ಗಣೇಶಪುರ, ಸುರತ್ಕಲ್: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಶ್ರೇಷ್ಠ ನಮ್ಮ ದೇಶದ ಎಲ್ಲಾ ಕಲಾ ಪ್ರಕಾರಗಳಲ್ಲಿ ಅಡಕವಾಗಿದೆ ಗುರು ಪರಂಪರೆ ಎಂದು ಕಟೀಲಿನ ವಿದ್ವಾನ್ ಸದಾನಂದ ಆಸ್ರಣ್ಣ ನುಡಿದರು.
ಅವರು ಇತ್ತೀಚೆಗೆ ಗುರುಪೂರ್ಣಿಮೆ ಅಂಗವಾಗಿ ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಇಲ್ಲಿ ಹಮ್ಮಿಕೊಂಡಿರುವ ಗುರು ನಮನ ಮಾತಾಪಿತರ ಚರಣ ಪೂಜನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಗುರುವಿನ ಸ್ಥಾನ ಅನನ್ಯವಾದದು ಓರ್ವ ಶಿಕ್ಷಕ ಕೇವಲ ಜ್ಞಾನವನ್ನು ನೀಡುತ್ತಾನೆ ಆದರೆ ಗುರುವು ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಜವಾಬ್ದಾರನಾಗಿರುತ್ತಾನೆ ಎಂದರು.
ಕಳೆದ ಹಲವಾರು ವರ್ಷಗಳಿಂದ ಇಂತಹ ಮಾದರಿಯಾದ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಸಂಸ್ಥೆಯನ್ನು ಸಂಸ್ಥೆಯ ರೂವಾರಿಗಳಾದ ಹೊಳ್ಳ ದಂಪತಿಗಳನ್ನು ಶ್ಲಾಘಿಸಿದರು. ಗುರು ಶಿಷ್ಯರ ಸಂಬಂಧವನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಗುರುವಂದನಾ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದಿನ ಕಾಲಘಟ್ಟದಲ್ಲಿ ಯೂಟ್ಯೂಬ್, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಸಹಾಯದಿಂದ ವಿದ್ಯೆ ಕಲಿಯುವ ಪದ್ಧತಿ ಆರಂಭವಾಗಿದೆ, ಈ ಸಾಮಾಜಿಕ ಜಾಲತಾಣಗಳು ಉತ್ತಮವಾದ ಜ್ಞಾನ ನೀಡುತ್ತವೆಯಾದರೂ ತಪ್ಪನ್ನು ತಿದ್ದಿ ಕಲಿಸುವ ಗುರು ಸ್ಥಾನಕ್ಕೆ ನಿಲ್ಲಲಾರವು. ಮನೆಯಲ್ಲಿ ಹೆತ್ತವರು ಮಕ್ಕಳಿಗೆ ಬರೇ ಪ್ರೀತಿ ತೋರಿಸುವುದು ಮಾತ್ರವಲ್ಲದೆ ಬಾಹ್ಯ ಮತ್ತು ಆಂತರಿಕ ಮರ್ಮವನ್ನು ಸೂಕ್ಷ್ಮವಾಗಿ ಅರಿತುಕೊಳ್ಳಬೇಕು ಎಂದು ಯೋಗ ಚೇತನ ಸಂಸ್ಥೆಯ ನಿರ್ದೇಶಕಿ, ಚೇತನ ಬಡೆಕರ್ ಅಭಿಪ್ರಾಯಪಟ್ಟರು.
ಗುರು ನಮನವನ್ನು ಸ್ವೀಕರಿಸಿ ಮಾತನಾಡಿದ ಕರ್ನಾಟಕ ಕಲಾ ಶ್ರೀ ವಿದುಷಿ ಶಾರದಮಣಿ ಶೇಖರ್ ಅವರು, ಕಲಾ ಸೇವೆಯಲ್ಲಿ ಬದುಕನ್ನು ತೊಡಗಿಸಿ ತನ್ನ ದಕ್ಷ ಮತ್ತು ಶಿಸ್ತಿನಿಂದ ನಟರಾಜನ ಸೇವೆಯನ್ನು ಮಾಡುತ್ತಿರುವ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳರು ಅಭಿನಂದನಾರ್ಹರು ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳ ಪರವಾಗಿ ಹಿರಿಯ ವಿದ್ಯಾರ್ಥಿನಿ ವಿದುಷಿ ಅದಿತಿ ಭರತಾಂಜಲಿಯೊಂದಿಗೆ ತನ್ನ ಒಡನಾಟವನ್ನು ಹಾಗೂ ತಾನು ಒಂದು ಕಲಾವಿದೆಯಾಗಿ ಬೆಳೆಯಬೇಕಾದರೆ ಗುರುಗಳು ನೀಡಿದ ಮಾರ್ಗದರ್ಶನ ಮತ್ತು ಸಹಕಾರ ಮರೆಯಲಾಗದ್ದು ನನ್ನ ಎರಡನೇ ಮನೆಯೇ ಗುರುಗಳ ಮನೆ ಎಂದರು.
ಕೊನೆಯಲ್ಲಿ ಮಕ್ಕಳು ಹೆತ್ತವರ ಪಾದ ಪೂಜೆ ಮಾಡಿ ಕಾಲಿಗೆ ಹೂವು ಹಾಕಿ ವಂದಿಸುವ ಕಾರ್ಯಕ್ರಮ ಭಾವಪೂರ್ಣವಾಗಿ ಜರಗಿತು. ಸಂಸ್ಥೆ ನಿರ್ದೇಶಕ ಗುರು ಶ್ರೀಧರ ಹೊಳ್ಳ ಸ್ವಾಗತಿಸಿ, ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ವಿದುಷಿ ಪ್ರಕ್ಷಿಲಾ ಜೈನ್ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ