೆ ಮತ್ತಿತರ ಅವಶ್ಯಕ ಸಾಮಗ್ರಿಗಳಿಗೆ ಹಣ ಬೇಕೇ ಅಲ್ಲವೇ ಯಾಕೆಂದರೆ ಯಾವ ಮೆಡಿಕಲ್ ಓನರ್ ಕೂಡ ಔಷಧ ಕ್ಕೆ ಬದಲಾಗಿ ಹಣ ವನ್ನೇ ಕೇಳುತ್ತಾನೆ ಹೊರತು ಅನ್ನ ತಿಂಡಿಯನ್ನಲ್ಲ ಅಲ್ಲವೇ ?
-ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್, ಉಡುಪಿ
9945130630 (ವಾಟ್ಸಪ್)
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ