ಮಂಗಳೂರು ರಾಮಕೃಷ್ಣ ಮಿಷನ್ನ ಸರಣಿ ಉಪನ್ಯಾಸ ಮಾಲಿಕೆ “ವಿವೇಕ ಜಾಗೃತಿ” ಪ್ರಯುಕ್ತ ಉಪನ್ಯಾಸ
ಪುತ್ತೂರು: ಪ್ರಬಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಪ್ರತೀ ವ್ಯಕ್ತಿಯಿಂದ ಸಾಧ್ಯವಿದೆ. ಇದಕ್ಕೆ ಅಪಾರವಾದ ಇಚ್ಛಾಶಕ್ತಿ ಬೇಕಾಗುತ್ತದೆ. ನಾವು ಇಚ್ಛಾ ಶಕ್ತಿಯನ್ನು ಸಕಾರಾತ್ಮಕವಾಗಿ ಬೆಳೆಸಿಕೊಂಡಲ್ಲಿ ಸರ್ವಾಂಗೀಣ ಬೆಳವಣಿಗೆ ಸಾಧ್ಯವಿದೆ ಎಂದು ಬಳ್ಳಾರಿಯ ರಾಮಕೃಷ್ಣ ಮಿಷನ್ನ ಮುಖ್ಯಸ್ಥರಾದ ಸ್ವಾಮಿ ಮಂಗಳನಾಥಾನಂದಜಿ ನುಡಿದರು.
ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ, ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ನಡೆಯುತ್ತಿರುವ ವಿವೇಕ ಜಾಗೃತಿ ಸರಣಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಕ್ತಿ, ಶ್ರದ್ದೆ ಮತ್ತು ಸಾಧನೆ - ಯುವಕರಿಗೆ ಸ್ವಾಮಿ ವಿವೇಕಾನಂದರ ಸಂದೇಶ ಎಂಬ ವಿಷಯದ ಕುರಿತು ಮಾತನಾಡಿದ ಪೂಜ್ಯರು, ಇಚ್ಛಾಶಕ್ತಿ ಎನ್ನುವುದು ವ್ಯಕ್ತಿಯು ತನ್ನ ಗುರಿಯನ್ನು ಸಾಧಿಸಲು ಹೊಂದಿರುವ ದೃಢಸಂಕಲ್ಪ, ಮನೋಬಲ ಮತ್ತು ನಿರಂತರ ಪ್ರಯತ್ನ ಮಾಡುವ ಶಕ್ತಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರತಿ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ದೆಸೆಯಲ್ಲಿ ಇಚ್ಛಾಶಕ್ತಿಯನ್ನು ಪ್ರಬಲಗೊಳಿಸಿಕೊಂಡಲ್ಲಿ ಗುರಿ ಸಾಧನೆ ಸುಲಭವೆನಿಸಬಹುದು. ವಿದ್ಯಾರ್ಥಿಗಳು ತಾವು ನೋಡುವ, ಕೇಳುವ, ಮಾಡುವ ಸಂಗತಿಗಳು ಸದಾ ಮೇಲ್ಪಂಕ್ತಿಯಲ್ಲಿ ಇರಬೇಕು. ಅದು ಕಳಪೆ ಮಟ್ಟದ್ದಾದಲ್ಲಿ ಇಚ್ಛಾಶಕ್ತಿ ಕ್ಷೀಣಗೊಳ್ಳಬಲ್ಲದು. ಆದುದರಿಂದ ಸ್ವಾಮಿ ವಿವೇಕಾನಂದರ ಮೌಲ್ಯ, ತತ್ವ ಆದರ್ಶಗಳನ್ನು ಪ್ರತಿ ವಿದ್ಯಾರ್ಥಿ ಮೈಗೂಡಿಸಿಕೊಂಡು ಅದ್ಭುತವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ. ವಹಿಸಿಕೊಂಡರು. ವೇದಿಕೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್ನ ಹಿರಿಯ ಸ್ವಯಂಸೇವಕ ಬೆಳ್ಳಾಲ ಗೋಪಿನಾಥ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ನ ಮೌಲ್ಯ ಶಿಕ್ಷಣ ಕಾರ್ಯಕ್ರಮಗಳ ಸಂಯೋಜಕರಾದ ಸಜೀತ್, ಸ್ವಯಂಸೇವಕರಾದ ಸನತ್, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಪ್ರಾಂಶುಪಾಲ ದೇವಿಚರಣ್ ರೈ ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ, ಉಪನ್ಯಾಸಕಿ ಡಾ. ಸ್ನೇಹ ಬಿ. ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


