ಮಂಗಳೂರು: ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ಇಂದು ಮಂಗಳೂರಿನ ಪ್ರತಿಷ್ಠಿತ ಎಂಆರ್ಪಿಎಲ್ (MRPL) ಸಂಸ್ಥೆಯು 2025–26 ನೇ ಸಾಲಿನ ಸಿಎಸ್ಆರ್ ಯೋಜನೆಯಡಿ ₹10 ಲಕ್ಷ ಅನುದಾನದಲ್ಲಿ ಒದಗಿಸಿದ ವಿವಿಧ ಸೌಲಭ್ಯಗಳ ಉದ್ಘಾಟನಾ ಸಮಾರಂಭ ನಡೆಯಿತು.
ಅನುದಾನದಡಿ 10 ಕಂಪ್ಯೂಟರ್ಗಳು, ಬೆಂಚ್-ಡೆಸ್ಕ್ಗಳು, ನೀರು ಶುದ್ಧೀಕರಣ ಘಟಕ, ಮೂರು ವಿಶಿಷ್ಟ ಕುರ್ಚಿಗಳು, ದಾನಿಗಳಿಂದ ನೀಡಲಾದ ವಾಷ್ಬೇಸಿನ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಸ್ಥೆಗೆ ದೊರೆತಿರುವ ಈ ಸೌಲಭ್ಯಗಳ ಸದುಪಯೋಗವನ್ನು ಪಡೆದು ಉತ್ತಮ ಶಿಕ್ಷಣದೊಂದಿಗೆ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಶಿಸ್ತು, ಕ್ರಿಯಾಶೀಲತೆ ಹಾಗೂ ನಿರಂತರ ಅಧ್ಯಯನದ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದರೆ ಅನೇಕ ಸಂಘ-ಸಂಸ್ಥೆಗಳು ಹಾಗೂ ದಾನಿಗಳು ಸದಾ ಅವರ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಹೇಳಿದರು. ಜೊತೆಗೆ, ವಿದ್ಯಾರ್ಥಿಗಳು ಹೆತ್ತವರು ಹಾಗೂ ಸಮಾಜದ ಹಿರಿಯರನ್ನು ಗೌರವಿಸಿ ತಮ್ಮ ಬದುಕನ್ನು ಉಜ್ವಲಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಂಆರ್ಪಿಎಲ್ ಪ್ರಬಂಧಕ ಕೇಶವ ಪಾಟೀಲ್, ಆಡಳಿತ ಮಂಡಳಿಯ ಉಪಾಧ್ಯಕ್ಷ ಎನ್. ಪದ್ಮಶೇಖರ್ ಜೈನ್, ಜಂಟಿ ಕಾರ್ಯದರ್ಶಿ ಮುರಳೀಧರ ಶೆಟ್ಟಿ, ಸದಸ್ಯರಾದ ಎಂ.ಎಂ. ಶರೀಫ್, ನಾರ್ಬರ್ಟ್ ಮಥಾಯಸ್, ಪ್ರಸಾದ್ ಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರು ಹಾಗೂ ಆಡಳಿತಾಧಿಕಾರಿ ಪ್ರೇಮನಾಥ್ ಶೆಟ್ಟಿ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಾಸು ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


