ಮಂಗಳೂರು: ತುಳುವ ಸಂಸ್ಕೃತಿ, ಇತಿಹಾಸ ಮತ್ತು ಜನಪದ ಸಾಂಸ್ಕೃತಿಕ ನಾಯಕರ ಅಧ್ಯಯನದ ಕುರಿತು ಅಧ್ಯಯನಗಳು ಇನ್ನಷ್ಟು ನಡೆಯಬೇಕು. ಆಗೋಳಿ ಮಂಜಣ್ಣ ತುಳುನಾಡಿನ ವೀರ ನಾಯಕನಾಗಿದ್ದು ತುಳುನಾಡ ಇತಿಹಾಸದ ಹಿನ್ನೆಲೆಯಲ್ಲಿ ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದು ಎಸ್. ಆರ್. ಹೆಗ್ಡೆ ಚಾರಿಟೇಬಲ್ನ ಅಧ್ಯಕ್ಷೆ ಮತ್ತು ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ನುಡಿದರು.
ಅವರ ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ಆಶ್ರಯದಲ್ಲಿ ಚೇಳಾರು ಗುತ್ತು ಮನೆಯಲ್ಲಿ ಆಯೋಜಿಸಿದ್ದ ಸೋಣದ ಸಂಕ್ರಾಂತಿ ಮತ್ತು ಆಗೋಳಿ ಮಂಜಣ್ಣ ನೆಂಪು ಹಾಗೂ ಚೇಳಾರು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತನ್ನ ಚೇಳಾರು ಗುತ್ತು ಮಂಜನ್ನಾಯ್ಗೆರ್- ಸಾಂಸ್ಕೃತಿಕ-ಐತಿಹಾಸಿಕ ಶೋಧ ಕೃತಿಯಲ್ಲಿ ಹೊಸ ವಿಚಾರಗಳು ನಿರೂಪಿತವಾಗಿದೆ.
ತುಳುನಾಡ ಆಚರಣೆಯಲ್ಲಿ ಸೋಣ ಸಂಕ್ರಾಂತಿಗೆ ವಿಶೇಷ ಮಹತ್ವವಿದ್ದು ವಾರ್ಷಿಕ ಆವರ್ತನದ ಕ್ರಮಗಳು ಕೃಷಿ ಬದುಕಿನೊಂದಿಗೆ ನಂಟನ್ನು ಹೊಂದಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ, ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಇತಿಹಾಸವಿದ್ದು ಅವೆಲ್ಲವುಗಳ ಸೇರಿಗೆಯೇ ರಾಷ್ಟ್ರ ಇತಿಹಾಸವಾಗಿದೆ. ಆಗೋಳಿ ಮಂಜಣ್ಣ ನಮ್ಮ ನಾಡಿನ ಆತ್ಮಸ್ಥೈರ್ಯ, ಸಾಹಸ, ಶೌರ್ಯಗಳ ಪ್ರತೀಕವಾಗಿದ್ದು ಮಂಜಣ್ಣ ಸಂಕಥನದ ಮರು ನಿರೂಪಣೆ ಆಗಬೇಕಾಗಿದೆ ಎಂದರು.
ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ ಮಾತನಾಡಿ, ಮಂಜಣ್ಣ ಕತೆ ಕಲಾ ಮಾಧ್ಯಮಗಳಲ್ಲೂ ಬಂದಿದ್ದು ಜನಪ್ರಿಯತೆ ಪಡೆದಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಪುಷ್ಪರಾಜ ಶೆಟ್ಟಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಬೆಂಬಲಿಸಿ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ ಎಂದರು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ತೆರಸಾ ವೇಗಸ್ ಶುಭ ಹಾರೈಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜ್ಯೋತಿ ಚೇಳಾರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಚೇಳಾರು ಗುತ್ತಿನ ಕಸ್ತೂರಿ ಶೆಟ್ಟಿ ವಂದಿಸಿದರು.
ಅತ್ಯುನ್ನತ ಅಂಕ ಗಳಿಸಿದ ಪದವಿ ಪೂರ್ವ ಕಾಲೇಜಿನ ನಾಲ್ಕು ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಅಭಿನಂದಿಸಲಾಯಿತು. ವಿದ್ಯಾರ್ಥಿನಿ ಸಂಜನಾ ಎಸ್. ಆರ್. ಹೆಗ್ಡೆ ಅವರ ಬದುಕು ಸಾಧನೆಗಳ ಕುರಿತು ಮಾತನಾಡಿದರು.
ಚೇಳಾರು ಗುತ್ತಿನ ಚಂದ್ರಿಕಾ, ಉದಯ, ವತ್ಸಲಾ, ರಾಮಕೃಷ್ಣ ಪೂಂಜಾ, ಗಣೇಶ್ ಶೆಟ್ಟಿ, ದಿನೇಶ್ ಭಂಡಾರಿ, ಹಿರಿಯ ಕಲಾವಿದೆ ಗೀತಾ ಸುರತ್ಕಲ್, ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಬೆನಟ್ ಅಮ್ಮನ್ನ, ಸುಜಾತ, ಉಪನ್ಯಾಸಕರಾದ ರವಿ ಚಂದ್ರ, ಜಯಶ್ರೀ ಮತ್ತು ಅಪರ್ಣ ಅವರು ಉಪಸ್ಥಿತರಿದ್ದರು.
ಇತಿಹಾಸ ಉಪನ್ಯಾಸಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆ ಪ್ರಸ್ತುತ ಪಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ