ಭರವಸೆಯ ಬೆಳ್ಳಿಚುಕ್ಕಿ ನಿಹಾರಿಕಾ

Upayuktha
0





ತಂದೆ-ತಾಯಿಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಮಕ್ಕಳ ಆಸಕ್ತಿ ಮತ್ತು ಅಭಿರುಚಿಯನ್ನು ಉತ್ತೇಜಿಸುತ್ತ ಅವರ ಸಾಧನೆಗೆ ಪೂರಕವಾಗಿ ನಿರಂತರ ಪ್ರೋತ್ಸಾಹ ನೀಡುತ್ತಿರುತ್ತಾರೆ. ಈ ರೀತಿಯ ಬೆಂಬಲದ ಫಲವಾಗಿ ಹುನಗುಂದ ತಾಲೂಕಿಗೆ ಅತೀ ಹೆಚ್ಚು ಅಂಕ ಗಳಿಸಿ ಕಿರು ಸಾಧನೆಗೆ ಭಾಜನವಾದ ಪುಟ್ಟ ವಿದ್ಯಾರ್ಥಿನಿ ನಿಹಾರಿಕಾ.


ಸೂಳೇಬಾವಿಯ ನಿಹಾರಿಕಾ ಚಂದ್ರಶೇಖರ ಮಾಶ್ಯಾಳ 6ನೇ ತರಗತಿ ಶಾಲಾ ಪ್ರವೇಶಕ್ಕಾಗಿ ನಡೆದ ಐದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಸಾಧನೆ ಮಾಡಿದ್ದಾಳೆ. ಮೊರಾರ್ಜಿ ದೇಸಾಯಿ ಮತ್ತು ಆದರ್ಶ ವಿದ್ಯಾಲಯ ಪರೀಕ್ಷೆಯಲ್ಲಿ ಹುನಗುಂದ ತಾಲೂಕಿಗೆ ಟಾಪರ್ ಆಗಿ ಗಮನ ಸೆಳೆದಿದ್ದಾಳೆ.


ಸೂಳೇಬಾವಿಯ ಶ್ರೀ ರಾಮಯ್ಯಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ನಿಹಾರಿಕಾ 2026-27 ನೇ ಸಾಲಿನ ಜವಾಹರ ನವೋದಯ, ಸೈನಿಕ್ ಸ್ಕೂಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆದರ್ಶ ವಿದ್ಯಾಲಯ ಮತ್ತು ಮೂಡಬಿದ್ರೆಯ ಆಳ್ವಾಸ್ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಅರ್ಹ ಅಂಕ ಗಳಿಸಿ ಆಯ್ಕೆಯಾಗಿದ್ದು ಅಂತಿಮವಾಗಿ ಮೂಡಬಿದ್ರೆಯ ಆಳ್ವಾಸ್ ಶಾಲೆಯನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದ್ದಾಳೆ.


ಶೀಲಾ ಜೋಗೂರ ಮತ್ತು ಚಂದ್ರಶೇಖರ ಮಾಶ್ಯಾಳ ಶಿಕ್ಷಕ ದಂಪತಿಗಳ ಏಕೈಕ ಪುತ್ರಿಯಾದ ನಿಹಾರಿಕಾ ಕನ್ನಡ ಮಾಧ್ಯಮವನ್ನೇ ಮೊದಲ ಆಯ್ಕೆಯಾಗಿ ಪರಿಗಣಿಸಿದ್ದು ತಂದೆ-ತಾಯಿಯರ ಕನ್ನಡ ಪ್ರೇಮವನ್ನು ಎತ್ತಿ ತೋರಿಸಿದೆ. ಜೊತೆಗೆ ಎಲ್ಲರೂ ಆಂಗ್ಲ ಮಾಧ್ಯಮವನ್ನೇ ಆಯ್ಕೆ ಮಾಡಿಕೊಂಡು ಓದುತ್ತಿರುವಾಗ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಭವಿಷ್ಯದಲ್ಲಿ ಉತ್ತಮ ಉದ್ಯೋಗವಕಾಶ ಸಿಗುವ ಆಶಾಭಾವನೆ ಮತ್ತು ಕನ್ನಡದ ಅಸ್ಮಿತೆಗಾಗಿ, ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಮಗಳನ್ನು ಕನ್ನಡದಲ್ಲಿ ಓದಲು ಪ್ರೇರೇಪಿಸಲಾಗಿದೆ ಎನ್ನುತ್ತಾರೆ ತಾಯಿ ಶೀಲಾ.


ಅಪ್ಪ-ಅಮ್ಮನ ಆಸೆಯಂತೆ ಓದಿ ವಿದ್ಯಾವಂತಳಾಗಿ ಒಂದೊಳ್ಳೆ ಕೆಲಸ ಮಾಡುತ್ತೇನೆ. ಡಾಕ್ಟರ್, ಇಂಜಿನಿಯರ್, ಟೀಚರ್ ಅಂತ ಯಾವುದೇ ಕೆಲಸ ಆಯ್ಕೆ ಮಾಡಿಕೊಂಡರೂ ನನಗೆ ಡಾನ್ಸ್ ಮತ್ತು ಹಾಡುವುದು ಅಂದ್ರೆ ತುಂಬಾ ಇಷ್ಟ. ಅವುಗಳನ್ನು ಹವ್ಯಾಸವಾಗಿ ಬೆಳೆಸಿಕೊಳ್ಳುತ್ತೇನೆ ಎನ್ನುವ ನಿಹಾರಿಕಾಳ ಕನಸು ನನಸಾಗಲಿ. ಸಾಧನೆಯ ಹಾದಿಯಲ್ಲಿ ಭರವಸೆಯ ಬೆಳ್ಳಿಚುಕ್ಕಿಯಾಗಿ ಕಂಗೊಳಿಸಲಿ. ಅವಳ ಬದುಕು ಉಜ್ವಲವಾಗಲಿ ಎಂದು ಶುಭ ಹಾರೈಸುತ್ತ ಅವಳ ಈವರೆಗಿನ ಸಾಧನೆಗೆ ಅಭಿನಂದನೆಗಳು. 


- ಜಗದೀಶ ಹದ್ಲಿ, ಹುನಗುಂದ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top