ಸುರತ್ಕಲ್: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಕೈಗಾರಿಕಾ ಸಂಸ್ಥೆಗಳು ಶಾಲೆಗಳ ಮೂಲಭೂತ ಸೌಲಭ್ಯಗಳ ವರ್ಧನೆಗೆ ಅನುದಾನ ನೀಡಿಕೆಯ ಮೂಲಕ ಸಹಕರಿಸುತ್ತಿದ್ದು ನಮ್ಮ ನಾಡಿನ ಹೆಮ್ಮೆಯ ಕೈಗಾರಿಕಾ ಉದ್ಯಮ ಎಂ.ಆರ್.ಪಿ.ಎಲ್. ಸರಕಾರಿ ಶಾಲೆಗಳ ಅಭಿವೃದ್ದಿಗೆ ಅನುದಾನ ನೀಡುವ ಮೂಲಕ ಬೆಂಬಲಿಸುತ್ತಿರುವುದು ಶ್ಲಾಘನೀಯ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಚಿತ್ರಾಪುರ ನುಡಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿಯಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಸಿ.ಎಸ್.ಆರ್. ಅನುದಾನದಲ್ಲಿ ನಿರ್ಮಾಣವಾಗಲಿರುವ ಎರಡು ನೂತನ ಕೊಠಡಿಗಳ ಶಂಕು ಸ್ಥಾಪನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ -ಸಂಘರ್ಷ- ಹೋರಾಟಗಳ ಧ್ಯೇಯದ ಸರ್ವ ಸಮಾನತೆಯ ನಾಡು ಕಟ್ಟುವ ಆದರ್ಶವನ್ನು ಹೊಂದಿದವರಾಗಿದ್ದು ಅವರ ಚಿಂತನೆಗಳ ಪರಿಪಾಲನೆ ಆಗಬೇಕಾಗಿದೆ ಎಂದರು.
ಕುಳೂರು ಮೊಗವೀರ ಮಹಾ ಸಭಾದ ಅಧ್ಯಕ್ಷ ಮತ್ತು ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಭರತ್ ಕುಮಾರ್ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪಣಂಬೂರು ಮೊಗವೀರ ಮಹಾ ಸಭಾದ ಅಧ್ಯಕ್ಷ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಮಾಧವ ಸುವರ್ಣ ಮಾತನಾಡಿ ವಿವಿಧ ಕೈಗಾರಿಕೆ ಸಂಸ್ಥೆಗಳ ಕೊಡುಗೆಗಳ ಮೂಲಕ ಶಾಲೆಗೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶಶಿಕಲಾ, ಲಯನ್ಸ್ ಕ್ಲಬ್ ನ ಪುನೀತ್, ಶಿಕ್ಷಕಿಯರಾದ ನೀತಾ ತಂತ್ರಿ, ಸಿಂತಿಯ, ರೂಪ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಸುಕೇಶಿನಿ ವಂದಿಸಿದರು.

