ಮಂಡ್ಯದಿಂದ ಕಳೆದ ನಲವತ್ತೆರಡು ವರ್ಷಗಳಿಂದ ನಿರಂತರವಾಗಿ ಪ್ರತಿ ಗುರುವಾರ ಹೊರಬರುತ್ತಿರುವ 'ಕೊಳಲು' ವಾರಪತ್ರಿಕೆಯ ಸಂಸ್ಥಾಪಕ ಸಂಪಾದಕ ಡಿ.ಎನ್. ಶ್ರೀಪಾದು ಅವರಿಗೆ ಈಗ 75 ರ ಸಂಭ್ರಮ.
ದೇವರಾಯನ ದುರ್ಗದ ವೇದ ವಿದ್ವಾನ್ ನರಸಿಂಹ ಮೂರ್ತಿ ಆಚಾರ್ಯ ಹಾಗೂ ಸಾವಿತ್ರಮ್ಮ ನವರ ಪುತ್ರ ಶ್ರೀಪಾದು ಬಡತನದ ಬೇಗೆಯಲ್ಲಿ ತಾನೇ ಕಡೆದುಕೊಂಡ ಶಿಲ್ಪ. ಸಮಾಜ ಮುಖಿಯಾದ ಯುವ ಮನಸ್ಸು.
ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ಮಂಡ್ಯ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ವಿರೋಧ ಪಕ್ಷದ ನಾಯಕ ಶ್ರೀ ವಾಜಪೇಯಿ ಅವರ ಭಾಷಣವನ್ನು ಯಥಾವತ್ತಾಗಿ ಕನ್ನಡಕ್ಕೆ ಭಾಷಾಂತರಿಸಿ ಮಾತನಾಡಿದ್ದು ಸ್ಮರಣೀಯ.
ನಾವು ಸಮಾಜವನ್ನು ಬೆಳೆಸಿದರೆ ಸಮಾಜ ನಮ್ಮನ್ನು ಬೆಳೆಸುತ್ತದೆ ಅನ್ನುವ ಮಾತಿಗೆ ಶ್ರೀಪಾದು ಸಾಕ್ಷಿಯಾದರು.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಮಂಡ್ಯದ ಸೋದರ ಮಾವನ ಆಶ್ರಯದಲ್ಲಿ ಬೆಳೆದು, ಓದಿ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ತನ್ನ ವಿಶಿಷ್ಟ ಬೆರೆಯುವಿಕೆಯ ಗುಣದಿಂದ ಮಂಡ್ಯದ ಮನೆ ಮನೆಯ ಮಗನಾದರು. ಯುವಜನ ಸೇವಾ ಇಲಾಖೆ, ನೆಹರೂ ಯುವ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಇವುಗಳಲ್ಲಿ ತೊಡಗಿಕೊಂಡು ಎಲ್ಲ ಸಮುದಾಯಕ್ಕೆ ಹತ್ತಿರವಾದರು.
1984 ವಿಜಯದಶಮಿ ಯಂದು ಪತ್ರಿಕಾ ಜಗತ್ತಿಗೆ ಕಾಲಿಟ್ಟ ಅವರ ಸಂಪಾದಕತ್ವದ 'ಕೊಳಲು' ವಾರಪತ್ರಿಕೆ ಜಿಲ್ಲೆಯ ರಾಜಕೀಯ ಒಳಸುಳಿಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾ ಎಲ್ಲ ಪಕ್ಷಗಳಿಂದ ತನ್ನ ಅಂತರವನ್ನು ಕಾಪಾಡಿಕೊಂಡು ಬಂದಿತು.
ಆದರೆ ತನ್ನ ಪತ್ರಿಕೋದ್ಯಮದ ಧ್ಯೇಯ ನಿಷ್ಠೆಯನ್ನು ಎಂದೂ ಕೈಬಿಡಲಿಲ್ಲ. ಜಿಲ್ಲೆಯಲ್ಲಿ ನೆಲಕಚ್ಚಿದ ಪತ್ರಿಕೆಗಳು ಬಹಳಷ್ಟಿವೆ. ಆದರೆ ಮಂಡ್ಯದ ಓದುಗರು ಕೊಳಲನ್ನು ಈಗಲೂ ಕೈ ಹಿಡಿದು ನಡೆಸಿಕೊಂಡು ಬರುತ್ತಿರುವುದು ವಿಸ್ಮಯ ಅನಿಸಿದರೂ ಸತ್ಯ.
ಅವರ ಜನ ಸಂಪರ್ಕಕ್ಕೆ ಅಳತೆಗೋಲಾಗಿ ನಾನು ಅವರಿಗೊಂದು ಕಾರ್ಡ್ ಪೋಸ್ಟ್ ಮಾಡಿದ್ದೆ. ಬೇಕೆಂದೇ ವಿಳಾಸದಲ್ಲಿ ಶ್ರೀ ಡಿ.ಎನ್. ಶ್ರೀಪಾದು, ಮಂಡ್ಯ 571401 ಎಂದಷ್ಟೇ ಬರೆದಿದ್ದೆ. ಪತ್ರ ಅವರನ್ನು ತಲುಪಿತ್ತು..!
ಮಂಡ್ಯದ ಪತ್ರಕರ್ತ ಮಿತ್ರರು ಮಂಡ್ಯ ಕರ್ನಾಟಕ ಸಂಘ ಸಭಾಂಗಣದಲ್ಲಿ ಈ ದಿನ ಗುರುವಾರ ಅವರ 75 ನೇ ಜನ್ಮದಿನದಂದು ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅವರ ಪತ್ರಿಕಾಸೇವೆ ನಿರಂತರವಾಗಿ ಸಾಗುತ್ತಿರಲಿ ಎಂದು ಹಾರೈಸುತ್ತೇನೆ.
-ಡಾ.ಹೆಚ್.ಎಸ್. ಸುರೇಶ್.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


