ಪಾಕಿಸ್ತಾನಕ್ಕೆ ಚೀನಾ, ಅಮೆರಿಕಾ ಬೆಂಬಲದಿಂದ ಭಯೋತ್ಪಾದನಾ ಕೃತ್ಯಗಳಿಗೆ ಅಂತ್ಯವಿಲ್ಲ: ಡಾ. ಶ್ರೀರಾಮ್‌ ಸುಂದರ್ ಚೌಲಿಯಾ

Upayuktha
0

ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಿರಬೇಕು ಎಂದು ಅಭಿಮತ ವ್ಯಕ್ತಪಡಿಸಿದ ಚಿಂತಕ



ಮಂಗಳೂರು ಲಿಟ್ ಫೆಸ್ಟ್ ವೇದಿಕೆ, ಮಂಗಳೂರು: ‘ಭಯೋತ್ಪಾದನೆ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತ ಅದೆಷ್ಟೇ ಪ್ರಯತ್ನಪಟ್ಟರೂ, ಅದು ಮುಂದುವರೆಯುತ್ತಲೇ ಇರುತ್ತದೆ. ಏಕೆಂದರೆ, ಪಾಕಿಸ್ತಾನಕ್ಕೆ ಅಮೇರಿಕಾ ಮತ್ತು ಚೀನಾದ ಬೆಂಬಲವಿದೆ. ನಾವು ಇನ್ನಷ್ಟು ರಕ್ತಪಾತಕ್ಕೆ ತಯಾರಾಗಬೇಕು’ ಎಂದು ಪ್ರೊಫೆಸರ್‌ ಡಾ. ಶ್ರೀರಾಮ್‌ ಸುಂದರ್ ಚೌಲಿಯಾ ಅಭಿಪ್ರಾಯಪಟ್ಟಿದ್ದಾರೆ.


ಮಂಗಳೂರು ಲಿಟ್ ಫೆಸ್ಟ್ ನ ಎಂಟನೇ ಆವೃತ್ತಿಯಲ್ಲಿ ದೇಶದ ಜಾಗತಿಕ ಸಂಬಂಧಗಳ ಕುರಿತಾಗಿ ಮಾತನಾಡಿದ ಅವರು, ‘ಆಪರೇಷನ್‌ ಸಿಂಧೂರವನ್ನು ಇನ್ನಷ್ಟು ಮುಂದುವರೆಸಬೇಕಿತ್ತು, ಅರ್ಧಕ್ಕೆ ನಿಲ್ಲಿಸಬಾರದಾಗಿತ್ತು ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು. ನಮ್ಮ ಉದ್ದೇಶ ಯುದ್ಧ ಮಾಡುವುದಾಗಿರಲಿಲ್ಲ. ಭಯೋತ್ಪಾದನೆಗೆ ಉತ್ತರ ಕೊಡಬೇಕಿತ್ತು. ನಮ್ಮನ್ನು ಪ್ರಚೋದಿಸಿದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶ ರವಾನಿಸಬೇಕಿತ್ತು. ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಆದರೂ ಭಯೋತ್ಪಾದಕ ಚಟುವಟಿಕೆಗಳು ಮತ್ತೆ ಮರುಕಳಿಸುತ್ತವೆ. ನಾವೆಷ್ಟೇ ತಡೆಯುವುದಕ್ಕೆ ಪ್ರಯತ್ನ ಮಾಡಿದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ರಕ್ತಪಾತಗಳು, ದುರಂತಗಳು ನಡೆಯುತ್ತವೆ. ಏಕೆಂದರೆ, ಪಾಕಿಸ್ತಾನಕ್ಕೆ ಅಮೇರಿಕಾ ಮತ್ತು ಚೀನಾದ ಬೆಂಬಲವಿದೆ. ಅಂತಹ ರಕ್ತಪಾತಗಳಿಗೆ ನಾವು ಮುಂದಿನ ದಿನಗಳಲ್ಲಿ ಇನ್ನಷ್ಟು ತಯಾರಾಗಬೇಕಿದೆ’ ಎಂದರು.


‘ಬಲಿಷ್ಠ ದೇಶಗಳು ಒಂದು ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ ಎಂದ ಅವರು, ಕೆಲವು ವರ್ಷಗಳಿಂದಿತ್ತೀಚೆಗೆ ವ್ಯವಸ್ಥೆ ಕುಸಿಯುತ್ತಿರುವುದನ್ನು ನೋಡಬಹುದು. ರಷ್ಯಾ-ಉಕ್ರೇನ್‌ ಯುದ್ಧ ಮೂರು ವರ್ಷಗಳಿಂದ ನಡೆಯುತ್ತಿದೆ. ಅದರಿಂದ ಸಾಕಷ್ಟು ಪ್ರಾಣಹಾನಿಯಾಗಿದೆ. ಆದರೂ ಯುದ್ಧ ನಿಂತಿಲ್ಲ. ನಂತರ ಇಸ್ರೇಲ್‌ ಮತ್ತು ಇರಾನ್‌ ನಡುವೆ ಕದನವಾಯಿತು. ಈಗ ಅಮೇರಿಕಾ, ವೆನೆಜುವೆಲಾ ಮೇಲೆ ಬೇರೆ ರೀತಿಯಲ್ಲಿ ದಾಳಿ ಮಾಡಿದೆ. ಬಲಿಷ್ಠರು ಏನು ಮಾಡಿದರೂ ಸರಿ ಎನ್ನುವಂತಾಗಿದೆ. ಕಾಡಿನ ನೀತಿ ಜಾರಿಯಾಗುತ್ತಿದೆ. ದುರ್ಬಲರಿಗೆ ಯಾವುದೇ ಸುರಕ್ಷತೆ ಇಲ್ಲ ಎನ್ನುವಂತಾಗಿದೆ. ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿನ್ನುತ್ತಿವೆ. ಸಾಮ್ರಾಜ್ಯಶಾಹಿ ವರ್ಷನೆ ಹೆಚ್ಚಾಗುತ್ತಿದೆ. ನಾವು ಇದೆಲ್ಲದರಿಂದ ದೂರ ಉಳಿದು ಅಭಿವೃದ್ಧಿಯತ್ತ ಗಮನಹರಿಸಬೇಕು. ಯುದ್ಧವನ್ನು ತಪ್ಪಿಸಿ, ನಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.


ಭಾರತ ಹಲವು ಒತ್ತಡಗಳ ನಡುವೆಯೂ ಅಸ್ತಿತ್ವ ಉಳಿಸಿಕೊಂಡಿದೆ


ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಟಿ.ಎಸ್‌. ತಿರುಮೂರ್ತಿ ಮಾತನಾಡಿ, ‘ನಾವು ಇಂದು ಹಲವು ಸಮಸ್ಯೆಗಳ ನಡುವೆಯೂ ನಾಲ್ಕನೇ ದೊಡ್ಡ ಆರ್ಥಿಕತೆಯಾಗಿ ಬೆಳೆದಿದ್ದೇವೆ. ಅಮೇರಿಕಾದ ಹಲವು ಒತ್ತಡಗಳ ನಡುವೆಯೂ ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದೇವೆ. ಬಹಳಷ್ಟು ದೇಶಗಳು ಒತ್ತಡ ತಾಳಲಾರದೆ ಮಣಿದಿವೆ. ತಮಗೆ ಸಿಗುತ್ತಿರುವ ಹಲವು ಸವಲತ್ತುಗಳು ತಪ್ಪಬಹುದು ಎಂಬ ಭಯದಿಂದ ತಲೆ ಬಾಗಿವೆ. ಆದರೆ, ಭಾರತ ಮಾತ್ರ ಯಾವುದೇ ಒತ್ತಡಕ್ಕೆ ಬಗ್ಗಿಲ್ಲ. ಅಮೇರಿಕಾ ಬೇರೆ ರಾಷ್ಟ್ರಗಳಿಗೆ ಬೆದರಿಕೆ ಹಾಕಿ ತಮ್ಮ ದೃಷ್ಟಿಕೋನವನ್ನು ಒಪ್ಪಿಕೊಳ್ಳುವಂತೆ ಮಾಡುತ್ತಿದೆ. ಆದರೆ, ಭಾರತ ಮಾತ್ರ ಚಾತುರ್ಯದಿಂದ ಅದನ್ನೆಲ್ಲಾ ತಪ್ಪಿಸಿಕೊಂಡು, ಬೆಳವಣಿಗೆಯತ್ತ ಗಮನಹರಿಸುತ್ತಿದೆ’ ಎಂದರು.


ವಿಜೇತ್ ಕನಹಳ್ಳಿ ಸಂವಾದ ನಿರ್ವಹಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top