ಸುಧಾಮೂರ್ತಿ ಅವರಿಗೆ ‘ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಚಾರಿಟಬಲ್ ಪ್ರತಿಷ್ಠಾನ’ದ ಪ್ರಶಸ್ತಿ ಪ್ರದಾನ

Upayuktha
0


ಬೆಂಗಳೂರು: ‘ಪ್ರಸ್ತುತ ನಮ್ಮ ದೇಶ ಯಾವ ವಿದೇಶಿ ಶಕ್ತಿಯ ಮೇಲೂ ಅವಲಂಬಿತವಾಗಿಲ್ಲ. ನಿಜಕ್ಕೂ ಸಶಕ್ತರಾಗಿದ್ದೇವೆ. ಇದಕ್ಕೆ ಕಾರಣ ನಮ್ಮ ಹಿರಿಯರು ಮಾಡಿದ ತ್ಯಾಗ ಹಾಗೂ ಗ್ರಾಮೀಣ ಭಾರತದ ಅಭಿವೃದ್ಧಿಗೆ ತೋರಿದ ಅಪಾರ ಕಾಳಜಿ. ಜಸ್ಟೀಸ್ ಕೆ.ಎಸ್. ಹೆಗ್ಡೆ ಅವರು ಉನ್ನತ ಸ್ಥಾನಗಳಲ್ಲಿದ್ದರೂ ಸಣ್ಣ ಗ್ರಾಮದಲ್ಲಿ ನೆಲೆಸಿ, ಆ ಗ್ರಾಮದ ಸಬಲೀಕರಣ ಮಾತ್ರವಲ್ಲ, ಸುತ್ತಣ ಪ್ರದೇಶಗಳ ಯುವ ಜನಾಂಗಕ್ಕೆ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸುವಲ್ಲಿ ಕಾಣಿಕೆ ನೀಡಿದರು. ನಮ್ಮ ದೇಶದ ಹಲವೆಡೆ ಹಿರಿಯರು ಈ ತೆರೆನ ಪ್ರಯತ್ನಗಳನ್ನು ಮಾಡಿದ್ದರಿಂದಲೇ ನಮ್ಮ ಯುವಜನತೆ ಪ್ರಗತಿಯತ್ತ ಮುನ್ನಡೆಯಲು ಸಜ್ಜಾಗಿದೆ. ಇಂದಿನ ಸಂದರ್ಭದಲ್ಲಿ ಸುಧಾಮೂರ್ತಿ ಅವರಂತಹ ವಿಶಾಲ ಹೃದಯಿಗಳು ನಮ್ಮ ಯುವ ಸಮಾಜಕ್ಕೆ ನಿಜಕ್ಕೂ ಮಾರ್ಗದರ್ಶಿಗಳಾಗಿದ್ದಾರೆ. ಸ್ವತಃ ಲೇಖಕಿಯಾದ ಅವರು ಶಿಕ್ಷಕರ ಹೊಣೆಯನ್ನೂ ನಿರ್ವಹಿಸಿದ್ದಾರೆ. ನೈತಿಕತೆಯನ್ನು ರೂಢಿಸಿಕೊಳ್ಳಲು ಪ್ರೇರೇಪಣೆ ನೀಡುತ್ತಿದ್ದಾರೆ" ಎಂದು ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ನುಡಿದರು.


ಅವರಿಗೆ, ದೇಶದ ಉನ್ನತೀಕರಣಕ್ಕೆ ಕೊಡುಗೆ ನೀಡುತ್ತಿರುವ ಅವರ ಉದ್ಯಮ ಸಂಸ್ಥೆಗಳಿಗೆ ನಾವು ಆಭಾರಿಯಾಗಿದ್ದೇವೆ. ಜಸ್ಟೀಸ್ ಕೆ.ಎಸ್. ಹೆಗ್ಡೆ ಅವರ ಸ್ಮರಣಾರ್ಥ ನೀಡಲಾಗುತ್ತಿರುವ ಪ್ರಶಸ್ತಿ ಅವರಿಗೆ ಸಂದಿರುವುದು ಅಪಾರ ಸಂತಸ ತಂದಿದೆ. ಸುಧಾಮೂರ್ತಿ ಅವರಂತಹ ಸಜ್ಜನರಿಂದ ನಮ್ಮ ದೇಶ ಇಡೀ ಜಗತ್ತಿಗೆ ಬಹು ದೊಡ್ಡ ಸಕಾರಾತ್ಮಕ ಸಂದೇಶವನ್ನು ನೀಡುವುದರಲ್ಲಿ ಸಂಶಯವಿಲ್ಲ’ ಎಂದು ಅವರು ನುಡಿದರು.


ಅವರು 2025ನೇ ಸಾಲಿನ ‘ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಚಾರಿಟಬಲ್ ಪ್ರತಿಷ್ಠಾನ’ದ ಪ್ರಶಸ್ತಿಯನ್ನು ರಾಜ್ಯಸಭೆಯ ಸದಸ್ಯೆ, ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಜನಪ್ರಿಯ ಸಾಹಿತಿ ಸುಧಾಮೂರ್ತಿ ಅವರಿಗೆ ಪ್ರದಾನ ಮಾಡಿ ಮಾತನಾಡುತ್ತಿದ್ದರು. 


ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಮತ್ತು ಲೋಕಸಭೆಯ ಸ್ಪೀಕರ್ ಆಗಿ ಗಣನೀಯ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಅವರ ಸ್ಮರಣಾರ್ಥ, ಅವರ ಜನ್ಮದಿನದಂದು ಪ್ರತಿಷ್ಠಾನದ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳ ಏಳಿಗೆಗೆ ಶ್ರಮಿಸಿರುವ ಸಾಧಕರಿಗೆ ಪ್ರತಿ ವರ್ಷ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ತನಕ ಈ ಪ್ರಶಸ್ತಿಗೆ ಪಾತ್ರರಾಗಿರುವ ಗಣ್ಯವ್ಯಕ್ತಿಗಳು– ಡಾ. ಕೆ. ಶಿವರಾಮ ಕಾರಂತ್, ಮೇಧಾ ಪಾಟ್ಕರ್, ಅರುಣ್ ಶೌರಿ, ಡಾ. ಮನಮೋಹನ್ ಸಿಂಗ್, ಡಾ. ಪ್ರಕಾಶ್ ಆಮ್ಟೆ ಹಾಗೂ ಡಾ. ಮಂದಾಕಿನಿ ಆಮ್ಟೆ. ಈ ಸಲ 2025ನೇ ಇಸವಿಯ ಪ್ರಶಸ್ತಿಯನ್ನು ಸಾಹಿತ್ಯ ಹಾಗೂ ಸಾಮಾಜದ ಉನ್ನತೀಕರಣಕ್ಕಾಗಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಸುಧಾಮೂರ್ತಿ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿ ಫಲಕ, ಪ್ರಶಂಸಾಪತ್ರ, ಸ್ಮರಣಿಕೆ ಹಾಗೂ ನಗದು ಪುರಸ್ಕಾರಗಳನ್ನು ಒಳಗೊಂಡಿದೆ.



ಇದೇ ಸಂದರ್ಭದಲ್ಲಿ ಮಾತನಾಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ತಮ್ಮ ಭಾಷಣದಲ್ಲಿ, ‘ನಾನು ಲೋಕಾಯುಕ್ತ ಆಗುವವರೆಗೆ ಜನರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿರಲಿಲ್ಲ. ನಮ್ಮ ಸಮಾಜದ ದೊಡ್ಡ ರೋಗ ಎಂದರೆ ದುರಾಸೆ. ಈ ದುರಾಸೆಯು ಅನೇಕ ಅನಾಹುತಗಳನ್ನುಂಟುಮಾಡಿದೆ. ಆದರೆ ಸುಧಾಮೂರ್ತಿ ಅವರಂತಹ ಸಜ್ಜನರು ದೇಶದ ಸಬಲೀಕರಣಕ್ಕೆ ನೀಡುತ್ತಿರುವ ಕಾಣಿಕೆ ಹಾಗೂ ಅವರು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಹತಾಶೆಯ ನಡುವೆಯೂ ಆಶಾಭಾವನೆಯನ್ನು ಮೂಡಿಸುತ್ತವೆ. ಅದಕ್ಕಾಗಿ ಅವರಿಗೆ ಅಭಿವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ನಮ್ಮ ಯುವ ಜನಾಂಗ ಮೌಲ್ಯಾಧಾರಿತ ಜೀವನ ರೂಪಿಸಿಕೊಳ್ಳಲು ಅವರು ಪ್ರೇರೇಪಿಸಲಿ ಎಂಬುದು ನನ್ನ ಆಶಯ’ ಎಂದು ತಿಳಿಸಿದರು.


ಪ್ರಶಸ್ತಿ ಪುರಸ್ಕೃತ ಸುಧಾಮೂರ್ತಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ‘ಬದುಕಿನಲ್ಲಿ ನಾವು ಧನಕನಕಗಳನ್ನು ಗಳಿಸಿದರೆ ಸಾಲದು. ದುಡಿದು ಸಂಪಾದನೆ ಮಾಡಿದ್ದನ್ನು ಸಾರ್ಥಕ ವಿನಿಯೋಗ ಮಾಡಿದರೆ ನಿಜಕೂ ಅದು ಸಾಧನೆ ಅನ್ನಿಸಿಕೊಳ್ಳುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಮಾತ್ರವಲ್ಲ, ನೈತಿಕತೆಯನ್ನು ಅವರ ಬದುಕಿನಲ್ಲಿ ರೂಢಿಸಿಕೊಳ್ಳುವಂತೆ ಮಾಡಿರುವ ಕೆಲಸ ಬಹಳ ದೊಡ್ಡದು. ಕೆ.ಎಸ್. ಹೆಗ್ಡೆ ಅವರ ಕುಟುಂಬ ನೀಡುತ್ತಿರುವ ಈ ಪ್ರಶಸ್ತಿ ನನ್ನಲ್ಲಿ ಜೀವನೋತ್ಸಾಹವನ್ನು ಹೆಚ್ಚಿಸಿದೆ ಹಾಗೂ ಮತ್ತಷ್ಟು ಜನಮುಖಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರೇಪಿಸಿದೆ. ಪ್ರೀತಿ ಹಾಗೂ ಜನಪರ ಕಾಳಜಿ ನಮ್ಮೆಲ್ಲರಲ್ಲೂ ಶಾಶ್ವತವಾಗಿ ಮೂಡಲಿ. ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗೋಣ’ ಎಂದು ನುಡಿದರು.


ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ  ಪ್ರಶಸ್ತಿಯ ಬಗ್ಗೆ ವಿವರ ನೀಡಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಅವರು ಸುಧಾಮೂರ್ತಿ ಅವರಿಗೆ ಸಲ್ಲಿಸಲಾದ ಪ್ರಶಂಸಾ ಪತ್ರವನ್ನು ಸಮಾರಂಭದಲ್ಲಿ ಸಾದರಪಡಿಸಿದರು.


ಕೊನೆಯಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ (ಆಡಳಿತ) ವಿಶಾಲ್ ಹೆಗ್ಡೆ ಅವರು ವಂದನಾರ್ಪಣೆ ಸಲ್ಲಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಹಿರಿಯ ಸಲಹೆಗಾರರಾದ ಡಾ. ಎನ್.ಆರ್. ಶೆಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top