ಮಿತಿಮೀರಿ
ಕೆಲಸ ಮಾಡಿದರೆ ಮೈ-ಕೈ ನೋಯುತ್ತದೆ,
ಹಾಗೆಯೇ ಮಿತಿಮೀರಿ ಮಲಗಿದರೂ ಮೈ-ಕೈಗಳಲ್ಲಿ ನೋವು
ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಕೆಲಸ ಮತ್ತು ವಿಶ್ರಾಂತಿ
ಎರಡೂ ಮಧ್ಯಮ ಗತಿಯಲ್ಲಿದ್ದರೆ ಮಾತ್ರ ಯಾವುದೇ ಬಗೆಯ ವ್ಯಾಧಿಗಳಿಲ್ಲದೆ, ಬದುಕನ್ನು
ರಸವತ್ತಾಗಿ ಸಾಗಿಸಲು ಸಾಧ್ಯ.
ಇದರಂತೆಯೇ,
ಅತಿಯಾದ ಎತ್ತರದಲ್ಲಿದ್ದವರಿಗೆ ಕೆಳಗಿರುವವರು ಕಾಣಿಸುವುದಿಲ್ಲ; ಹಾಗೆಯೇ ತೀರಾ ಕೆಳಗಿದ್ದವರಿಗೆ ಮೇಲಿರುವವರು
ಸರಿಯಾಗಿ ಗೋಚರಿಸುವುದಿಲ್ಲ. ಪರಸ್ಪರರು ಕಾಣಿಸಬೇಕೆಂದರೆ, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಒಡನಾಡಬೇಕೆಂದರೆ, ನಾವು ಅತಿಯಾಗಿ ಕೆಳಗೂ
ಇರಬಾರದು, ಅಹಂಕಾರದಿಂದ ಮೇಲೆಯೂ ಇರಬಾರದು. ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ 'ಮಧ್ಯಮ' ಸ್ಥಿತಿಯಲ್ಲಿದ್ದರೆ ಮಾತ್ರ ಮನುಷ್ಯತ್ವದ ಈ ಭೂಲೋಕದಲ್ಲಿ ಸುಂದರವಾಗಿ
ಬದುಕಬಹುದು.
ಪುರಾಣಗಳ
ಹಿನ್ನೆಲೆ ಮತ್ತು ಮಧ್ಯಮ ಮಾರ್ಗ
ನಮ್ಮ
ಐತಿಹ್ಯ ಪುರಾಣಗಳಲ್ಲಿ ಒಂದು ಉಲ್ಲೇಖವಿದೆ: ಭೂಲೋಕದ
ಮೇಲ್ಭಾಗದಲ್ಲಿ ಏಳು ಊರ್ಧ್ವ ಲೋಕಗಳು
(ಸ್ವರ್ಗಾದಿಗಳು) ಹಾಗೂ ಕೆಳಭಾಗದಲ್ಲಿ ಏಳು
ಅಧೋಲೋಕಗಳು (ಪಾತಳಾದಿಗಳು) ಇವೆ. ಮಾನವ ಜೀವಿಗಳು
ತಮ್ಮ ಕರ್ಮ ಮತ್ತು ಗುಣಗಳಿಗನುಸಾರವಾಗಿ—ಒಳ್ಳೆಯದಿದ್ದರೆ
ಮೇಲಕ್ಕೆ, ಕೆಡಕಿದ್ದರೆ ಕೆಳಕ್ಕೆ ಹೋಗಿ ಸುಖ-ದುಃಖಗಳನ್ನು
ಅನುಭವಿಸುತ್ತಾರೆ ಎಂದು ವಿಂಗಡಿಸಲಾಗಿದೆ.
ನಮ್ಮ
ನಡುವಳಿಕೆಗಳು ಅತಿಯಾಗಬಾರದು, ನಾವೊಂದು ಸಮತೋಲನ ಕಾಯ್ದುಕೊಳ್ಳಬೇಕು ಎಂಬ ಕಾರಣಕ್ಕಾಗಿಯೇ ಭಗವಂತ
ಈ 'ಭೂಲೋಕ'ವನ್ನು ಮಧ್ಯದಲ್ಲಿ ಕಲ್ಪಿಸಿದ್ದಾನೆ ಎನ್ನಬಹುದು.
ಸಾರ್ಥಕತೆಯ
ಪಯಣ
ಹೀಗಾಗಿ,
ಯಾವುದೂ ಅತಿಯಾಗದಂತೆ, ಊರ್ಧ್ವ ಹಾಗೂ ಅಧೋ ಲೋಕಗಳ
ಮಧ್ಯದ ಪಾತಳಿಯಲ್ಲೇ ತೇಲಾಡುತ್ತಿರುವ ಈ ಭೂಲೋಕದಲ್ಲಿ ನಾವು
ಮಧ್ಯಮ ಮಾರ್ಗದಲ್ಲೇ ಸಾಗೋಣ. ನಮ್ಮ ಅಂತರ್ಯದಲ್ಲಿ ಅಡಗಿರುವ
ಪರಸ್ಪರ ಪ್ರೀತಿ, ಕರುಣೆ ಮತ್ತು ಅಂತಃಕರಣಗಳಿಂದ—ಸಣ್ಣಪುಟ್ಟ
ಭಿನ್ನಾಭಿಪ್ರಾಯಗಳ ನಡುವೆಯೂ ಪರಸ್ಪರ ತಿಕ್ಕಾಡಿಕೊಂಡು, ಹೊಕ್ಕಾಡಿಕೊಂಡು, ತೆಕ್ಕಾಡಿಕೊಂಡು ಪ್ರೀತಿಯಿಂದ ಬದುಕು ಸಾಗಿಸೋಣ.
"ಅತಿ
ಸರ್ವತ್ರ ವರ್ಜಯೇತ್" ಎಂಬ ಪರಮ ಸತ್ಯವನ್ನು
ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ, ನಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳೋಣವೇ...?
ಎಲ್ಲರಿಗೂ,
ಎಲ್ಲ ಕಾಲಕ್ಕೂ, ಎಲ್ಲವೂ ಒಳ್ಳೆಯದಾಗಲಿ ಎಂದು ಅನುಗಾಲವೂ ಮನದುಂಬಿ
ಹಾರೈಸುವ...
- ಕುರಾಜನ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


