ಅಡ್ಯನಡ್ಕದ ವಾರಣಾಶಿ ಸಾವಯವ ಫಾರ್ಮ್ ಎಂಟು ಮಂದಿ ಸ್ವಯಂಸೇವಕರು ಇದ್ದಾರೆ. ಇವರು ದೇಶದ ಬೇರೆಬೇರೆ ಭಾಗಗಳಿಂದ ಬಂದವರು. ಸ್ವಾವಲಂಬಿ ಸಾವಯವ ಜೀವನ ನಡೆಸಬಯಸುವವರು. ಕೃಷಿ ಮಾಡುತ್ತಾ ಪಾಠ ಕಲಿಯುತ್ತಿರುವವರು.
ಇವರಿಗಾಗಿ ವಾರಣಾಶಿ ಸಂಶೋಧನಾ ಪ್ರತಿಷ್ಠಾನ ಕಳೆದ ಶುಕ್ರವಾರ, ಆಗಸ್ಟ್ 20 ರಂದು ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ತಯಾರಿಯ ತರಬೇತಿ ನಡೆಸಿತು. ಪ್ರಾತ್ಯಕ್ಷಿಕೆಯ ಮೂಲಕ ಬಾಕಾಹು ತಯಾರಿಯ ಬಗ್ಗೆ ತಿಳಿಸಿಕೊಟ್ಟವರು ಡಾ. ಅಶ್ವಿನಿ ಕೃಷ್ಣಮೂರ್ತಿ. ಬಾಳೆಕಾಯಿ ಹುಡಿಯ ಪೋಷಕಮೌಲ್ಯಗಳ ಬಗ್ಗೆ ಮಾತಾಡಿದ ನಿವೇದಿತಾ ಈ ಹುಡಿಯಿಂದ ತಾಲಿಪ್ಪಿಟ್ಟು ಮತ್ತು ಬಿಸ್ಕೆಟ್ ತಯಾರಿಸಿದರು. ಹೊಸ ರುಚಿ ಎಲ್ಲರಿಗೂ ಇಷ್ಟವಾಯಿತು.
ಭಾಗವಹಿಸಿದವರ ಪೈಕಿ, ಮೂವರು ಸ್ವಯಂಸೇವಕರ ಮಾತುಗಳು ಕೆಳಗಿವೆ.
ಖುಶ್ ಬೂ, ಬೆಂಗಳೂರು: ರೆಸಿಸ್ಟೆಂಟ್ ಸ್ಟಾರ್ಚ್ ಹೊಂದಿರುವ ಬಾಳೆಕಾಯಿ ಹುಡಿಯ ಪರಿಚಯವಾಯಿತು. ಕರುಳಿನಲ್ಲಿರುವ ಸೂಕ್ಷ್ಮಾಣು ಜೀವಿಗಳಿಗಿದು ಒಳ್ಳೆಯದು. ಸಕ್ಕರೆ ಕಾಯಿಲೆಯವರಿಗೆ ಪರ್ಯಾಯ ಆಹಾರ. ನಾವಿದನ್ನು ಬಳಸಿ ನೋಡಬೇಕಿದೆ.
ಅನನ್ಯ, ಬೆಂಗಳೂರು: ಬಾಳೆಕಾಯಿ ಹುಡಿಯ ಬಗ್ಗೆ ಮೊದಲು ಕೇಳಿದಾಗ ತುಂಬಾ ಆಶ್ಚರ್ಯ ಆಯಿತು. ಇದರ ಈಗ ಅದನ್ನು ಮತ್ತು ಅದರಿಂದ ಆಹಾರ ತಯಾರಿಸಲು ಕಲಿತೆ. ಮನೆಗೆ ಹೋದ ಮೇಲೆ ಇನ್ನಷ್ಟು ಮಾಡಿ ನೋಡಬೇಕು. ತುಂಬಾ ಚೆನ್ನಾಗಿತ್ತು.
ಗುಣಶೇಖರ, ಮೈಸೂರು: ರೆಸ್ಟೋರೆಂಟಿನಲ್ಲಿ ನಾವು ಹೆಚ್ಚು ಮೈದಾ ಬಳಸುತ್ತಿದ್ದೆವು. ಇದನ್ನು ಅದಕ್ಕೆ ಪರ್ಯಾಯವಾಗಿ ಬಳಸಿ ನೋಡಬೇಕು.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ