ಮೊರೆಯ ಕೇಳಿ ವರುಣ ದೇವ
ಸುರಿಸಿ ಬಿಟ್ಟ ಮಳೆಯನಿನಿತು
ಬಿರಿದ ಧರಣಿ ನೀರನುಂಡು ಖುಷಿಯ ಪಡುತಿದೆ |
ಕರಗಿ ಮೋಡ ಸುರಿಸಿತಿಳೆಗೆ
ಹರಿವ ಸಲಿಲ ಸುತ್ತಲೆಲ್ಲ
ಸೊರಗಿ ಹೋದ ಹೂವುಬಳ್ಳಿ ಮತ್ತೆ ನಗುತಿದೆ ||1||
ಮಳೆಯು ಸುರಿದು ಕೊಳೆಯ ಕಳೆದು
ಜಲದ ಧಾರೆಯಲ್ಲಿ ಮಿಂದು
ಚೆಲುವಿನಿಂದ ಬುವಿಯು ಬಾನಿನೆಡೆಗೆ ಬಾಗಿದೆ |
ನಲಿವ ಮನದ ಗರಿಯು ಬಿಚ್ಚಿ
ಫಲಿಸಿ ತಪವು ಫಲವು ದೊರೆತು
ಮಳೆಯ ಹನಿಯನೊಂದು ಬಿಡದೆ ನುಂಗಿಕೊಂಡಿದೆ ||2||
ಹಸಿರಿಗಿನ್ನು ಜೀವ ಕಳೆಯು
ಹೊಸತು ಜನ್ಮವೆಂದುಕೊಂಡು
ಕುಸಿದುಬಿದ್ದ ಸಸಿಗಳೆಲ್ಲ ನೆಟ್ಟಗಾಗಿವೆ |
ಕೆಸರಿನಲ್ಲಿ ಕಮಲವರಳಿ
ಹಸನು ತಾನುಯೆಂದುಕೊಂಡು
ವಸುಧೆಯಿಂದು ತಂಪು ಕಂಪು ಹರುಷಗೊಂಡಿದೆ ||3||
(ಭೋಗ ಷಟ್ಪದಿ)
-ಪ್ರಮೀಳಾ ಚುಳ್ಳಿಕ್ಕಾನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


