ಉಡುಪಿ: ಕೃಷ್ಣ ಮತ್ತು ಚಾಣಕ್ಯ ಅಧಿಕಾರ ಬಯಸದೆ ಸಮಷ್ಟು ಚಿಂತನೆಗೆ ಒತ್ತುಕೊಟ್ಟವರು. ಇಬ್ಬರೂ ಮ್ಯಾನೇಜ್ಮೆಂಟ್ ಗುರುಗಳಾಗಿದ್ದರಿಂದ ಇಂದಿಗೂ ಪ್ರಸಕ್ತರು ಎಂದು ಚಿಂತಕ, ಪತ್ರಕರ್ತ ರವೀಂದ್ರ ಜೋಶಿ ಹೇಳಿದರು.
ಅವರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಅಂಗವಾಗಿ ಮಂಗಳವಾರ ನಡೆದ ಜ್ಞಾನಮಂಡಲೋತ್ಸವ ದಲ್ಲಿ ಚಾಣಕ್ಯ- ಕೃಷ್ಣ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು.
ಕೃಷ್ಣ ಜರಾಸಂಧನನ್ನು ಕೊಲ್ಲಲು ಸಮರ್ಥ ಇದ್ದರೂ ಕೂಡ ಭೀಮನಿಂದಲೇ ಜರಾಸಂಧನನ್ನು ಕೊಲ್ಲಿಸಿದ. ಚಾಣಕ್ಯನು ಹಾಗೆ ರಾಜನಾಗುವ ಎಲ್ಲ ಸಾಮರ್ಥ್ಯ ಇದ್ದರೂ ಕೂಡ ಚಂದ್ರಗುಪ್ತನನ್ನೇ ರಾಜನನ್ನಾಗಿ ಮಾಡಿದ. ಅಂದರೆ ಯಾರಿಂದ ಕಾರ್ಯ ಮಾಡಿಸಬೇಕು ಅವರಿಂದಲೇ ಕೆಲಸ ಪೂರ್ತಿಗೊಳಿಸಿದ. ಕೃಷ್ಣ ಸ್ವಯಂ ಭಗವಂತನಾದರೂ ಕೂಡ ಜಗತ್ತಿಗೆ ಜ್ಞಾನದ ಗೀತೋಪದೇಶ ನೀಡಿ ಅಂತಿಮವಾಗಿ ನಿನಗೆ ಸರಿ ಕಂಡರೆ ಮಾಡು ಎಂದು ಹೇಳುವ ಮೂಲಕ ಮಾರ್ಗದರ್ಶನ ಮಾತ್ರ ನೀಡಿದ ಎಂದು ವಿಶ್ಲೇಷಿಸಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ವ್ಯಕ್ತಿಯ ಆಕಾರ, ಆಹಾರ್ಯ ನೋಡಿ ವ್ಯಕ್ತಿತ್ವ ತೀರ್ಮಾನಿಸುವುದಲ್ಲ, ಆತನ ಒಳಗಿರುವ ಉದಾತ್ತ ಚಿಂತನೆಗಳೇ ನಿಜವಾದ ವ್ಯಕ್ತಿತ್ವ, ವ್ಯಕ್ತಿ ಗೌರವ ಎಂದರು.
ಮೊಬೈಲ್ ಬಂದಿದೆ, ಈಗ ಎಐ ಕೂಡ ಬಂದಿದೆ, ಆ ಸೌಲಭ್ಯಗಳು ಅಂಗೈಯಲ್ಲಿ ಸಿಗುತ್ತಿವೆ. ಆದರೆ ಸ್ವಂತಿಕೆ ಚಿಂತನೆ ಗುಣಮಟ್ಟ ಕುಸಿಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ನಮ್ಮತನ ಉಳಿಸುವ ಚಿಂತನೆ ವಿಚಾರವನ್ನು ಜನರಿಗೆ ಮುಟ್ಟಿಸಿ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನೇರ ನಿಷ್ಠುರವಾಗಿ ಸತ್ಯ ವಿಚಾರಗಳನ್ನ ಸಾಮಾಜಿಕ ಜಾಲತಾಣ ಮೂಲಕ ಸಮಾಜದ ಮುಂದಿಡುತ್ತಿರುವ ಜೋಶಿ ಅಭಿನಂದನಾರ್ಹರು ಎಂದರು.
ಪರ್ಯಾಯ ಮಠಾಧೀಶರು ರವೀಂದ್ರ ಜೋಶಿ ಅವರಿಗೆ ಕೃಷ್ಣಗೀತಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿದರು.
ಕಿರಿಯ ಪಟ್ಟ ಶ್ರೀಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇದ್ದರು. ಸುಗುಣ ಮಾಲಾ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ