ಕಂಬಾರು: ಗಮಕ ಕಲಾಪರಿಷತ್ತು ಗಡಿನಾಡು ಕಾಸರಗೋಡು ಘಟಕ ಮತ್ತು ಸಿರಿಗನ್ನಡ ವೇದಿಕೆ ಕಾಸರಗೋಡು ಇದರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಗಮಕ ಶ್ರಾವಣ ಸರಣಿಯ ಮೂರನೇ ಕಾರ್ಯಕ್ರಮವು ಆ.01, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಶಾಂಭವೀ ಕಲಾಮಂದಿರದಲ್ಲಿ ನಡೆಯಿತು.
ಗಮಕ ಎಂದರೇನು, ಅವರ ಆಳ, ಅಗಲ, ವಿಸ್ತಾರಗಳೇನು? ಪ್ರಸ್ತುತ ದಿನಗಳಲ್ಲಿ ಪುರಾಣ ಕಾವ್ಯಗಳನ್ನು ಜನಮಾನಸಕ್ಕೆ ತಲುಪಿಸಲು ಗಮಕ ಕಲಾಪರಿಷತ್ ನಡೆಸುವ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತಾಗಿ ಸಭೆಯ ಅಧ್ಯಕ್ಷತೆ ವಹಿಸಿದ ಸಿರಿಗನ್ನಡ ವೇದಿಕೆ ಗಡಿನಾಡು ಕಾಸರಗೋಡು ಘಟಕದ ಅಧ್ಯಕ್ಷರಾದ ಸಾಹಿತಿ ವಿ.ಬಿ. ಕುಳಮರ್ವ ನುಡಿದರು.
ತಮ್ಮ ಬಾಲ್ಯದ ದಿನಗಳಲ್ಲಿ ಮನೆ ಮನೆಗಳಲ್ಲಿ ನಡೆಯುತ್ತಿದ್ದ ಭಜನೆ, ಗಮಕವಾಚನದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸ್ಮರಿಸಿ, ಇಂದಿನ ಮಕ್ಕಳಿಗೆ ಅದರ ಔಚಿತ್ಯಗಳನ್ನು ಮನವರಿಕೆ ಮಾಡಿಕೊಡಬೇಕಾದ ಅಗತ್ಯವನ್ನು ಮುಖ್ಯ ಅತಿಥಿ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ತಿಳಿಸಿದರು.
ಕಾಸರಗೋಡಿನ ಕನ್ನಡದ ಇಂದಿನ ಸ್ಥಿತಿಗತಿ ಬದಲಾಗಲು ವಿದ್ಯಾರ್ಥಿಗಳಿಗೆ ಎಳವೆಯಿಂದಲೇ ಕಾವ್ಯಗಳ ಪರಿಚಯ ಮಾಡಿಸಬೇಕು ಎಂದು ಅವರು ನುಡಿದರು.
ಕಳತ್ತೂರಿನ ಪಿ. ನರಹರಿ ಮಾಸ್ತರ್, ಭಾರತಿ ಟೀಚರ್ ಅವರು ತೊರವೆ ರಾಮಾಯಣದ ಸೀತಾಸ್ವಯಂವರ ಕಾವ್ಯಭಾಗದ ಗಮಕವಾಚನ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮವನ್ನು ಕಂಬಾರು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ರವಿಶಂಕರ್ ಭಟ್ ಎಡಕ್ಕಾನ ದೀಪ ಬೆಳಗಿಸಿ ಉದ್ಘಾಟಿಸಿ, ಗಮಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ರೇವತಿ ಅಮ್ಮ ಕಕ್ವೆ ಅವರು ಪ್ರಾರ್ಥಿಸಿದರು. ಅಶೋಕ ಮಾಸ್ತರ್ ಬಾಡೂರು ಸ್ವಾಗತಿಸಿ, ಎನ್.ಎಚ್. ಲಕ್ಷ್ಮೀನಾರಾಯಣ ಭಟ್ ನೆರಿಯ ಧನ್ಯವಾದ ಸಮರ್ಪಣೆ ಮಾಡಿದ ಕಾರ್ಯಕ್ರಮವನ್ನು ಸಾಹಿತಿ ಪ್ರಸನ್ನ ವಿ. ಚೆಕ್ಕೆಮನೆ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ