ಹಾಸನ : ಅಕ್ಷರ ಕಲಿಸುವ ಹಾಗೂ ಭವಿಷ್ಯದ ಪೀಳಿಗೆಯನ್ನು ರೂಪಿಸುವ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸುವುದರಿಂದ ಅವರಿಗೆ ಪ್ರೇರಣೆ ದೊರೆತು ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ದೊರೆಸ್ವಾಮಿ ವಿರಕ್ತ ಮಠದ ಶಾಂತಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಗದಗ ಜಿಲ್ಲೆಯ ರೋಣ ತಾಲೂಕು ಹೊಳೆಆಲೂರಿನ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆಯು ಗದಗ ನಗರದ ಜೆ.ಟಿ. ಮಹಾವಿದ್ಯಾಲಯ ಸಭಾಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 138ನೇ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿವಿಧ ಜಿಲ್ಲೆಗಳ ಶಿಕ್ಷಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಹಾಸನ ಜಿಲ್ಲೆಯ ಆರು ಜನ ಶಿಕ್ಷಕರಿಗೆ ಸಂಸ್ಥೆಯ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಶಿಕ್ಷಕರು:
ಚನ್ನರಾಯಪಟ್ಟಣ ತಾಲೂಕಿನ ಪಿ.ಎಂ.ಶ್ರೀ. ಕೆ.ಪಿ.ಎಸ್. ಶಾಲೆಯ ಪದವೀಧರ ಶಿಕ್ಷಕ ಮಂಜುನಾಥ ಎಂ.ಸಿ., ಹೊಳೆನರಸೀಪುರ ತಾಲೂಕಿನ ವಳಂಬಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಡಿ. ವಿಶ್ವನಾಥ, ಜಾಂದಾಳು ಕೊಪ್ಪಲು ಜಿ.ಯು.ಹೆಚ್.ಪಿ.ಎಸ್ ಶಾಲೆಯ ಶಿಕ್ಷಕಿ ಎ.ಸಿ. ಭಾರತಿ, ಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಿ.ಕೆ. ಮಂಜುನಾಥ, ಹಾಸನ ನಗರದ ಜಿಜಿಜೆಸಿ ಪ್ರಧಾನ ಪ್ರೌಢ ಶಾಲೆಯ ಸಮಾಜವಿಜ್ಞಾನ ಶಿಕ್ಷಕ ಕೆ.ಎನ್. ಚಿದಾನಂದ ಹಾಗೂ ವಾಣಿ ವಿಲಾಸ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಿ.ಎಂ. ದಯಾನಂದ.
ಸಂಸ್ಥೆಯ ಅಧ್ಯಕ್ಷೆ ಶೋಭಾ ಎಸ್. ಮಾತನಾಡಿ, ರಾಜ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರ ಎಂದರು. ಎಸ್.ಕೆ. ಆಡಿನ ಅವರು ಸನ್ಮಾನಿತರನ್ನು ಅಭಿನಂದಿಸಿದರು.
