ಸತ್ಯವಾನನಿಗೆ ಸಾವಿತ್ತ್ರೀ, ಮತ್ತೆ ಬದುಕುವ ಭಾಗ್ಯವೂ ಇತ್ತ್ರೀ!

Upayuktha
0

ಇಂದು ವಟಸಾವಿತ್ರಿ ಹುಣ್ಣಿಮೆ




- ಶ್ರೀವತ್ಸ ಜೋಶಿ, ವಾಷಿಂಗ್ಟನ್


ಹಾಭಾರತದ ವನಪರ್ವದಲ್ಲಿ ಬರುತ್ತದೆ ಈ ಕಥೆ. “ದ್ರೌಪದಿಗೆ ಮಿಗಿಲಾದ ಪತಿವ್ರತೆ ಇನ್ನೊಬ್ಬಳಿದ್ದಾಳೆಯೆ?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಉತ್ತರವಾಗಿ ಮಾರ್ಕಂಡೇಯ ಮಹಾಮುನಿ ಹೇಳುವ ಕಥೆ-


“ಮದ್ರ ದೇಶದ ದೊರೆ ಅಶ್ವಪತಿಗೆ ಹೇರಳವಾದ ಧನಧಾನ್ಯ ಸಂಪತ್ತು, ಸುಭಿಕ್ಷವಾದ ರಾಜ್ಯ, ಸುಖಜೀವಿ ಪ್ರಜಾವರ್ಗ ಎಲ್ಲವೂ ಚೆನ್ನಾಗಿಯೇ ಇತ್ತು; ಕಾಡುತ್ತಿದ್ದ ಒಂದೇ‌ಒಂದು ಮತ್ತು ಬಹುದೊಡ್ಡ ಚಿಂತೆಯೆಂದರೆ ಸಂತಾನಹೀನತೆ. ಮದುವೆಯಾಗಿ ಹದಿನೆಂಟು ವರ್ಷಗಳೇ ಆದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಆತ ಕಠೋರ ತಪಸ್ಸನ್ನಾಚರಿಸಿದನು, ವ್ರತನಿಯಮಗಳನ್ನು ಪಾಲಿಸಿದನು. ಕೊನೆಗೂ ಒಂದು ಶುಭಗಳಿಗೆಯಲ್ಲಿ ಅಶ್ವಪತಿಯ ರಾಣಿ ಮುದ್ದಾದ ಹೆಣ್ಣುಮಗುವಿಗೆ ಜನ್ಮವಿತ್ತಳು. ಸವಿತೃದೇವತೆಯ ಅನುಗ್ರಹದಿಂದ ಹುಟ್ಟಿದ ಮಗುವಾದ್ದರಿಂದ ಅವಳಿಗೆ ಸಾವಿತ್ರಿ ಎಂಬ ಹೆಸರನ್ನಿಟ್ಟರು. ಅರಮನೆಯ ಅಂದ-ಆನಂದಗಳನ್ನು ನೂರುಪಟ್ಟು ಹೆಚ್ಚಿಸಿದ ಬಾಲೆ ಸಾವಿತ್ರಿ, ಆಟವಾಡುತ್ತ ವಿದ್ಯೆ ಕಲಿಯುತ್ತ ನೋಡನೋಡುತ್ತಿದ್ದಂತೆ ದೊಡ್ಡವಳಾಗಿಯೇಬಿಟ್ಟಳು. ಅಶ್ವಪತಿಯು ಅವಳ ಸ್ವಯಂವರವನ್ನೂ ಏರ್ಪಡಿಸಿದನು. ಪಕ್ಕದ ರಾಜ್ಯದ ದ್ಯುಮತ್ಸೇನ ಎಂಬ ಅರಸನ ಮಗ ಸ್ಫುರದ್ರೂಪಿ ತರುಣ ಸತ್ಯವಾನನನ್ನು ವರಿಸಿದಳು ಸಾವಿತ್ರಿ. ವಿವಾಹದ ತಯಾರಿಗಳೆಲ್ಲ ನಡೆದಿರಲು ಅಲ್ಲಿಗೆ ಬಂದ ತ್ರಿಲೋಕಸಂಚಾರಿ ನಾರದಮಹರ್ಷಿಗಳು ಘೋರವಾದ ಆತಂಕದ ಸುದ್ದಿಯೊಂದನ್ನು ಹೇಳಿದರು. ಅದೇನೆಂದರೆ, ಮದುವೆಯಾಗಿ ಸರಿಯಾಗಿ ಒಂದು ವರ್ಷ ಪೂರ್ತಿಯಾಗುವ ದಿನವೇ ಸತ್ಯವಾನ ಸಾವನ್ನಪ್ಪಲಿದ್ದಾನೆ ಎಂದು. ಅದನ್ನು ಕೇಳಿ ಅಶ್ವಪತಿಗೆ ಕಳವಳ, ದಿಗ್ಭ್ರಮೆ. ಸತ್ಯವಾನನನ್ನು ಬಿಟ್ಟು ಬೇರೆ ಯಾರನ್ನಾದರೂ ವರಿಸುವಂತೆ ಸಾವಿತ್ರಿಗೆ ತಿಳಿಹೇಳುವ ಪ್ರಯತ್ನ. ಆದರೆ ಸಾವಿತ್ರಿಯದು ಅಚಲನಿರ್ಧಾರ. ಏನೇ ಆದರೂ ತಾನು ಸತ್ಯವಾನನನ್ನೇ ಮದುವೆಯಾಗುವವಳು ಎನ್ನುವುದೊಂದೇ ಮಾತು. ಕೊನೆಗೂ ಬೇರೆ ಉಪಾಯವಿಲ್ಲದೆ ಮಗಳ ವಿವಾಹ ಸಮಾರಂಭವನ್ನು ನೆರವೇರಿಸಿದ ಅಶ್ವಪತಿ, ಅವಳನ್ನು ಗಂಡನ ಮನೆಗೆ ಬೀಳ್ಕೊಟ್ಟನು.


ಸಾವಿತ್ರಿಯ ದುರದೃಷ್ಟ ಆಗಲೇ ಆರಂಭವಾಯಿತೇನೊ ಎನ್ನುವಂತೆ ದ್ಯುಮತ್ಸೇನನ ರಾಜ್ಯವನ್ನು ಶತ್ರುಗಳು ವಶಪಡಿಸಿಕೊಂಡರು. ಮೊದಲೆಲ್ಲ ಅಶ್ವಪತಿಯಷ್ಟೇ ಬಲಶಾಲಿ ಮತ್ತು ಪರಾಕ್ರಮಿಯಾಗಿದ್ದವ ಇದೀಗ ಅವನಿಗೂ ಪ್ರಾಯ ಸಂದಿತ್ತು, ಕಣ್ಣು ಕಾಣಿಸದಾಗಿತ್ತು. ರಾಜ್ಯವನ್ನು ಕಳೆದುಕೊಂಡು ಕಾಡಿನಲ್ಲಿ  ಬದುಕು ಸಾಗಿಸಬೇಕಾದ ಪರಿಸ್ಥಿತಿ. ಮುದಿ ತಂದೆತಾಯಿಗಳ ಜತೆ ನವವಿವಾಹಿತ ಜೋಡಿ ಸತ್ಯವಾನ-ಸಾವಿತ್ರಿ ಕಾಡುಮೇಡುಗಳಲ್ಲಿ ಅಲೆದರು. ನಗುಮುಖದಿಂದಲೇ ಗಂಡ ಮತ್ತು ಅತ್ತೆ-ಮಾವಂದಿರ ಸೇವೆ ಮಾಡಿಕೊಂಡು, ಒಂದು ವರ್ಷದಲ್ಲಿ ಗಂಡ ಸಾಯಲಿದ್ದಾನೆ ಎಂಬ ಕಠೋರ ಸತ್ಯವನ್ನು ಹೊಟ್ಟೆಯಲ್ಲಿ ಹಾಕಿಕೊಂಡು, ಸಂತೃಪ್ತ ಭಾವದಿಂದ ದಿನ ಕಳೆಯುತ್ತಿದ್ದ ಸಾವಿತ್ರಿ ಯಾವುದೇ ಪಶ್ಚಾತ್ತಾಪ-ದುಗುಡಗಳನ್ನಾಗಲಿ ಯಾರೆದುರಿಗೂ ತೋರಿಕೊಳ್ಳುತ್ತಿರಲಿಲ್ಲ.


ದಿನಗಳು ಉರುಳಿ ತಿಂಗಳುಗಳು ಕಳೆದು ಇನ್ನೇನು ನಾರದರು ಹೇಳಿದ್ದ ಗಡುವಿಗೆ ಮೂರೇ ದಿನ ಬಾಕಿ ಉಳಿದಿದ್ದವು. ಆಗಲೂ ಸಾವಿತ್ರಿ ಧೃತಿಗೆಡಲಿಲ್ಲ. ಮೂರು ದಿನವೂ ಅನ್ನಾಹಾರ ನಿದ್ರೆಯಿಲ್ಲದೆ ಕಟ್ಟೆಚ್ಚರದಿಂದ ಸತ್ಯವಾನನ ಜತೆಯಲ್ಲೇ ಇರುತ್ತೇನೆಂದು ಪಣತೊಟ್ಟಳು. ದೇವರ ಮೇಲೆ ಭಾರಹಾಕಿದಳು. ಪರಿಪರಿಯಾಗಿ ಪ್ರಾರ್ಥನೆ ಸಲ್ಲಿಸಿದಳು. ಕೊನೆಗೂ ಬಂದೇಬಿಟ್ಟಿತು ಆ ದಿನ. ಸತ್ಯವಾನ ಎಂದಿನಂತೆ ಅವತ್ತೂ ಕಟ್ಟಿಗೆ ತರಲು ಕೊಡಲಿ ಹಿಡಿದು ಹೊರಟನು. ಸಾವಿತ್ರಿ ತಾನೂ ಜತೆಯಲ್ಲಿ ಬರುವೆನೆಂದು ಅವನನ್ನು ಹಿಂಬಾಲಿಸಿದಳು. ಒಂದಿಷ್ಟು ಕಟ್ಟಿಗೆ ಒಟ್ಟುಮಾಡಿ ಆಗಿತ್ತಷ್ಟೆ, ಆಗಲೇ ಸತ್ಯವಾನ ತನಗೆ ತುಂಬ ಆಯಾಸವಾಗುತ್ತಿದೆ, ತಲೆಸುತ್ತಿಬಂದಂತಾಗುತ್ತಿದೆ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಆಮೇಲೆ ಕೆಲಸ ಮುಂದುವರೆಸುತ್ತೇನೆಂದನು. ಅವರಿಬ್ಬರೂ ಆಗ ಒಂದು ದೊಡ್ಡ ಆಲದ ಮರದ ಕೆಳಗಡೆಗೆ ಬಂದಿದ್ದರು. ಅಲ್ಲೇ ಕುಳಿತ ಸಾವಿತ್ರಿ ತನ್ನ ತೊಡೆಯ ಮೇಲೆ ತಲೆಯನ್ನಿಟ್ಟು ಮಲಗುವಂತೆ ಸತ್ಯವಾನನಿಗೆ ಹೇಳಿದಳು. ಇದ್ದಕ್ಕಿದ್ದಂತೆ ನಿಸ್ತೇಜನಾದ ಸತ್ಯವಾನ ತೀವ್ರವಾಗಿ ನರಳಲಾರಂಭಿಸಿದನು. ನಿಗದಿತ ವೇಳೆಗೆ ಸರಿಯಾಗಿ ಅವನ ಪ್ರಾಣಪಕ್ಷಿ ಹಾರಿಹೋಗುವುದಕ್ಕೂ ಆಗಲೇ ಅಲ್ಲೊಂದು ಕರಾಳ ಆಕೃತಿ ಗೋಚರಿಸುವುದಕ್ಕೂ ಸರಿಯಾಯಿತು. ಅದು ಬೇರಾರೂ ಅಲ್ಲ, ಸಾಕ್ಷಾತ್ ಯಮಧರ್ಮರಾಯ!


ತನ್ನ ಕೈಯಲ್ಲಿದ್ದ ಪಾಶದಿಂದ ಸತ್ಯವಾನನ ಆತ್ಮವನ್ನು ಎಳೆದುಕೊಂಡು ದಕ್ಷಿಣದಿಕ್ಕಿಗೆ ಹೊರಟೇಬಿಟ್ಟನು ಯಮ. ಇದೆಲ್ಲ ಕಣ್ಮುಚ್ಚಿ ತೆರೆಯುವುದರೊಳಗೆ ಘಟಿಸಿದ ಅನುಭವ ಸಾವಿತ್ರಿಗೆ. ಅವಳು ಎದ್ದುನಿಂತು ಆರ್ತನಾದಗೈಯುತ್ತ ಯಮನನ್ನು ಹಿಂಬಾಲಿಸತೊಡಗಿದಳು. ತನ್ನ ಹಿಂದೆಯೇ ಬರುತ್ತಿರುವ ಆಕೆಯನ್ನು ಕಂಡು ಯಮನಿಗೆ ಆಶ್ಚರ್ಯ! “ನೀನು ಬರುವಂತಿಲ್ಲ, ನಿನ್ನ ಪತಿಯ ಪ್ರಾಣವನ್ನಷ್ಟೇ ತೆಗೆದುಕೊಂಡು ಹೋಗಲು ನಾನು ಬಂದವನು, ನೀನು ಹಿಂದಿರುಗು” ಎಂದು ಸಾವಿತ್ರಿಯನ್ನು ಎಚ್ಚರಿಸಿದನು. ಅದಕ್ಕೆ ಕಿವಿಗೊಡದ ಆಕೆ ಯಮನಿಗೇ ಸವಾಲೆಸೆದಳು, “ಒಂದೋ ನನ್ನ ಪತಿಯ ಪ್ರಾಣವನ್ನು ಹಿಂದಿರುಗಿಸು ಇಲ್ಲ ಪತಿಯೊಟ್ಟಿಗೆ ನನ್ನನ್ನೂ ಕರೆದೊಯ್ಯು” ಎಂದಳು. ಅವಳನ್ನು ಅದೆಷ್ಟು ಸಮಾಧಾನಿಸಿದರೂ ಗದರಿಸಿದರೂ ಉಪಯೋಗವಾಗಲಿಲ್ಲ. ಏನೇನೋ ಆಮಿಷ ತೋರಿಸಿದರೂ ಸಾವಿತ್ರಿ ಕೇಳುತ್ತಿದ್ದದ್ದು ಒಂದೇ- ಸತ್ಯವಾನ ಮತ್ತೆ ಬದುಕಬೇಕು, ಇಲ್ಲವಾದರೆ ತಾನೂ ಸತ್ತು ಅವನ ಜತೆಯಲ್ಲೇ  ಸ್ವರ್ಗ ಸೇರಬೇಕು. ಸಾವಿತ್ರಿಯ ನಿರ್ಮಲ ನಿಸ್ಪೃಹ ನಿರ್ವ್ಯಾಜ ಪತಿಭಕ್ತಿಯೆದುರು ಯಮ ಕುಬ್ಜನಾದನು. ಆಕೆಯ ಅಚಲಪ್ರೇಮವನ್ನು  ಕಂಡು ಮಮ್ಮಲಮರುಗಿದನು. ಯಾವ ಆಲದ ಮರದ ಬುಡದಿಂದ ಸತ್ಯವಾನನ ಪ್ರಾಣವನ್ನು ಕಸಿದುಕೊಂಡು ಹೋಗಿದ್ದನೋ ಅಲ್ಲಿಗೇ ಮರಳಿ ಅವನ ಮೃತಶರೀರದಲ್ಲಿ ಮತ್ತೆ ಪ್ರಾಣವಾಯು ಸಂಚರಿಸುವಂತೆ ಮಾಡಿದನು. ಪತಿ ಸತ್ಯವಾನನೇ ತನ್ನ ಪಾಲಿನ ದೇವರೆಂದು ನಂಬಿದ ಸಾವಿತ್ರಿಯನ್ನು ಮನಸಾರೆ ಹರಸಿ, ನೂರ್ಕಾಲ ಬಾಳುವಂತೆ ಅವರಿಬ್ಬರನ್ನು ಅನುಗ್ರಹಿಸಿ ಅಲ್ಲಿಂದ ಕಣ್ಮರೆಯಾದನು. ನಿದ್ದೆಯಿಂದ ಎಚ್ಚರಗೊಂಡವನಂತೆ ಎದ್ದು ಕುಳಿತ ಸತ್ಯವಾನ, ಇದೆಲ್ಲ ತನ್ನ ಕನಸಿನಲ್ಲಿ ನಡೆಯಿತೇ ಎಂದು ಸಾವಿತ್ರಿಯನ್ನು ಕೇಳಿದನು. ಆಗಲೇ ಮುಸ್ಸಂಜೆ ಕಳೆದು ಹುಣ್ಣಿಮೆಯ ಚಂದಿರ ಪೂರ್ವದಂಚಿನಲ್ಲಿ ಇಣುಕಿ ಆ ಅಪೂರ್ವ ಚಮತ್ಕಾರಕ್ಕೆ ಮಂಗಳ ಹಾಡಲು ಬಂದಿದ್ದನು. ಕಟ್ಟಿಗೆ ಒಯ್ಯುವುದು ತಡವಾಯಿತೆಂದು ಲಗುಬಗೆಯಿಂದ ಮನೆಯತ್ತ ಮರಳಿದ ಸತ್ಯವಾನ-ಸಾವಿತ್ರಿ ಅಲ್ಲಿ ನೋಡುವುದೇನು, ತಂದೆ-ತಾಯಿಯರು ಸಂತಸದಲ್ಲಿದ್ದಾರೆ, ರಾಜ್ಯವನ್ನು ಕಸಿದುಕೊಂಡಿದ್ದ ಶತ್ರುಗಳು ಪರಾರಿಯಾಗಿ ಮತ್ತೆ ರಾಜ್ಯಭಾರಕ್ಕೆ ಬರಬೇಕೆಂದು ತಿಳಿಸಲು ದೂತನೊಬ್ಬ ಬಂದಿದ್ದಾನೆ! ಸಾವಿನ ಮನೆಯನ್ನು ಹೊಕ್ಕು ಮರಳಿದ ಮಗ ಸತ್ಯವಾನ, ಸಾವನ್ನೇ ಜಯಿಸಿದ ಸೊಸೆ ಸಾವಿತ್ರಿ. ದ್ಯುಮತ್ಸೇನನ ಸಂತಸಕ್ಕೆ ಪಾರವೇ ಇಲ್ಲ. ಮತ್ತೆ ಎಲ್ಲರೂ ಅರಮನೆಗೆ ಮರಳಿ ಸುಖವಾಗಿ ರಾಜ್ಯಭಾರ ನಡೆಸಿದರು. ಸಾವಿತ್ರಿಯ ಪತಿಭಕ್ತಿಯ ಕಥೆ ಅಜರಾಮರವಾಯಿತು.”


*  *  *

ಪತಿಯ ಪ್ರಾಣವನು ಉಳಿಸುವ ತನಕ ಅಂಧಕಾರವನು ಅಳಿಸುವ ತನಕ ಬಿಡೆನು ನಿನ್ನ ಪಾದ ಎಂದು ಯಮನನ್ನು ಸತಾಯಿಸಿ, ಅವನೊಂದಿಗೆ ಪಟ್ಟುಹಿಡಿದು ವಾಗ್ವಾದ ಮಾಡಿ, ಪತಿಭಕ್ತಿಯೆಂಬ ಒಂದೇ ಅಸ್ತ್ರದಿಂದ ಅವನೆಲ್ಲ ಶಕ್ತಿಸಾಮರ್ಥ್ಯಗಳಿಗೆ ಸಡ್ಡುಹೊಡೆದು ಗೆದ್ದುಬಂದ ಧೀರ ನಾರಿ ಸಾವಿತ್ರಿಯ ಸ್ಮರಣೆಯ ಆಚರಣೆಯೇ ವಟಸಾವಿತ್ರೀವ್ರತ. ಸತ್ಯವಾನನ ಅರೆಕ್ಷಣದ ಸಾವು, ಮರುಜನ್ಮ, ದೀರ್ಘಾಯುಷ್ಯದ ವರದಾನ- ಈ ಎಲ್ಲ ಚಮತ್ಕಾರಗಳು ನಡೆದದ್ದು ಆಲದ ಮರ(ವಟವೃಕ್ಷ)ದ ಕೆಳಗೆ, ಆದ್ದರಿಂದ ವ್ರತದ ಪಾವಿತ್ರ್ಯಕ್ಕೆ ಆಲದ ಮರದ ಸೇರ್ಪಡೆ. ಆವತ್ತು ಜ್ಯೇಷ್ಠ ಮಾಸದ ಹುಣ್ಣಿಮೆ, ಹಾಗಾಗಿ ವಟಸಾವಿತ್ರೀಪೂರ್ಣಿಮಾ. ಸಾಧ್ವೀಮಣಿ ಸಾವಿತ್ರಿಯ ಸ್ಮರಣೆ, ಆಯುಷ್ಯಸೂಚಕ ಆಲದ ಸನ್ನಿಧಾನ, ಪರಿಪೂರ್ಣತೆಯ ಪ್ರಮಾಣವಾಗಿ ಪೂರ್ಣಚಂದ್ರ- ಹೀಗೆ ತ್ರಿಗುಣವಾದ ದೈವಿಕತೆ. ಇದಕ್ಕಿಂತ ಹೆಚ್ಚಿನದೇನು ಬೇಕು ವಟಸಾವಿತ್ರೀವ್ರತದ ಘನತೆಗೆ?


ಈ ವರ್ಷ, ಮಂಗಳವಾರ ಜೂನ್ ಹತ್ತರಂದು ವಟಸಾವಿತ್ರಿ ಹುಣ್ಣಿಮೆ. ಭಾರತದಾದ್ಯಂತ ಹೆಚ್ಚಿನ ಎಲ್ಲ ಪ್ರದೇಶಗಳಲ್ಲೂ ಈ ವ್ರತದ ಆಚರಣೆ ನಡೆಯುತ್ತದೆ. ಮದುವೆಯಾದ ಹೆಂಗಸರು ತಲೆಸ್ನಾನ ಮಾಡಿ, ಮಡಿಯುಟ್ಟು, ವಟವೃಕ್ಷವನ್ನು ಪೂಜಿಸುತ್ತಾರೆ. ಪ್ರಕೃತಿದತ್ತ ಫಲಪುಷ್ಪಗಳೆಲ್ಲ ಈ ಪೂಜೆಯಲ್ಲಿ ಬಳಕೆಯಾಗುತ್ತವೆ. ಆಲದ ಮರಕ್ಕೆ ನೂರ‌ಎಂಟು ಪ್ರದಕ್ಷಿಣೆ ಸಲ್ಲಿಸುತ್ತ, ಬಿಳಿಯ ದಾರವನ್ನು ಮರದ ಕಾಂಡಕ್ಕೆ ನೂರೆಂಟು ಸುತ್ತು ಸುತ್ತಿಕಟ್ಟುವ ಸಾಂಕೇತಿಕ ಕ್ರಮವೂ ಕೆಲವೆಡೆ ಇದೆ. ಆ ನೂಲು ಯಮನ ಪಾಶಕ್ಕಿಂತ ನೂರೆಂಟು ಪಟ್ಟು ಉದ್ದ. ಆಲದ ಮರ ಪ್ರತಿನಿಧಿಸುವುದು ಪತಿಯ ದೀರ್ಘಾಯುಷ್ಯವನ್ನು, ಅದಕ್ಕೆ ಸತಿಶಿರೋಮಣಿಯಿಂದ ರಕ್ಷಣೆ-ಹಾರೈಕೆಗಳ ಭದ್ರವಾದ ಬಂಧ. ಇದು ಪೂಜಾವಿಧಿಯ ಸಾಂಕೇತಿಕ ಆಶಯ. ಉಳಿದಂತೆ, ಭಕ್ಷಭೋಜ್ಯ ನೈವೇದ್ಯ ಸಮರ್ಪಣೆ, ಪೂಜಾರಿಗೆ ದಕ್ಷಿಣೆ, ಮುತ್ತೈದೆಯರಿಗೆ ಬಾಗಿನ, ಸಾವಿತ್ರಿಯ ಕಥಾಶ್ರವಣ, ಇಷ್ಟಮಿತ್ರ-ಕುಲಬಾಂಧವರೆಲ್ಲ ಸೇರಿ ಹಬ್ಬದಡಿಗೆಯ ಭೋಜನ- ಇತ್ಯಾದಿ ಸಂಪ್ರದಾಯ ವಿಧಿವಿಧಾನಗಳು ಇದ್ದೇ‌ಇರುತ್ತವೆ. ಆಚರಣೆಯಲ್ಲಿ ಅಲ್ಪಸ್ವಲ್ಪ ಪ್ರಾದೇಶಿಕ ವೈವಿಧ್ಯವೂ ಇರಬಹುದೆನ್ನಿ, ಆದರೆ ಆಲದ ಮರಕ್ಕೆ ಪೂಜೆ ಮತ್ತು ಪತಿಯ ದೀರ್ಘಾಯುಷ್ಯದ ಕೋರಿಕೆ ಇವಂತೂ ಸಾಮಾನ್ಯ ಅಂಶಗಳು.


ಆಲದ ಮರ ದೀರ್ಘಾಯುಷ್ಯಕ್ಕೆ ಒಂದು ಪರ್ಯಾಯಪದ ಎಂದರೆ ಅತಿಶಯೋಕ್ತಿಯಲ್ಲ. ರೆಂಬೆಕೊಂಬೆಗಳನ್ನು ಎಷ್ಟು ವಿಶಾಲವಾಗಿ ವಿಸ್ತರಿಸಿಕೊಂಡು ಅದು ಬೆಳೆಯುತ್ತದೋ ಅದರ ಬೇರುಗಳೂ ಅಷ್ಟೇ ಆಳ ಮತ್ತು ಅಗಲಕ್ಕೆ ಹರಡಿರುತ್ತವೆ. ಆಲಕ್ಕೆ ‘ಬಹುಪಾದ’ ಎಂಬ ಹೆಸರು ಬಂದಿರುವುದು ಅದೇ ಕಾರಣಕ್ಕೇ. ಅದೆಷ್ಟೋ ಪೌರಾಣಿಕ ಕಥೆಗಳಲ್ಲಿ, ನೀತಿಕಥೆಗಳಲ್ಲಿ ಆಲದಮರದ ಪ್ರಸ್ತಾವ ಬಂದೇಬರುತ್ತದೆ. ಕೃಷ್ಣಪರಮಾತ್ಮ ಪುಟ್ಟ ಮಗುವಾಗಿದ್ದಾಗ ಪವಡಿಸಿದ್ದು ಆಲದ ಎಲೆಯ ಮೇಲೆಯೇ ತಾನೆ? ಇನ್ನೊಂದು ವಿಚಾರ ನಿಮಗೆ ಗೊತ್ತಿರಬಹುದು- ಪ್ರಾಣಿಗಳಲ್ಲಿ ಹುಲಿ, ಪಕ್ಷಿಗಳಲ್ಲಿ ನವಿಲು, ಹಣ್ಣುಗಳಲ್ಲಿ ಮಾವು, ಹೂವುಗಳಲ್ಲಿ ಕಮಲ ಇವಕ್ಕೆಲ್ಲ ರಾಷ್ಟ್ರೀಯ ಗೌರವವಿರುವಂತೆ ನಮ್ಮ ಭಾರತ ದೇಶದ ರಾಷ್ಟ್ರೀಯ ವೃಕ್ಷ ಆಲದ ಮರ! ನಮ್ಮ ಭಾರತೀಯ ಸಂಸ್ಕೃತಿಯ ಆಳ ಅಗಲ ಎತ್ತರಗಳನ್ನು ಪ್ರತಿಬಿಂಬಿಸಲು ಇದಕ್ಕಿಂತ ಹೆಚ್ಚು ಸೂಕ್ತ ಸಂಕೇತ ಯಾವುದಿದ್ದೀತು ಹೇಳಿ! ರವೀಂದ್ರನಾಥ ಟಾಗೋರರು ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಹೇಳುವಾಗೆಲ್ಲ ಅದನ್ನೊಂದು ಆಲದಮರಕ್ಕೆ ಹೋಲಿಸಿದ್ದಾರೆ; ಟಾಗೋರರ ಅನೇಕ ಕವಿತೆಗಳಲ್ಲೂ ವಟವೃಕ್ಷದ ಉಲ್ಲೇಖ ಬರುತ್ತದೆಯಂತೆ. 


ಆಲದ ಮರದ ದೀರ್ಘಾಯುಷ್ಯ ಮತ್ತು ಉಪಯುಕ್ತತೆ ಬಗ್ಗೆ ಬರೆಯುವಾಗ ಒಂದು ಕನ್ನಡ ಅಭಿನಯಗೀತೆಯೂ ನೆನಪಾಗುತ್ತದೆ. ‘ಚೀಂವ್‌ಚೀಂವ್ ಚಿಕ್ಕ ಗುಬ್ಬಿ...’ ಪದ್ಯದಲ್ಲಿ, ಗುಬ್ಬಿಯು ಗೂಡುಕಟ್ಟಲು ಜಾಗ ಮತ್ತು ಅನುಮತಿ ಕೇಳಿದಾಗ ಮಾವು ಗೇರು ಹಲಸಿನ ಮರಗಳೆಲ್ಲ ‘ಕಾಲು ಮುರಿದ ಗುಬ್ಬಿಗೆ ನಾನು ಸ್ಥಳವ ಕೊಡಲಾರೆ’ ಎಂದು ಆಕ್ಷೇಪಿಸಿ ಜಾರಿಕೊಳ್ಳುತ್ತವೆ. ಆಲದ ಮರ ಮಾತ್ರ ಸಂತೋಷದಿಂದ ಒಪ್ಪಿಕೊಳ್ಳುತ್ತದೆ. ಗುಬ್ಬಿ ಅಲ್ಲಿ ಗೂಡು ಕಟ್ಟುತ್ತದೆ. ಮುಂದೊಂದು ದಿನ ‘ಗಾಳಿ ಬೀಸಿತು ಮೋಡ ಗುಡುಗಿತು ಮಳೆಯು ಸುರಿಯಿತು...’ ಆದಾಗ ‘ಸ್ಥಳವ ಕೊಡದ ಮಾವಿನ ಮರವು ಧೊಪ್ಪನೆ ಬಿದ್ದಿತ್ತು’ ಆಗುತ್ತದೆ. ಅಂತೆಯೇ ಗೇರುಮರ, ಹಲಸಿನಮರ ಸಹ. ಆದರೆ ಕಾಲುಮುರಿದ ಗುಬ್ಬಿಗೆ ಸ್ಥಳವ ಕೊಟ್ಟ ಆಲದ ಮರ ಮಾತ್ರ ನೆಟ್ಟಗೆ ನಿಂತಿರುತ್ತದೆ, ಗುಬ್ಬಿ ಗೂಡಿನಲ್ಲಿ ಬೆಚ್ಚಗೆ ಕುಳಿತಿರುತ್ತದೆ!


ನೋಡಿ, ವಟಸಾವಿತ್ರೀವ್ರತ ಎಂದು ಕ್ಯಾಲೆಂಡರ್‌ನಲ್ಲಿ ಗುರುತಿಸಿದ ಕೂಡಲೇ ಸತ್ಯವಾನ-ಸಾವಿತ್ರಿ ಕಥೆ, ಆಲದಮರ, ಗುಬ್ಬಿಗೂಡು ಎಲ್ಲ ನೆನಪಾಗುತ್ತವೆ. ನಮ್ಮ ಸಂಸ್ಕೃತಿ-ಸಂಸ್ಕಾರಗಳು ತರಿಸುವ ನೆನಪುಗಳು ಎಷ್ಟು ಚಂದ ಅಲ್ವಾ?


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top