ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ: ಡಾ. ರವಿಪ್ರಸಾದ ಹೆಗ್ಡೆ

Upayuktha
0


ಮೂಡುಬಿದಿರೆ: ಯುವಜನರು ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ರವಿಪ್ರಸಾದ ಹೆಗ್ಡೆ ಹೇಳಿದರು.

ಕೇಂದ್ರ ಸರ್ಕಾರದ ‘ನಶಾಮುಕ್ತ ಭಾರತ್ ಅಭಿಯಾನ' ಅಂಗವಾಗಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಾದಕ ವಸ್ತು ನಿಯಂತ್ರಣ ಸಮಿತಿ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 'ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ವ್ಯಸನಮುಕ್ತ ಜೀವನ' ಕುರಿತ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾದಕ ವ್ಯಸನವು ಹೊಸ ಸಮಸ್ಯೆಯಲ್ಲ. ಪ್ರಾಚೀನ ಕಾಲದಿಂದಲೂ ವಿವಿಧ ರೂಪಗಳಲ್ಲಿ ಸಮಾಜವನ್ನು ಕಾಡುತ್ತಲೇ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಸ್ವರೂಪ ಮತ್ತಷ್ಟು ಅಪಾಯಕಾರಿಯಾಗಿದ್ದು, ಯುವಜನರನ್ನು ಹೆಚ್ಚು ಸೆಳೆಯುತ್ತಿದೆ.

ಸ್ನೇಹಿತರ ಒತ್ತಡ ಅಥವಾ ಕ್ಷಣಿಕ  ಸುಖಕ್ಕಾಗಿ  ಆರಂಭವಾಗುವ ಅಭ್ಯಾಸ ಕ್ರಮೇಣ ವ್ಯಕ್ತಿಯ ಆರೋಗ್ಯ, ಶಿಕ್ಷಣ, ವೃತ್ತಿ ಹಾಗೂ ಕುಟುಂಬ ಜೀವನವನ್ನೇ ಹಾಳು ಮಾಡುತ್ತದೆ. ವಿಷ ಸೇವಿಸಿದರೆ ಕ್ಷಣಮಾತ್ರದಲ್ಲಿ ಜೀವ ಕಳೆದುಕೊಳ್ಳಬಹುದು; ಆದರೆ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನ ವ್ಯಕ್ತಿಯನ್ನು ನಿಧಾನವಾಗಿ ಸಾವಿನತ್ತ ತಳ್ಳುತ್ತದೆ.

ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳು ಮಾತ್ರವಲ್ಲದೆ ಕುಟುಂಬ ಕಲಹ, ರಸ್ತೆ ಅಪಘಾತ, ಹಿಂಸಾಚಾರ ಮತ್ತು ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಯಾರೂ ವ್ಯಸನಿಯಾಗಬೇಕೆಂಬ ಉದ್ದೇಶದಿಂದ ಮಾದಕ ವಸ್ತುಗಳನ್ನು ಸೇವಿಸಲು ಆರಂಭಿಸುವುದಿಲ್ಲ. ಆದರೆ ಒಂದು ಬಾರಿ ಅದರ ದಾಸರಾದರೆ ಅದರಿಂದ ಹೊರಬರುವುದು ಬಹಳ ಕಷ್ಟವಾಗುತ್ತದೆ. ಆದ್ದರಿಂದ ವ್ಯಸನದ ಬಗ್ಗೆ ಕುತೂಹಲವೂ ಬೇಡ, ಪ್ರಯೋಗವೂ ಬೇಡ," ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ವ್ಯಸನಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ವೈಯಕ್ತಿಕ ಸಂಕಲ್ಪದಿಂದಲೇ  ಸಾಧ್ಯವಾಗಬೇಕು.
ಮೊದಲು ನಾವು ಸರಿಯಾದರೆ ಕುಟುಂಬ ಸರಿಯಾಗುತ್ತದೆ. ಕುಟುಂಬ ಸರಿಯಾದರೆ ಸಮಾಜ, ಗ್ರಾಮ, ಜಿಲ್ಲೆ, ರಾಜ್ಯ ಮತ್ತು ದೇಶವೂ ಉತ್ತಮ ದಿಕ್ಕಿನಲ್ಲಿ ಸಾಗುತ್ತದೆ. ಯಾವುದೇ ಮಾದಕ ವಸ್ತುವನ್ನು ಮುಟ್ಟುವುದಿಲ್ಲ ಎಂಬ ದೃಢ ನಿರ್ಧಾರವೇ ವ್ಯಸನಕ್ಕೆ ಶಾಶ್ವತ ಪರಿಹಾರ.  ‘ಬೇಡ' ಎಂದು ಹೇಳುವುದು ದೌರ್ಬಲ್ಯವಲ್ಲ; ಅದು ವ್ಯಕ್ತಿಯ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವದ ಬಲದ ಸಂಕೇತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ನಶಾಮುಕ್ತ ಭಾರತ್ ಪ್ರತಿಜ್ಞೆ ಬೋಧಿಸಿದರು. ವಿದ್ಯಾರ್ಥಿಗಳು ಯಾವುದೇ ಮಾದಕ ವಸ್ತುಗಳನ್ನು ಸೇವಿಸದಿರುವುದಾಗಿ ಹಾಗೂ ಸಮಾಜದಲ್ಲಿಯೂ ವ್ಯಸನಮುಕ್ತ ಬದುಕಿನ ಬಗ್ಗೆ ಅರಿವು ಮೂಡಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಕಾರ್ಯಕ್ರಮ ಸಂಯೋಜಕ ಟಿ.ಎ.ಎನ್. ಖಂಡಿಗೆ, ಇದ್ದರು. ಜೇಸನ್ ಕ್ಯಾಸ್ಟಿಲಿನೋ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top