ರಾಷ್ಟ್ರ ಸಮರ್ಪಿತ ಬದುಕು ನಮ್ಮದಾಗಬೇಕು: ಸಂಜೀವ ಮಠಂದೂರು
ಪುತ್ತೂರು: ಪ್ರತಿಯೊಬ್ಬರೂ ದೇಶಪ್ರೇಮ, ರಾಷ್ಟ್ರ ಸಮರ್ಪಣೆಯ ಬದುಕನ್ನು ಸಾಗಿಸಲು ಯತ್ನಿಸಬೇಕು. ದೇಶದ ಸಾರ್ವಭೌಮತ್ವ ಕಾಪಾಡಿಕೊಳ್ಳುವುದು ನಾಗರಿಕರಾದವರ ಜವಾಬ್ಧಾರಿ. ಹಾಗೆಯೇ ಸೈನಿಕರ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳಬೇಕು. ನಮ್ಮ ಸೈನಿಕ ನಮ್ಮ ಹೆಮ್ಮೆ ಎಂಬ ಪ್ರಧಾನಿಯವರ ಮಾತನ್ನು ಮರೆಯಬಾರದು ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಗರದ ಕಿಲ್ಲೆ ಮೈದಾನದ ಬಳಿ ರೂಪಿಸಲಾಗಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಾಜಿ ಸೈನಿಕರ ಸಂಘ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಲಾದ ಕಾರ್ಗಿಲ್ ವಿಜಯ ದಿವಸ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇಶಪ್ರೇಮ ಎಂದಾಕ್ಷಣ ಇಸ್ರೇಲ್ ನಮಗೆ ನೆನಪಿಗೆ ಬರುತ್ತದೆ. ಅದೇ ತರಹ ನಮ್ಮ ದೇಶವೂ ರಾಷ್ಟ್ರಪ್ರೇಮಕ್ಕೆ ಮತ್ತೊಂದು ಉದಾಹರಣೆಯಾಗಿ ನಿಲ್ಲಬೇಕು. ಕಾರ್ಗಿಲ್ ಯುದ್ಧ ಅಂತಹ ಕಲ್ಪನೆಯನ್ನು ನಮ್ಮಲ್ಲಿ ಬಿತ್ತಿದೆ. ದೇಶದ ಯುವಸಮುದಾಯಕ್ಕೆ ಕಾರ್ಗಿಲ್ ಒಂದು ಪ್ರೇರಣಾದಾಯಿ ಅಂಶವಾಗಿ ಕಾಣಿಸುತ್ತದೆ ಎಂದರಲ್ಲದೆ ಯುದ್ಧ ಎಂಬುದು ದೇಶಪ್ರೇಮದ ಸಂಕೇತ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಕ್ಯಾ.ಸೌರಭ್ ಕಾಲಿಯ ಅವರ ತಾಯಿ ಪ್ರತಿ ಮನೆಯಲ್ಲೂ ತನ್ನ ಮಗನಂತಹ ಮಕ್ಕಳು ಜನಿಸಬೇಕೆಂದು ಕರೆ ನೀಡಿದ್ದು ಈ ದೇಶದ ತಾಯಂದಿರಿಗೆ ಇರುವ ರಾಷ್ಟ್ರನಿಷ್ಠೆಗೆ ಉದಾಹರಣೆಯಾಗಿ ನಿಲ್ಲುತ್ತದೆ ಎಂದು ನುಡಿದರು.
ಯೋಧರ ನಿಸ್ವಾರ್ಥ ಸೇವೆ ಸ್ಮರಿಸೋಣ: ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಮಾತನಾಡಿ ಯೋಧರ ನಿಸ್ವಾರ್ಥ ಸೇವೆಯನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಸೈನಿಕರೆಂದರೆ ಗಾಳಿ, ಮಳೆ, ಹಸಿವು, ಅನಾರೋಗ್ಯಗಳನ್ನೆಲ್ಲ ಮೀರಿ ದೇಶಕ್ಕಾಗಿ ಬದುಕನ್ನು ಸಮರ್ಪಿಸುವ ರಾಷ್ಟ್ರಭಕ್ತರು. ನಮ್ಮ ತಾಯ್ನಾಡಿಗೆ ಸಲ್ಲಿಸುವ ಸೇವೆಯ ಅವಕಾಶಗಳಲ್ಲಿ ಸೇನೆಯೂ ಒಂದು. ಕಾರ್ಗಿಲ್ ಯುದ್ಧವಂತೂ ವಿಶ್ವಸಮುದಾಯಕ್ಕೆ ಸಂದೇಶ ನೀಡಿದ ಯುದ್ಧ ಎಂದು ಬಣ್ಣಿಸಿದರು.
ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಎಂ.ರಮೇಶ್ ಮಾತನಾಡಿ ನಾವಿಂದು ನೆಮ್ಮದಿಯಿಂದ ನಮ್ಮ ಮನೆಗಳಲ್ಲಿ ಮಲಗಲು ಸೇನೆ ಕಾರಣ. ಸೈನಿಕರಿಲ್ಲದಿರುತ್ತಿದ್ದರೆ ನಾವು ಪ್ರತಿ ಮನೆಯಿಂದ ಪಾಳಿಯಲ್ಲಿ ಕೆಲಸ ಮಾಡುವಂತಹ ಸಂದರ್ಭ ಬರುತ್ತಿತ್ತು ಎಂದರಲ್ಲದೆ ಇಂದಿನ ಸಮಾಜದಲ್ಲ್ಲಿ ಸ್ವಾರ್ಥ ತುಂಬಿ ತುಳುಕುತ್ತಿದೆ. ಕುವೆಂಪು ಅವರು ಹೇಳಿದಂತೆ ಮಗು ಹುಟ್ಟುವಾಗ ವಿಶ್ವಮಾನವನಾಗಿರುತ್ತದೆ. ಆದರೆ ಬೆಳೆಯುತ್ತಾ ಬಂದಂತೆ ನಾವು ಜಾತಿ, ಮತ, ಮೇಲು, ಕೀಳೆಂಬ ಭಾವನೆಯನ್ನು ಬಿತ್ತುತ್ತೇವೆ. ನಾವೆಲ್ಲ ಒಂದು ಎಂಬ ಭಾವ ಒಡಮೂಡಬೇಕಿದೆ ಎಂದರು.
ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಗೌರಿ ಮಾತನಾಡಿ ಕಾರ್ಗಿಲ್ ಜನರ ಕಣ್ಣು ತೆರೆಸಿ ಯುದ್ಧ. ಸೈನಿಕರ ಕಷ್ಟ ಏನು, ಅವರ ಪರಿಶ್ರಮ ಎಂತಹದ್ದು ಇತ್ಯಾದಿ ಮಾಹಿತಿಗಳನ್ನು ಜನಸಾಮಾನ್ಯರು ಈ ಯದ್ಧದ ನಂತರ ಮಾಧ್ಯಮಗಳ ಮೂಲಕ ತಿಳಿಯುವಂತಾಯಿತು. ಹಾಗಾಗಿ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಮಡಿದವರನ್ನು ಸದಾ ನೆನೆಯಬೇಕು ಎಂದು ಹೇಳಿದರು.
ದೇಶಪ್ರೇಮ ಅತೀ ಅಗತ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಮಾಜಿ ಸೈನಿಕ ಸಂಘದ ಅಧ್ಯಕ್ಷ ಜಗನ್ನಾಥ ಎಂ ಮಾತನಾಡಿ ದೇಶಕ್ಕಾಗಿ ಸೆಟೆದು ನಿಂತರೆ ಜಗತ್ತು ನಮ್ಮ ಕಾಲ ಬಳಿ ಇರುತ್ತದೆ. ಆಪಾನ್, ಇಸ್ರೇಲ್ ನಂತಹ ರಾಷ್ಟ್ರಗಳು ಸಮರ್ಥ ಎನಿಸಿಕೊಂಡಿರುವುದು ಕೇವಲ ಆಧುನಿಕ ತಂತ್ರಜ್ಞಾನಗಳಿಂದಷ್ಟೇ ಅಲ್ಲ ಬದಲಾಗಿ ದೇಶಪ್ರೇಮದ ಕಾರಣವೂ ಪ್ರಬಲವಾಗಿದೆ. ನಮ್ಮಲ್ಲಿಂದು ದೇಶಭಕ್ತಿಯ ಕೊರತೆ ಕಾಣಿಸುತ್ತಿದೆ. ಹಾಗಾಗಿಯೇ ಕಟ್ಟುವ ಕಟ್ಟಡ, ಸೇತುವೆಗಳಲ್ಲಿ ಕಳಪೆತನ ಕಾಣುತ್ತಿದ್ದೇವೆ. ಮುಂಬೈ ಭಯೋತ್ಪಾದನೆಯಂತಹ ದಾಳಿಗಳಿಗೆ ಸ್ಥಳೀಯರ ಸಹಕಾರವಿಲ್ಲದಿದ್ದರೆ ಸಾಧ್ಯವಿಲ್ಲ. ಇದು ಆತಂಕಕಾರಿ ವಿಚಾರ. ದೇಶಸೇವೆಗೆ ಸೇನೆಗೆ ಸೇರಿಯೇ ಆಗಬೇಕೆಂದಿಲ್ಲ. ಬದಲಾಗಿ ನಮ್ಮ ಸುತ್ತಮುತ್ತ ನಡೆಯುವ ಅಕ್ರಮಗಳ ವಿರುದ್ಧ ಹೋರಾಡುವುದೂ ದೇಶಸೇವೆಯೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷ ಜೀವಂಧರ್ ಜೈನ್, ಪೌರಾಯುಕ್ತ ಮಧು ಎಸ್ ಮನೋಹರ್, ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕೊಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್, ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಅಂಬಿಕಾ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಮಹೇಶ್ ಕಜೆ, ಪುತ್ತೂರಿನ ಮಾಜಿ ಸೈನಿಕ ಸಂಘದ ಸದಸ್ಯರು, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯರು, ನ್ಯಾಯವಾದಿಗಳು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಅಂಬಿಕಾ ಸಿಬಿಎಸ್ಇ ವಿದ್ಯಾಲಯದ ಶಿಕ್ಷಕಿಯರಾದ ಅಶ್ವಿನಿ, ಸುಜಯ ಹಾಗೂ ನಯನ ಪ್ರಾರ್ಥಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹಣ್ಯ ನಟ್ಟೋಜ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ವಂದಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ ಕಾರ್ಯಕ್ರಮ ನಿರ್ವಹಿಸಿದರು. ಕೋವಿಡ್ ನಿಯಮಾವಳಿಗನುಗುಣವಾಗಿ ಕಾರ್ಯಕ್ರಮ ನಡೆಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ