ಮಾತನಾಡುವ ಮುನ್ನ ಯೋಚಿಸು,
ಯಾಕೆಂದರೆ ನಾಲಿಗೆಯಿಂದ ಹೊರಬಂದ ಮಾತು ಮತ್ತೆ ಹಿಂದಕ್ಕೆ ಬರುವುದಿಲ್ಲ.
“ಲೆ” ಎನ್ನುವ ನಾಲಿಗೆ, “ಅಯ್ಯಾ” ಎನ್ನಲು ಕಲಿಯಲಿಲ್ಲ.
ನಮ್ಮದೊಂದು ಪುಟ್ಟ ಗ್ರಾಮ. ಅಲ್ಲಿ ಸಾಯಂಕಾಲವಾದರೆ ಕಟ್ಟೆಯ ಮೇಲೆ ಗೂನು-ಗೂನು ಮಾತುಗಳು ಕೇಳಿಬರುತ್ತಿದ್ದವು. ಅದು ಟಿವಿ ಇಲ್ಲದ ಕಾಲ. ಆ ಸಮಯದಲ್ಲಿ ಹಿರಿಯರು–ಕಿರಿಯರು ಎಂಬ ಭಾವನೆಯ ಜೊತೆಗೆ ಪರಸ್ಪರ ಗೌರವ, ಮಾನವೀಯತೆ ಮತ್ತು ಮೌಲ್ಯಗಳು ಇದ್ದವು.
ಆದರೆ ಈಗ ಅದೇ ಕಟ್ಟೆಯ ಮೇಲೆ ನಮ್ಮ ಸಹಪಾಠಿಗಳ ಸಂವಾದ ನಡೆಯುತ್ತದೆ. ಅಲ್ಲಿ ಹಿರಿಯರಿಗೆ ಗೌರವವಿಲ್ಲ, ಮಾತಿಗೆ ಹಿಡಿತವಿಲ್ಲ.
ನಮ್ಮ ಗೆಳೆಯರು ಕೆಲವು ವಿಚಾರಗಳನ್ನು ಮಾತನಾಡುತ್ತಾ, ಬೇರೆಯವರ ವೈಯಕ್ತಿಕ ವಿಚಾರಗಳನ್ನು ಆಡಿಕೊಳ್ಳಲು ಪ್ರಾರಂಭಿಸಿದರು. ನಂತರ ಅವರ ಮನೆಯ ಹೆಣ್ಣುಮಕ್ಕಳ ಬಗ್ಗೆಯೂ ಮಾತನಾಡಿ, ಅಸಭ್ಯ ಪದಗಳನ್ನು ಬಳಸಲಾರಂಭಿಸಿದರು. ತಿರುಗಿ ನೋಡಿದಾಗ, ಅಲ್ಲಿ ಅವರ ಮನೆಯ ಸದಸ್ಯರೂ ಇದ್ದರು. ಅವರು ನಮಗೆ ಏನು ಮಾಡುತ್ತಾರೆ ಎಂಬುದನ್ನು ಯೋಚಿಸದೆ, ನಾವೂ ಅದೇ ರೀತಿಯ ಮಾತುಗಳನ್ನು ಆಡಿದೆವು. ಅವರು ಏನೂ ಹೇಳಲಿಲ್ಲ. ಆದರೆ ಅಲ್ಲಿ ಇದ್ದ ಎಲ್ಲರಿಗೂ ಮುಜುಗರ ಮತ್ತು ನೋವು ಉಂಟಾಯಿತು.
ಹಾಗೆಯೇ, ನಾನು ತುಂಬಾ ನಂಬಿಕೆ ಇಟ್ಟಿದ್ದ ಒಬ್ಬ ವ್ಯಕ್ತಿ ನಮ್ಮ ಮುಂದೆ ಒಂದು ರೀತಿಯಾಗಿ ಮಾತನಾಡಿ, ನಮ್ಮ ಹಿಂದೆ ನಮ್ಮನ್ನೇ ತೆಗಳುತ್ತಿದ್ದರು. ನಮ್ಮ ಬೆಳವಣಿಗೆಯನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನಮಗೆ ತಡವಾಗಿ ಗೊತ್ತಾಯಿತು. ಕಾರಣ, ಅವರ ನಾಲಿಗೆಯೇ ಅವರ ನಿಜವಾದ ಮನಸ್ಸನ್ನು ಹೊರಹಾಕಿತು.
ನಿಮ್ಮ ಮಾತನಾಡುವ ಭಾಷೆ ಅಥವಾ ಶೈಲಿ ಬದಲಾಗಿರಬಹುದು. ಆದರೆ ನೀವು ಆಡಿದ ಮಾತಿನಿಂದ ನಮ್ಮ ಮನಸ್ಸಿಗೆ ಉಂಟಾದ ನೋವು ಮಾತ್ರ ಕಡಿಮೆಯಾಗಿಲ್ಲ. ಅದನ್ನು ನಾವು ಸುಮ್ಮನೆ ಸಹಿಸಿಕೊಂಡೆವು.
ಗೆಳೆಯರೇ, ನಿಮ್ಮ ನಾಲಿಗೆಯಿಂದ ಮಾತನಾಡುವ ಮಾತುಗಳ ಮೂಲಕ ನೀವು ಈ ಪ್ರಪಂಚವನ್ನೇ ಗೆಲ್ಲುವ ಸಾಧ್ಯತೆ ಇದೆ. ಆದರೆ ನಿಮ್ಮ ಮಾತು ಸರಿಯಾಗಿರದಿದ್ದರೆ, ಅದೇ ನಾಲಿಗೆ ನಿಮ್ಮನ್ನು “ನಾಲಾಯಕ್” ಆಗಿ ಮಾಡಬಹುದು.
ಆದ್ದರಿಂದ ಮಾತನಾಡುವ ಮುನ್ನ ಯೋಚಿಸಿ.
ಮಾತಿಗೆ ಮಿತಿ ಇರಲಿ, ನಾಲಿಗೆಗೆ ಹಿಡಿತ ಇರಲಿ,
ಹಿರಿಯರಿಗೆ ಗೌರವ ಇರಲಿ,
ಮನುಷ್ಯತ್ವಕ್ಕೆ ಬೆಲೆ ಇರಲಿ.
-ಬಸವರಾಜ ರಾಮತೀರ್ಥ
ಗುಲಗಾಲ ಜಂಬಗಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

