ಉಜಿರೆ ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿ: 'ಎಸ್.ಡಿ.ಎಂ ಶ್ರೇಷ್ಠತಾ ಕಪ್- 2026

Upayuktha
0

  • ಕೇಂದ್ರ ಕಛೇರಿ ಸಿಬ್ಬಂದಿಗಳಿಗೆ ಸೌಹಾರ್ದ ಬ್ಯಾಡ್ಮಿಂಟನ್ ಟೂರ್ನಿ 
  • ಹಲವು ಮಾದರಿಯ ಪಂದ್ಯ, ವಿಜೇತರಿಗೆ ನಗದು ಬಹುಮಾನ 
  • ಕ್ರೀಡೆಯಿಂದ ಏಕಾಗ್ರತೆ ಮತ್ತು ಸೌಹಾರ್ದತೆ ವೃದ್ಧಿ: ಡಾ. ಸತೀಶ್ಚಂದ್ರ ಎಸ್




ಉಜಿರೆ, ಫೆ.16: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಛೇರಿಯ ಸಿಬ್ಬಂದಿಗಳಿಗೆ 'ಎಸ್.ಡಿ.ಎಂ ಶ್ರೇಷ್ಠತಾ ಕಪ್ - 2026' ಒಂದು ದಿನದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಭರ್ಜರಿಯಾಗಿ ಆಯೋಜಿಸಲಾಯಿತು. 


ಪಂದ್ಯಾಟದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮಾತನಾಡಿ, ಕ್ರೀಡೆಗೆ ಎಲ್ಲರನ್ನೂ ಒಗ್ಗೂಡಿಸಿ, ಸ್ನೇಹದಿಂದ ಬೆರೆಸುವ ಶಕ್ತಿಯಿದೆ. ಪ್ರತಿನಿತ್ಯ ಶೈಕ್ಷಣಿಕ ವೃತ್ತಿಯಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಗಳಿಗೆ ಇಂತಹ ಕ್ರೀಡಾ ಕೂಟಗಳು ವಿಶೇಷ ಅನುಭವ ಮತ್ತು ಖುಷಿಯನ್ನು ನೀಡುತ್ತದೆ. ಇದರೊಂದಿಗೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಶೈಕ್ಷಣಿಕ ಕೇಂದ್ರ ಕಛೇರಿಗಳಲ್ಲಿ ಇಂತಹ ಕ್ರೀಡಾ ಕೂಟ ಆಯೋಜನೆಯಿಂದ ಸಿಬ್ಬಂದಿಗಳಲ್ಲಿ ಸ್ನೇಹ ಭಾವ ಗಟ್ಟಿಯಾಗುವ ಜೊತೆಗೆ ನಾಯಕತ್ವ ಗುಣ, ಏಕಾಗ್ರತೆ ಮತ್ತು ಸೌಹಾರ್ದತೆ ವೃದ್ಧಿಸುತ್ತದೆ. ಸಿಬ್ಬಂದಿಗಳ ಪ್ರತಿಭಾ ಅನಾವರಣಕ್ಕೂ ಇದೊಂದು ವೇದಿಕೆಯಾಗುತ್ತದೆ ಎಂದರು. ಪಂದ್ಯಾಟದಲ್ಲಿ ಪುರುಷರು ಮಹಿಳೆಯರು ಸೇರಿದಂತೆ ಕಿರಿಯರಿಂದ ಹಿರಿಯರ ವರೆಗೂ ಎಲ್ಲಾ ಸಿಬ್ಬಂದಿಗಳು ಹುರುಪಿನಿಂದ ಭಾಗವಹಿಸಿದ್ದನ್ನು ಕಂಡು ಬಹುಮಾನ ಪಡೆಯುವುದಕ್ಕಿಂತ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದು ಬಹು ಮುಖ್ಯ ಎಂದು ಸರ್ವರನ್ನು ಅಭಿನಂದಿಸಿದರು.


ಪಂದ್ಯಾವಳಿಯಲ್ಲಿ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಶಶಿಶೇಖರ್ ಕಾಕತ್ಕಾರ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕೇಂದ್ರ ಕಛೇರಿಯ ಸಿಬ್ಬಂದಿಗಳಿಗೆ ಈ ರೀತಿಯ ಪಂದ್ಯಟವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಇಂದು ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಆರಂಭವಾದ ಸೌಹಾರ್ದ ಕ್ರೀಡಾಕೂಟವು ಮುಂದೆ ನಾನಾ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರಣೆಯಾಗಲಿ, ಸಿಬ್ಬಂದಿಗಳಲ್ಲಿ ಸೌಹಾರ್ದಯುತವಾದ ಹೊಸ ಚೈತನ್ಯ ಮೂಡಿ ಕಾರ್ಯ ಕ್ಷಮತೆ ಮತ್ತಷ್ಟು ಹೆಚ್ಚಲಿ ಎಂದು ಶುಭ ಹಾರೈಸಿದರು.


ಪಂದ್ಯಾಟದಲ್ಲಿ ಕೇಂದ್ರ ಕಛೇರಿಯ ಪುರುಷಾ ಮತ್ತು ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡ ಎಸ್.ಡಿ.ಎಂ ಕಿಲಾಡಿ, ಎಸ್.ಡಿ.ಎಂ ರಾಫ್ಟರ್, ಎಸ್.ಡಿ.ಎಂ ಟೈಟಾನ್ಸ್, ಎಸ್.ಡಿ.ಎಂ ನೆಟ್ ಕಿಂಗ್ಸ್, ಎಸ್.ಡಿ.ಎಂ ಜೋಶ್, ಎಸ್.ಡಿ.ಎಂ ಬಾಝಿಗರ್, ಎಸ್.ಡಿ.ಎಂ ಶಟ್ಲರ್ಸ್ ಮತ್ತು ಎಸ್.ಡಿ.ಎಂ ವಿಜೇತ ಎಂಬ 8 ತಂಡಗಳನ್ನು ರಚಿಸಿ, ಪುರುಷ ಮತ್ತು ಮಹಿಳೆಯರ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರಿತ 5 ಮಾದರಿಯಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಪಂದ್ಯದಲ್ಲಿ  ಎಸ್.ಡಿ.ಎಂ ಟೈಟಾನ್ಸ್ ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಗಳಾಗಿ, ಎಸ್.ಡಿ.ಎಂ ವಿಜೇತ ತಂಡವು ದ್ವಿತೀಯ ಸ್ಥಾನ ಪಡೆಯಿತು. 


ವಿಜೇತ ತಂಡದ ಸದಸ್ಯರಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಎಸ್.ಡಿ.ಎಂ ಶ್ರೇಷ್ಠತಾ ಕಪ್ ಹಾಗು ನಗದು ಬಹುಮಾನ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಶಶಿಶೇಖರ್ ಎನ್ ಕಾಕತ್ಕಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್, ಆಡಿಟ್ ಆಫಿಸರ್ ಗಿರೀಶ್ ತಂತ್ರಿ, ವಸತಿ ನಿಲಯಗಳ ಮೆಸ್ ಅಡ್ಮಿನಿಸ್ಟ್ರೇಟರ್ ಸಿ ತಿರುಮಲೇಶ್ ಭಟ್ ಹಾಗು ಎಸ್.ಡಿ.ಎಂ ಮಂಜೂಶ ವಸ್ತು ಸಂಗ್ರಹಾಲಯದ ಡೆಪ್ಯುಟಿ ಡೈರೆಕ್ಟರ್ ರಿತೇಶ್ ಶರ್ಮಾ‌, ಉಜಿರೆಯ ಎಸ್.ಡಿ.ಎಂ ಮಂಜುಶ್ರೀ ಪ್ರಿಂಟರ್ಸ್ ನಿವೃತ್ತ ವ್ಯವಸ್ಥಾಪಕ ಶೇಖರ್ ಉಪಸ್ಥಿತರಿದ್ದರು. 


ಪದ್ಯಾವಳಿಯನ್ನು ಕೇಂದ್ರ ಕಛೇರಿಯ ಮಾನವ ಸಂಪನ್ಮೂಲ ವಿಭಾಗದ ಪುನೀತ್ ನಿರ್ವಹಿಸಿದರು. ಕೇಂದ್ರ ಕಛೇರಿಯ ಪ್ರಬಂಧಕರಾದ ಕೃಷ್ಣಪ್ಪ, ಲೆಕ್ಕ ಪತ್ರ ವಿಭಾಗದ ಗುರು ಮತ್ತು ಸುದೀಶ್ ಪಂದ್ಯಾವಳಿಯನ್ನು ಸಂಯೋಜಿಸಿದರು. ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಾರ್ಕೇಟಿಂಗ್ ಕಾರ್ಯನಿರ್ವಾಹಕ ಸುಮಂತ್, ಉಜಿರೆಯ ನಿತಿನ್ ತೀರ್ಪುಗಾರರಾಗಿ ಸಹಕರಿಸಿದರು.



'ಇದೊಂದು ವಿನೂತನ ಯೋಚನೆಯೊಂದಿಗೆ ಸ್ವತಃ ಸಿಬ್ಬಂದಿಗಳೇ ಆಯೋಜನೆ ಮಾಡಿ ಪಂದ್ಯಾಟದಲ್ಲಿ ಕೇಂದ್ರ ಕಛೇರಿಯ ಸರ್ವರೂ ತಂಡೋಕ್ತಿಯಿಂದ ಸಕ್ರೀಯವಾಗಿ ಪಾಲ್ಗೊಂಡಿರುವುದು ಬಹು ಸಂತಸದ ಸಂಗತಿ. ಇಂತಹ ಸೌಂದರ್ಯ ಸಮ್ಮಿಲನ, ಕ್ರೀಡಾ ಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದೆಯೂ ನಡೆಯಲಿ. ಈ ಮೂಲಕ ಸಿಬ್ಬಂದಿಗಳಲ್ಲಿನ ಸಹಭಾಗಿತ್ವ ಮತ್ತು ಸೌಹಾರ್ದತೆ ಮತ್ತಷ್ಟು ಗಟ್ಟಿಯಾಗಲಿ ಎಂದು ಶುಭ ಹಾರೈಸುತ್ತೇನೆ.'

- ಡಾ. ಸತೀಶ್ಚಂದ್ರ ಎಸ್ 

ಕಾರ್ಯದರ್ಶಿಗಳು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top