ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ‘ವಿವೇಕ ಪ್ರದೀಪ್ತಿ – 2026’ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆದರ್ಶ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ರ್ತೀರೋಗ ತಜ್ಞೆ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಡಾ. ಅರ್ಚನಾ ಕಾವೇರಿ ಬಿ. ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಶಿಕ್ಷಣವನ್ನು ನೀಡುವುದು ಅಷ್ಟು ಸುಲಭ ಸಾಧ್ಯವಲ್ಲ. ವಿವೇಕಾನಂದ ವಿದ್ಯಾಸಂಸ್ಥೆ ಇಂತಹದೊಂದು ಕಾರ್ಯವನ್ನು ಆರಂಭದಿಂದಲೂ ಮಾಡುತ್ತಿರುವುದು ಪ್ರಶಂಸನೀಯ ಹಾಗೂ ಗಮನಾರ್ಹ. ಜೀವನದಲ್ಲಿ ಮೇಲೇರಲು ಸತತ ಪರಿಶ್ರಮದ ಅಗತ್ಯವಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವ ಇನ್ನಷ್ಟು ಪ್ರಜ್ವಲಿಸಬಲ್ಲದು. ವಿದ್ಯಾರ್ಥಿಗಳು ತಮಗೆ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಹೋದಲ್ಲಿ ಮತ್ತು ಹೆತ್ತವರ ಶ್ರಮಕ್ಕೆ ತಮ್ಮ ಶ್ರಮವನ್ನು ಧಾರೆ ಎರೆದಾಗ ಮಾತ್ರವೇ ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ನುಡಿದರು.
ಇನ್ನೋರ್ವ ಮುಖ್ಯ ಅತಿಥಿ ಯೇನಪೋಯ ಮೆಡಿಕಲ್ ಕಾಲೇಜಿನ ಮನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ರಾಜೇಶ್ ಎಮ್. ಮಾತನಾಡುತ್ತಾ, ಸಾಧನೆ ಎಂಬುದು ಒಂದೇ ದಿನದಲ್ಲಿ ದೊರೆಯುವುದಿಲ್ಲ. ಅದರ ಹಿಂದೆ ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪ ಅಡಗಿರುತ್ತದೆ. ಪ್ರತಿಯೊಂದು ಸಾಧನೆ ಹಿಂದೆ ಅನೇಕ ಸವಾಲುಗಳು ಮತ್ತು ಕೆಲವೊಮ್ಮೆ ವೈಫಲ್ಯಗಳು ಇರುತ್ತದೆ. ಆದರೆ ವೈಫಲ್ಯ ಅಂತ್ಯವಲ್ಲ ಅದು ಯಶಸ್ಸಿನ ಮೆಟ್ಟಿಲು. ವೈಫಲ್ಯದಿಂದ ಪಾಠ ಕಲಿತು ಕಠಿಣ ಪರಿಶ್ರಮ, ನಿರಂತರತೆ ಮತ್ತು ಶಿಸ್ತನ್ನು ಕೈ ಬಿಡದೆ ಮುನ್ನಡೆಯುವವರೇ ನಿಜವಾದ ಯಶಸ್ಸನ್ನು ಜೀವನದಲ್ಲಿ ಕಾಣುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ ಪುತ್ತೂರು ತಾಲೂಕಿನಲ್ಲೇ ಅತ್ಯಂತ ಹೆಚ್ಚು ವಿಶಿಷ್ಟ ಶ್ರೇಣಿಯ ಫಲಿತಾಂಶವನ್ನು ಪಡೆಯುವುಡರೊಂದಿಗೆ ಸ್ಪರ್ಧಾತ್ಮಕ ಪರೀಕ್ಷಾ ಫಲಿತಾಂಶಗಳಲ್ಲಿ ಮೊದಲಿಗರೆಂಬ ಹೆಮ್ಮೆ ನಮಗಿದೆ. ಫಲಿತಾಂಶದ ಜೊತೆಗೆ ಕ್ರೀಡೆ ಹಾಗೂ ಇತರ ಕ್ಷೇತ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆ ಗಮನಾರ್ಹವಾಗಿದೆ. ನಮ್ಮ ವಿದ್ಯಾರ್ಥಿಗಳು ಮೌಲ್ಯಯುತ ಸಮಾಜದ ನಿರ್ಮಾಣದಲ್ಲಿ ಮುನ್ನಡೆಯುತ್ತಾರೆ ಎಂಬ ಭರವಸೆ ನಮ್ಮದು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಾಧಕ ಹಿರಿಯ ವಿದ್ಯಾರ್ಥಿಗಳಾದ ಡಾ. ಅರ್ಚನಾ ಕಾವೇರಿ ಬಿ. ಹಾಗೂ ಡಾ. ರಾಜೇಶ್ ಎಮ್. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 458 ವಿದ್ಯಾರ್ಥಿಗಳು ಹಾಗೂ ಸಿ.ಇ.ಟಿ., ಜೆ.ಇ.ಇ., ನೀಟ್, ಸಿ.ಎ., ಸಿ.ಎಸ್.ಇ.ಇ.ಟಿ. ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಸನ್ಮಾನಿತ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲ ದೇವಿಚರಣ್ ರೈ ಎಂ. ಸ್ವಾಗತಿಸಿ, ಉಪನ್ಯಾಸಕಿ ರಂಜಿನಿ ವಿ ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕ ಪರಮೇಶ್ವರ ಶರ್ಮ ಪಿ .ಕೆ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



