ಪುತ್ತೂರು: ಅನುವಂಶಿಕ ವಸ್ತುವಾದ ಡಿಎನ್ಎಯ ಪುನರಾವರ್ತನೆ ಹಾಗೂ ಅದರ ಕಾರ್ಯವೈಖರಿಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ವಂಶವಾಹಿ ಅಧ್ಯಯನದ ಮೂಲಕ ಮಾನವನ ಬಗೆಗೆ ಅಗೋಚರವಾಗಿರುವ ಹಲವು ಅಂಶಗಳನ್ನು ವಿಜ್ಞಾನಿಗಳಿಗೆ ಗುರುತಿಸಲು ಸಾಧ್ಯವಾಗಿದೆ ಎಂದು ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ, ಐಕ್ಯೂಎಸಿ ಘಟಕದ ಸಂಯೋಜಕಿ ಡಾ. ಶುಭಾ ಹೇಳಿದರು.
ಅವರು ವಿವೇಕಾನಂದ ಪದವಿ ಕಾಲೇಜಿನ ಸಸ್ಯ ಶಾಸ್ತ್ರ, ಪ್ರಾಣಿಶಾಸ್ತ್ರ ವಿಭಾಗ, ನೇಚರ್ ಕ್ಲಬ್ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ 'Code of life and it's manipulation' ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ಮಟ್ಟದ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉತ್ತಮ ಭವಿಷ್ಯಕ್ಕಾಗಿ ಮುಂದಿನ ದಿನಗಳಲ್ಲಿ ಜೈವಿಕ ತಂತ್ರಜ್ಞಾನವನ್ನು ಬಳಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಪ್ರೋಟೀನ್ ಸಂಶ್ಲೇಷಣೆ, ಜೈವಿಕ ತಂತ್ರಜ್ಞಾನ ಹಾಗೂ ಅನುವಂಶೀಯವಾಗಿ ಮಾರ್ಪಡಿಸಿದ ಜೀವಿಗಳ ಬಗ್ಗೆ ವಿವರಿಸಿದ ಇವರು, ತಂತ್ರಜ್ಞಾನವನ್ನು ಅಗತ್ಯಕ್ಕೆ ತಕ್ಕಂತೆ ಹೇಗೆ ಅನುಷ್ಠಾನ ಮಾಡಬಹುದು ಹಾಗೂ ಎಂತಹ ಮುಂಜಾಗ್ರತೆಗಳನ್ನು ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಂಶುಪಾಲರಾದ ಪ್ರೊ. ವಿಷ್ಣು ಗಣಪತಿ ಭಟ್ ಶುಭ ಹಾರೈಸಿದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಪ್ರಾಧ್ಯಾಪಕ ಡಾ. ಸೌಮಿತ್ರ ಕೆ. ಸ್ವಾಗತಿಸಿ, ಪ್ರಾಧ್ಯಾಪಕಿ ಡಾ. ಸ್ಮಿತಾ ಪಿ. ಜಿ. ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಪ್ರಸಾದ್ ವಂದಿಸಿದರು. ಈ ವೆಬಿನಾರ್ ನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳು ರಾಜ್ಯ ಹಾಗೂ ಪರರಾಜ್ಯಗಳ ಹಲವಾರು ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ