ಪದವಿ ಪೂರ್ವ ಶಿಕ್ಷಣ ಜೀವನದ ಪ್ರಮುಖ ಘಟ್ಟ. ಏಕಾಗ್ರತೆಯಿಂದ ಜೀವನ ರೂಪಿಸುವ ಸಂಕಲ್ಪ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಯಾವುದೇ ವಿಷಯದಲ್ಲಿ ಪರಿಣತಿ ಅತ್ಯಗತ್ಯ. ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರಗತಿ ಸಾಧಿಸಲು ಸಹಾಯವಾಗುತ್ತದೆ. ವಿದ್ಯಾಭ್ಯಾಸದ ಕಡೆ ಗಮನ ಹರಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಧೈರ್ಯ ಅಗತ್ಯ. ಆ ಧೈರ್ಯ ವಿದ್ಯಾರ್ಥಿಗಳನ್ನು ನಾಯಕರಾಗಿ ಹೊರಹೊಮ್ಮಿಸಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ಅವರು ಇಂದು (ಜುಲೈ 29) ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
ಪದವಿ ಪೂರ್ವ ಕಾಲೇಜು ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ ತರಗತಿ ಪ್ರತಿನಿಧಿಗಳ ಮತ್ತು ಸ್ವಚ್ಛತಾ
ಸೇನಾನಿಗಳ ಪದ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜೀವನದಲ್ಲಿ ಭಾವನೆಗಳ ಹಾಗೂ ಉತ್ಸಾಹದ ಏರುಪೇರು ಸಹಜ ಧರ್ಮ.
ಜೀವನದಲ್ಲಿ ಕೊರತೆ ಕಂಡಾಗ ಉತ್ಸಾಹದಿಂದ ಎದುರಿಸಿದರೆ ಜೀವನಲ್ಲಿ ಸಾರ್ಥಕತೆ ಕಾಣುತ್ತದೆ. ಪ್ರತೀ ಪ್ರಯತ್ನವೂ
ಜೀವನದಲ್ಲಿ ಖುಷಿ ನೀಡುತ್ತದೆ. ಸಾಧನೆಯ ಮನಸ್ಸಿದ್ದದೆ ಸಾಮಾನ್ಯರಿಂದ ಅಸಾಮಾನ್ಯರಾಗಿ ತಮ್ಮ ಜೀವನ
ರೂಪಿಸಲು ಸಹಕಾರಿ. ನಾಯಕತ್ವ ಅಲಂಕಾರದ ಹುದ್ದೆ ಅಲ್ಲ. ಅದು ಜವಾಬ್ದಾರಿ. ಅದು ಅಧಿಕಾರ ಅಲ್ಲ, ವಿನಮ್ರತೆಯಿಂದ
ಜವಾಬ್ದಾರಿಗೆ ನ್ಯಾಯ ಕೊಡುವ ಪ್ರಯತ್ನ ನಾಯಕ ಮಾಡಿ ತೋರಿಸಬೇಕು. ಮನಸ್ಸಿನ ಶಕ್ತಿಗೆ ಪರಿಮಿತಿ ಇಲ್ಲ.
ಇದು ಮನುಷ್ಯನ ಜೀವನವನ್ನು ಸಾರ್ಥಕತೆ ಕಡೆಗೆ ಕೊಂಡೊಯ್ಯುತ್ತದೆ. ಉತ್ತಮ ನಾಯಕನು ವಿದ್ಯಾರ್ಥಿಗಳ ಹಾಗೂ
ಸಮಾಜದ ಏಳಿಗೆಯ ಪಣ ತೊಟ್ಟರೆ ಉತ್ತಮ ನಾಯಕನಾಗಿ ಹೊರ ಹೊಮ್ಮಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ
ಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ತಂತ್ರಜ್ಞಾನ ಮತ್ತು ವಸತಿ ನಿಲಯಗಳ ಕಾರ್ಯ ನಿರ್ವಾಹಣ ಅಧಿಕಾರಿ ಪೂರನ್ ವರ್ಮ ಮಾತನಾಡಿ, ವಿದ್ಯಾರ್ಥಿ ನಾಯಕನು ಉತ್ತಮ ಸಂವಹನ ಕಲೆಯನ್ನು ಹೊಂದಿರಬೇಕು. ಅವರು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಾರೆ. ಎಲ್ಲರ ಕಾಳಜಿಯನ್ನು ಬಯಸಿ, ನಂಬಿಕೆಗೆ ಪಾತ್ರರಾದರೆ ನಾಯಕನ ಜವಾಬ್ದಾರಿ ಪರಿಪೂರ್ಣಗೊಳ್ಳುತ್ತದೆ. ವಿದ್ಯಾರ್ಥಿಗಳು ತಮ್ಮತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಪ್ರಯತ್ನ ಪಡಬೇಕು. ಬೇರೆಯವರ ಕಷ್ಟಗಳನ್ನು ಆಲಿಸಿ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸಿದರೆ ಉತ್ತಮ ನಾಯಕನಾಗಲು ಸಾಧ್ಯವಾಗುತ್ತದೆ. ಕೊಟ್ಟ ಜವಾಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸಿ ಎಂದು ಹೇಳಿದರು.
ತರಗತಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ, ಉತ್ತಮ ನಾಯಕನು ತನ್ನ ಕರ್ತವ್ಯವನ್ನು ಅರಿತು ಮುನ್ನಡೆಯಬೇಕು. ಅಧಿಕಾರದಿಂದ ಬೀಗಿದರೆ ಮಾಡಿದ ಕಾರ್ಯಗಳು ಫಲ ನೀಡುವುದಿಲ್ಲ. ತಾಳ್ಮೆ ಹಾಗೂ ಜವಾಬ್ದಾರಿಯನ್ನು ಅರಿತು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಎಲ್ಲರ ನಂಬಿಕೆಗೆ ಪಾತ್ರರಾಗುತ್ತೀರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳನ್ನು ಪಡೆದು, ಜೆಇಇ ಹಾಗೂ ಸಿಇಟಿ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತಂದ ಹರಿಕೃಷ್ಣ, ಸಿಎ ಫೌಂಡೇಶನ್ ಪೂರ್ಣಗೊಳಿಸಿದ ಅಂಶುಲ ಶ್ರೇಷ್ಠ, ಮತ್ತು ಪ್ರಥಮ್ ಇವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.
ಕಾಲೇಜಿನ ಉಪ ಪ್ರಾಂಶುಪಾಲ ಡಾ ರಾಜೇಶ್ ಬಿ ಇವರು ಕಾಲೇಜಿನ ಸ್ವಚ್ಛತಾ ಸೇನಾನಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

