ಕುಮಟಾ: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಜ್ಯೇಷ್ಠಪುರ ಬಾಡದ ಪ್ರತಿಭೆ ದಿಶಾಂತ್ ದಯಾನಂದ ನಾಯ್ಕ್ ಅವರು ರಾಜ್ಯಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಒಟ್ಟು 625 ಅಂಕಗಳಿಗೆ 624 ಅಂಕ (99.8%) ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಕುಮಟಾದ ಡಾ. ಎ. ವಿ. ಬಾಳಿಗಾ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಯಾಗಿರುವ ದಿಶಾಂತ್, ಮೊದಲಿನಿಂದಲೂ ಓದಿನಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದರು. ಕೇವಲ ಒಂದು ಅಂಕದ ಅಂತರದಲ್ಲಿ ಪ್ರಥಮ ಸ್ಥಾನದಿಂದ ವಂಚಿತರಾಗಿದ್ದರೂ, ಅವರ ಈ ಅದ್ಭುತ ಸಾಧನೆ ಇಡೀ ರಾಜ್ಯದ ಗಮನ ಸೆಳೆದಿದೆ. ಅವರ ನಿರಂತರ ಅಧ್ಯಯನ ಮತ್ತು ಶಿಸ್ತುಬದ್ಧ ಪರಿಶ್ರಮ ಇಂದು ಈ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ.
ತಂದೆ ದಯಾನಂದ ಬಿ. ನಾಯ್ಕ್ ಹಾಗೂ ತಾಯಿ ಪ್ರಿಯಾ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಬೆಳೆದ ದಿಶಾಂತ್, ತಮ್ಮ ಯಶಸ್ಸಿಗೆ ಪೋಷಕರು ಮತ್ತು ಶಿಕ್ಷಕರ ಬೆಂಬಲವೇ ಕಾರಣ ಎಂದು ಸ್ಮರಿಸಿದ್ದಾರೆ. ಮಗನ ಸಾಧನೆಯಿಂದ ಪೋಷಕರು ಹಾಗೂ ಜ್ಯೇಷ್ಠಪುರ ಬಾಡದ ನಾಗರಿಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.


